ಬೆಂಗಳೂರು: ರೌಡಿ ರಘು ಹತ್ಯೆ

Update: 2017-08-22 12:50 GMT

ಬೆಂಗಳೂರು, ಆ.22: ರೌಡಿ ರಘು ಯಾನೆ ಟ್ಯಾಬ್ಲೆಟ್ ರಘುನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿರುವ ದುರ್ಘಟನೆ ಇಲ್ಲಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕುಮಾರಸ್ವಾಮಿ ಲೇಔಟ್‌ನ ಕಾಶಿ ನಗರದಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದ ರಘು, ಸೋಮವಾರ ರಾತ್ರಿ 12:30ರ ಸುಮಾರಿಗೆ ಮಧು ಎಂಬಾತನ ಜೊತೆ ಸೇರಿ ದೇವಾಲಯಕ್ಕೆ ಹೋಗಿ ವಾಪಸ್ ಆಗುತ್ತಿದ್ದಾಗ ನಗರದ ತಲಘಟ್ಟಪುರದ ನೂರು ಅಡಿ ರಸ್ತೆಯಲ್ಲಿ ಕಾರು ಅಡ್ಡಗಟ್ಟಿ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆಗೈದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಮಧು ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಕೊಲೆ, ಕೊಲೆ ಯತ್ನ, ಸುಲಿಗೆ, ದರೋಡೆಗೆ ಯತ್ನ, ಡಕಾಯಿತಿ ಸೇರಿದಂತೆ, 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಟ್ಯಾಬ್ಲೆಟ್ ರಘು, ಕುಮಾರ ಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಣಕಾಸಿನ ವಿಚಾರದಲ್ಲಿ ಸಹಚರನಾಗಿದ್ದ ವಜ್ರ ಯಾನೆ ವಜ್ರೇಶ್ವರಿ ಜೊತೆಗೆ ಇತ್ತೀಚೆಗೆ ಜಗಳ ಮಾಡಿಕೊಂಡು ಬೇರೆಯಾಗಿದ್ದ. ಜಗಳದಿಂದ ವಜ್ರ ಸಹಚರರ ಜೊತೆ ಸೇರಿ ರಘುನನ್ನು ಕೊಲೆ ಮಾಡಿದ್ದಾನೆ ಎನ್ನುವ ಶಂಕೆ ವ್ಯಕ್ತವಾಗಿದೆ.

ವಿಶೇಷ ತಂಡ ರಚನೆ: ಟ್ಯಾಬ್ಲೆಟ್ ರಘು ಕೊಲೆ ಪ್ರಕರಣ ಸಂಬಂಧ ವಜ್ರ ಎಂಬಾತನ ಪತ್ತೆಗಾಗಿ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳನ್ನು ಪತ್ತೆ ಮಾಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News