ಮೇಯರ್ರಿಂದ ಇಂದಿರಾ ಕ್ಯಾಂಟೀನ್ ಪರಿಶೀಲನೆ
ಬೆಂಗಳೂರು, ಆ.22: ಬಿಬಿಎಂಪಿ ಮೇಯರ್ ಪದ್ಮಾವತಿ ಇಂದು ಇಂದಿರಾ ಕ್ಯಾಂಟೀನ್ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಅತ್ತಿಗುಪ್ಪೆಮತ್ತು ನಾಗರಬಾವಿ ವಾರ್ಡ್ಗಳಲ್ಲಿನ ಇಂದಿರಾ ಕ್ಯಾಂಟೀನ್ಗಳಿಗೆ ಬೆಳಗ್ಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಅತ್ತಿಗುಪ್ಪೆ ವಾರ್ಡ್ನ ಇಂದಿರಾ ಕ್ಯಾಂಟೀನ್ಗೆ ಭೇಟಿ ನೀಡಿ ತಿಂಡಿಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಶಾಲಾ ಮಕ್ಕಳು ಮತ್ತು ಹಿರಿಯ ನಾಗರಿಕರನ್ನು ಮಾತನಾಡಿಸಿ, ತಿಂಡಿಯ ಶುಚಿ, ರುಚಿ ಬಗ್ಗೆ ಮಾಹಿತಿಯನ್ನು ಪಡೆದರು. ನಂತರ ಕ್ಯಾಂಟೀನ್ ಒಳ ಆವರಣದಲ್ಲಿನ ಶುಚಿತ್ವವನ್ನು ಪರಿಶೀಲಿಸಿದರು.
ನಾಗರಬಾವಿ ವಾರ್ಡ್ನ ಇಂದಿರಾ ಕ್ಯಾಂಟೀನ್ಗೆ ತೆರಳಿದ ಮೇಯರ್ ಪರಿಶೀಲನೆ ನಡೆಸಿದರು. ಈ ಕ್ಯಾಂಟೀನ್ನಲ್ಲಿ ತಿಂಡಿ ಸೇವಿಸುತ್ತಿದ್ದ ಸರಕಾರಿ ಶಾಲೆಯ ಮಕ್ಕಳ ಬಳಿಗೆ ತೆರಳಿದ ಮೇಯರ್ ತಾವೇ ಖುದ್ದು ಕೆಲ ಮಕ್ಕಳಿಗೆ ಉಪಾಹಾರವನ್ನು ತಿನ್ನಿಸಿದ್ದುದು ವಿಶೇಷವಾಗಿತ್ತು.
ಯಾವುದೇ ಕಾರಣಕ್ಕೂ ತಿಂಡಿ ಊಟ ಖಾಲಿ ಆಗುವವರೆಗೆ ಕ್ಯಾಂಟೀನ್ ಅನ್ನು ಮುಚ್ಚಬಾರದು ಎಂದು ಸಿಬ್ಬಂದಿಗಳಿಗೆ ಸೂಚಿಸಿದರು. ನಂತರ ಇನ್ನೂ ಆರಂಭವಾಗದ ಇಂದಿರಾ ಕ್ಯಾಂಟೀನ್ಗಳಿಗೆ ಭೇಟಿ ನೀಡಿ ಕಾಮಗಾರಿಯನ್ನು ಬೇಗ ಪೂರ್ಣಗೊಳಿಸುವಂತೆ ಆದೇಶಿಸಿದರು.