ಎಲ್.ಎನ್.ಶಾಸ್ತ್ರಿ ನಿಧನಕ್ಕೆ ಮುಖ್ಯಮಂತ್ರಿ ಶೋಕ
Update: 2017-08-30 21:24 IST
ಬೆಂಗಳೂರು, ಆ. 30: ಕನ್ನಡ ಚಲನಚಿತ್ರ ರಂಗದ ಹೆಸರಾಂತ ಗಾಯಕ ಹಾಗೂ ಸಂಗೀತ ನಿರ್ದೇಶಕ ಎಲ್.ಎನ್.ಶಾಸ್ತ್ರಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಎರಡು ದಶಕಗಳಿಂದ ನೂರಾರು ಚಿತ್ರಗಳ ಸಾವಿರಾರು ಗೀತೆಗಳಿಗೆ ಧ್ವನಿಯಾಗಿದ್ದ ಶಾಸ್ತ್ರಿ, ಕನ್ನಡ ಚಲನಚಿತ್ರ ಸಂಗೀತ ಲೋಕದಲ್ಲಿ ತಮ್ಮ ವಿಶಿಷ್ಟ ಸ್ವರ ಮಾಧುರ್ಯದ ಮೂಲಕ ಪ್ರೇಕ್ಷಕರ ಹೃನ್ಮನಗಳನ್ನು ಸೆಳೆದಿದ್ದರು. ಗಾಯಕನಾಗಿ ಮಾತ್ರವಲ್ಲದೆ, ಸಂಗೀತ ನಿರ್ದೇಶಕನಾಗಿಯೂ ಅಪಾರ ಜನ ಮನ್ನಣೆ ಗಳಿಸಿದ್ದರು.
ಕೆಲ ಕಾಲದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶಾಸ್ತ್ರಿ ಅವರು ತಮ್ಮ 47ನೆ ಜನ್ಮದಿನದ ಮಾರನೆ ದಿನವೇ ಇಹಲೋಹ ತ್ಯಜಿಸಿದ್ದು, ನನ್ನಲ್ಲಿ ಅತ್ಯಂತ ನೋವನ್ನು ಉಂಟು ಮಾಡಿದೆ ಎಂದು ಸಿದ್ದರಾಮಯ್ಯ ಬಣ್ಣಿಸಿದ್ದಾರೆ.