ಮಕ್ಕಳ ಬಗ್ಗೆ ‘ಕೀಳುಮಟ್ಟ’ದ ಹೇಳಿಕೆ ನೀಡಿದ ಆದಿತ್ಯನಾಥ್ ಸಿಎಂ ಸ್ಥಾನಕ್ಕೆ ಯೋಗ್ಯರಲ್ಲ: ಕಾಂಗ್ರೆಸ್
ಲಕ್ನೋ, ಆ.31: “ಮಕ್ಕಳ ರಕ್ಷಣೆ ಸರಕಾರದ ಜವಾಬ್ದಾರಿಯೇ?, ಜನರು ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳ ಜವಾಬ್ದಾರಿಯನ್ನೂ ಸರಕಾರಕ್ಕೆ ವಹಿಸಬಹುದು” ಎಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷ ಆದಿತ್ಯನಾಥ್ ಸೂಕ್ಷ್ಮತೆಯಿಲ್ಲದ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ ಎಂದಿದೆ. ಮಕ್ಕಳ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ ಆದಿತ್ಯನಾಥ್ ಸಿಎಂ ಸ್ಥಾನಕ್ಕೆ ಯೋಗ್ಯರಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಮಾತನಾಡಿದ ಆಮ್ ಆದ್ಮಿ ಪಕ್ಷದ ವಕ್ತಾರರಾದ ವೈಭವ್ ಮಹೇಶ್ವರಿ, ಆದಿತ್ಯನಾಥ್ ರಂತಹ ನಾಯಕರ ಭದ್ರತೆ ಹಾಗೂ ಇತರ ಖರ್ಚು ವೆಚ್ಚಗಳಿಗಾಗಿ ಜನರು ತೆರಿಗೆ ಕಟ್ಟುತ್ತಾರೆ ಎನ್ನುವುದು ಅವರಿಗೆ ನೆನಪಿರಬೇಕು. ಜನರನ್ನು ಅಪಹಾಸ್ಯ ಮಾಡುವ ಬದಲಿಗೆ ಅವರು ಕೃತಜ್ಞತೆ ಸಲ್ಲಿಸಬೇಕು” ಎಂದು ಹೇಳಿದ್ದಾರೆ.
ತಮ್ಮ ‘ಸ್ಟಾರ್ಟ್ ಅಪ್' ಯಾತ್ರಾದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದ ಆದಿತ್ಯನಾಥ್, ಮಕ್ಕಳಿಗೆ ಒಂದೆರಡು ವರ್ಷಗಳಾದಾಗ ಹೆತ್ತವರು ಅವರ ಜವಾಬ್ದಾರಿಯನ್ನು ಸರಕಾರಕ್ಕೆ ಬಿಟ್ಟು ಕೊಡಬಹುದೆಂದು ಕೆಲವೊಮ್ಮೆ ನನಗನಿಸುತ್ತದೆ,'' ಎಂದು ಹೇಳಿದ್ದರು.
ಆದಿತ್ಯನಾಥ್ ಹೇಳಿಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್. ಮುಖ್ಯಮಂತ್ರಿಯ ಹೇಳಿಕೆ ನಿಂದನಾತ್ಮಕವಾಗಿದೆ. ಇಂತಹ ಯೋಚನೆಗಳನ್ನು ಹೊಂದಿರುವ ವ್ಯಕ್ತಿ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಬಾರದು,'' ಎಂದಿದ್ದಾರೆ.
``ಗೋರಖ್ ಪುರ ಆಸ್ಪತ್ರೆಯಲ್ಲಿ ಹಲವಾರು ಮಕ್ಕಳು ಸಾವಿಗೀಡಾಗಿರುವ ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಯ ಹೇಳಿಕೆ ತಮ್ಮ ಮಕ್ಕಳನ್ನು ಕಳೆದುಕೊಂಡ ಹೆತ್ತವರಿಗೆ ತೀವ್ರ ನೋವನ್ನುಂಟು ಮಾಡುವುದು,'' ಎಂದು ಮಾಜಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಟ್ವೀಟ್ ಮಾಡಿದ್ದಾರೆ.