ದಿಲ್ಲಿ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ | ಪೋಷಕರಿಗೆ ಭೀತಿ; ಎರಡನೆ ದಿನವೂ ವಿರಳ ಹಾಜರಾತಿ

Update: 2024-05-02 15:24 GMT

PC : PTI 

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ 200ಕ್ಕೂ ಅಧಿಕ ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಗುರುವಾರ ಅಲ್ಲಿನ ಶಾಲೆಗಳಲ್ಲಿ ವಿದ್ಯಾರ್ಥಿಗಳ ಅತ್ಯಂತ ವಿರಳ ಹಾಜರಾತಿಯಿತ್ತು.

ಶಾಲಾ ಕ್ಯಾಂಪಸ್ನ ಆವರಣಗಳಲ್ಲಿ ಬಾಂಬ್ ಇರಿಸಲಾಗಿದೆಯೆಂಬ ಇಮೇಲ್ ಬೆದರಿಕೆ ಸಂದೇಶವನ್ನು ದಿಲ್ಲಿ- ರಾಷ್ಟ್ರ ರಾಜಧಾನಿ ಪ್ರದೇಶ (ಎನ್ಸಿಆರ್)ದಾದ್ಯಂತ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ಬಂದಿದ್ದವು. ಆದರೆ ಅವು ಹುಸಿಯೆಂದು ತನಿಖೆಯಿಂದ ತಿಳಿದುಬಂದಿತ್ತಾದರೂ, ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಭಯವನ್ನು ಸೃಷ್ಟಿಸಿತು. ಹಲವಾರು ಶಾಲೆಗಳು ಪೋಷಕರಿಗೆ ಸಂದೇಶಗಳನ್ನು ಕಳುಹಿಸಿ, ಅವರ ಮಕ್ಕಳನ್ನು ಶಾಲೆಗಳೆ ಕಳುಹಿಸದಂತೆ ತಿಳಿಸಿದ್ದವು. ಇನ್ನು ಕೆಲವು ಶಾಲೆಗಳು ತರಗತಿಗಳನ್ನು ರದ್ದುಪಡಿಸಿ, ಮಕ್ಕಳನ್ನು ಕರೆದುಕೊಂಡು ಹೋಗುವಂತೆ ಪೋಷಕರಿಗೆ ಸೂಚಿಸಿದ್ದವು.

ಗುರುವಾರ ಶಾಲೆಗಳು ಎಂದಿನಂತೆ ಪುನಾರಂಭಗೊಂಡರೂ, ಪಾಲಕರು ಬಾಂಬ್ ಬೆದರಿಕೆಯ ಭೀತಿಗೊಳಗಾಗಿದ್ದರಿಂದ ಹಲವಾರು ವಿದ್ಯಾರ್ಥಿಗಳು ಶಾಲೆಗೆ ಗೈರುಹಾಜರಾಗಿದ್ದರು. ಬಾಂಬ್ ಬೆದರಿಕೆಯ ಇಮೇಲ್ಗಳು ಬಾರದೇ ಇದ್ದ ಶಾಲೆಗಳಲ್ಲಿ ಇಂದು ವಿರಳ ಹಾಜರಾತಿಯಿದ್ದುದಾಗಿ ವರದಿಗಳು ತಿಳಿಸಿವೆ.

ಬಾಂಬ್ ಬೆದರಿಕೆಯಂತಹ ಸನ್ನಿವೇಶಗಳಲ್ಲಿ ವಿದ್ಯಾರ್ಥಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯ ಅಣಕು ಕವಾಯತನ್ನು ನಡೆಸುವ ಬಗ್ಗೆ ಹಲವಾರು ಶಾಲಾ ಆಡಳಿತಗಳು ಪರಿಶೀಲನೆ ನಡೆಸಿರುವುದಾಗಿ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News