×
Ad

ಅಬ್ದುಲ್ ಕರೀಂ ತೆಲಗಿ ವಿರುದ್ಧ ದಾಖಲಾಗಿದ್ದ 34 ಪ್ರಕರಣ ಇತ್ಯರ್ಥಪಡಿಸಿದ ಹೈಕೋರ್ಟ್

Update: 2017-09-05 21:29 IST

ಬೆಂಗಳೂರು, ಆ.5: ನಕಲಿ ಛಾಪಾಕಾಗದ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದಲ್ಲಿ ಅಬ್ದುಲ್ ಕರೀಂ ತೆಲಗಿ ವಿರುದ್ಧ ದಾಖಲಾಗಿದ್ದ ಒಟ್ಟು 34 ಪ್ರಕರಣಗಳನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ. ಅಲ್ಲದೆ, ತೆಲಗಿಗೆ ಅಧೀನ ನ್ಯಾಯಾಲಯವು ವಿಧಿಸಿದ್ದ 10 ವರ್ಷ ಜೈಲು ಶಿಕ್ಷೆಯನ್ನು ಖಾಯಂಗೊಳಿಸಿದೆ. ನಕಲಿ ಛಾಪಾಕಾಗದ ಹಗರಣ ಸಂಬಂಧ ತೆಲಗಿ ವಿರುದ್ಧ ಚೆನ್ನೈ, ಅಲಹಾಬಾದ್, ಹೊಸದಿಲ್ಲಿ, ಮುಂಬೈ ಮತ್ತು ಪುಣೆಯಲ್ಲಿ ದಾಖಲಾಗಿರುವ ಪ್ರಕರಣಗಳು ಅಲ್ಲಿನ ಸ್ಥಳೀಯ ನ್ಯಾಯಾಲಯಗಳಲ್ಲಿ ಇನ್ನೂ ವಿಚಾರಣೆ ಹಂತದಲ್ಲಿರುವಾಗಲೇ ರಾಜ್ಯ ಹೈಕೋರ್ಟ್ ತೆಲಗಿ ವಿರುದ್ಧದ 34 ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಿ ಇತ್ಯರ್ಥಪಡಿಸಿದೆ.

ನಕಲಿ ಛಾಪಾಕಾಗದ ಸೃಷ್ಟಿಸಿ ಮಾರಾಟ ಮಾಡಿದ ಆರೋಪಗಳ ಸಂಬಂಧ 1997ರಿಂದ 2000ರ ನಡುವೆ ನಗರದ ಯಶವಂತಪುರ, ಸಿಟಿ ಮಾರುಕಟ್ಟೆ, ಉಪ್ಪಾರಪೇಟೆ ಮತ್ತು ಮಡಿವಾಳ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ 34 ಪ್ರಕರಣಗಳು ತೆಲಗಿ ವಿರುದ್ಧ ದಾಖಲಾಗಿದ್ದವು. ಈ ಎಲ್ಲ ಪ್ರಕರಣಗಳಲ್ಲಿ 2009-2010ರ ಅವಧಿಯಲ್ಲಿ ಅಧೀನ ನ್ಯಾಯಾಲಯವು ತೆಲಗಿಗೆ ಕನಿಷ್ಠ ಎರಡು ವರ್ಷಗಳಿಂದ ಗರಿಷ್ಠ 10 ವರ್ಷದವರೆಗೆ ಶಿಕ್ಷೆ ವಿಧಿಸಿತ್ತು. ಹೀಗಾಗಿ ತಮಗೆ ವಿಧಿಸಲಾದ ಶಿಕ್ಷೆ ರದ್ದು ಕೋರಿ ತೆಲಗಿ ಮತ್ತು ಸಹ ಆರೋಪಿಗಳು ಹೈಕೋರ್ಟ್‌ಗೆ ಪ್ರತ್ಯೇಕ ಕ್ರಿಮಿನಲ್ ಮೇಲ್ಮನವಿಗಳನ್ನು ಸಲ್ಲಿಸಿದ್ದರು.

ಈ ಎಲ್ಲ ಅರ್ಜಿಗಳು ಕಳೆದ ಏಳು ವರ್ಷಗಳಿಂದ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿಯಿದ್ದವು. ಆದರೆ, ನ್ಯಾಯಮೂರ್ತಿ ರವಿ ಮಳೀಮಠ ಮತ್ತು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠವು ಕಳೆದ ಎಂಟು ವಾರಗಳಿಂದ ಸತತವಾಗಿ ವಿಚಾರಣೆ ನಡೆಸಿ ಪೈಕಿ ಸಿಟಿ ಮಾರುಕಟ್ಟೆ, ಉಪ್ಪಾರಪೇಟೆ ಮತ್ತು ಮಡಿವಾಳ ಠಾಣೆಗಳಲ್ಲಿ ದಾಖಲಾಗಿದ್ದ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದ ವಿಚಾರಣೆ ಪೂರ್ಣಗೊಳಿಸಿ ಇತ್ಯರ್ಥಪಡಿಸಿತ್ತು. ಅಲ್ಲದೆ, ಯಶವಂತಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಅಧೀನ ನ್ಯಾಯಾಲಯ ವಿಧಿಸಿದ್ದ 10 ವರ್ಷ ಜೈಲು ಶಿಕ್ಷೆ ಮತ್ತು 61 ಸಾವಿರ ರೂ. ದಂಡವನ್ನು ರದ್ದುಪಡಿಸುವಂತೆ ಪ್ರಶ್ನಿಸಿ ತೆಲಗಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ಇತ್ಯರ್ಥಪಡಿಸಿತು.

ಅಧೀನ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ತೆಲಗಿಯೂ ಈಗಾಗಲೇ 16 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾನೆ. ಹೀಗಾಗಿ ಮೇಲ್ಮನವಿಯನ್ನು ಪ್ರಕರಣದ ಮೆರಿಟ್ ಮೇಲೆ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ತಿಳಿಸಿದ ನ್ಯಾಯಪೀಠ ಶಿಕ್ಷೆಯನ್ನು ಖಾಯಂಗೊಳಿತು. ಬಳಿಕ ಈ ಮಧ್ಯೆ 61 ಸಾವಿರ ರೂ.ದಂಡ ವಿಧಿಸಿದ್ದ ಅಧೀನ ನ್ಯಾಯಾಲಯ, ದಂಡ ಪಾವತಿಸಲು ವಿಫಲವಾದರೆ 13 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಬೇಕು ಎಂದು ಆದೇಶಿಸಿತ್ತು. ಆದರೆ, ತೆಲಗಿ ದಂಡ ಪಾವತಿಸಿಲ್ಲ. ಪರಿಣಾಮ ಅನುಭವಿಸಬೇಕಿದ್ದ 13 ವರ್ಷಗಳ ಪೈಕಿ ಸುಮಾರು ಐದೂವರೆ ವರ್ಷ ಸಜೆ ಅನುಭವಿಸಿದ್ದಾರೆ. ಒಂದು ವರ್ಷ ಜೈಲಿಗೆ ಐದು ಸಾವಿರ ರೂ. ದಂಡ ಪಾವತಿಯನ್ನು ಕಡಿತಗೊಳಿಸಲಾಗಿದ್ದು, ಉಳಿದ 36 ಸಾವಿರ ರೂ. ದಂಡವನ್ನು ಎರಡು ತಿಂಗಳಲ್ಲಿ ಪಾವತಿಸಬೇಕು. ಇಲ್ಲವೇ ಸುಮಾರು ಏಳೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಬೇಕು. ಒಂದೊಮ್ಮೆ ದಂಡ ಪಾವತಿಸಿದ ಪಕ್ಷದಲ್ಲಿ ಇನ್ನಿತರ ಯಾವುದೇ ಪ್ರಕರಣದಲ್ಲಿ ಬಂಧನದ ಅಗತ್ಯವಿಲ್ಲವಾದ ಸಂದರ್ಭದಲ್ಲಿ ಪೊಲೀಸರು ತೆಲಗಿಯನ್ನು ಬಿಡುಗಡೆ ಮಾಡಬಹುದು ಎಂದು ಆದೇಶಿಸಿದೆ.

ಅದರಂತೆ ತೆಲಗಿ ಪರ ವಕೀಲರು 36 ಸಾವಿರ ದಂಡವನ್ನುಪಾವತಿಸಲು ಎರಡು ತಿಂಗಳ ಕಾಲಾವಕಾಶ ಪಡೆದುಕೊಂಡಿದ್ದಾರೆ. ಹೀಗಾಗಿ, ದಂಡ ಪಾವತಿಸಿದರೆ ತೆಲಗಿಯು ಕರ್ನಾಟಕದಲ್ಲಿ ದಾಖಲಾಗಿದ್ದ ಪ್ರಕರಣಗಳ ಸಂಬಂಧ ಬಿಡುಗಡೆಯಾಗಬಹುದು.


ತೆಲಗಿ ವಿರುದ್ಧ 34 ಪ್ರಕರಣಗಳು ವಿಚಾರಣೆಗೆ ಬಾಕಿಯಿದ್ದವು. ಜುಲೈ 3ನೆ ವಾರದಿಂದ ಸತತವಾಗಿ ತೆಲಗಿ ವಿರುದ್ಧದ ಪ್ರಕರಣಗಳನ್ನು ನ್ಯಾಯಮೂರ್ತಿ ರವಿ ಮಳೀಮಠ ಮತ್ತು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರು ವಿಚಾರಣೆ ನಡೆಸಿದರು. ಮಂಗಳವಾರದವರೆಗೆ ಮಡಿವಾಳ, ಉಪ್ಪಾರಪೇಟೆ ಮತ್ತು ಸಿಟಿ ಮಾರುಕಟ್ಟೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ಇತ್ಯರ್ಥಪಡಿಸಿದ್ದ ಪೀಠ, ಮಂಗಳವಾರ ಯಶವಂತಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಇತ್ಯರ್ಥಪಡಿಸಿತು. ಅದರೊಂದಿಗೆ ರಾಜ್ಯದಲ್ಲಿ ತೆಲಗಿ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ. ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಸಂಖ್ಯೆ ತೀವ್ರ ಕೊರತೆ ಇರುವ ಸಂದರ್ಭದಲ್ಲಿ ಈ ಎಂಟು ವಾರದಲ್ಲಿ ಪ್ರಕರಣ ಕುರಿತು 18 ಸಾವಿರ ದೋಷಾರೋಪ ಪಟ್ಟಿಯನ್ನು ನ್ಯಾಯಪೀಠ ತೆಲಗಿ ವಿರುದ್ಧದ ಪ್ರಕರಣಗಳನ್ನು ಇತ್ಯರ್ಥಪಡಿಸಿದೆ.
-ಪಿ.ಪ್ರಸನ್ನ ಕುಮಾ್, ಸಿಬಿಐ ಪರ ವಕೀಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News