ತುಮಕೂರು-ಚಿತ್ರದುರ್ಗ ಜಿಲ್ಲೆಗಳಿಗೆ ನೀರು ಪೂರೈಕೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಸೆ.7: ತುಮಕೂರು ಜಿಲ್ಲೆಯ ಪಾವಗಡ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು, ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಹಾಗೂ ಹೊಸಪೇಟೆ ತಾಲೂಕಿನ ಕೆಲ ಹಳ್ಳಿಗಳು ಮತ್ತು ಚಿತ್ರದುರ್ಗ ತಾಲೂಕಿನ ತುರವನೂರು ಹೋಬಳಿಗೆ ನೀರು ಪೂರೈಸುವ 2250 ಕೋಟಿ ರೂ. ವೆಚ್ಚದ ಯೋಜನೆಯ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಈ ಯೋಜನೆ ಸಂಬಂಧ ತುಮಕೂರು ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿ ಮಾತನಾಡಿದ ಅವರು, ಪಾವಗಡ, ಚಳ್ಳಕೆರೆ, ಮೊಳಕಾಲ್ಮೂರು, ಕೂಡ್ಲಿಗಿ, ಹೊಸಪೇಟೆ ತಾಲೂಕಿನ ಕೆಲ ಹಳ್ಳಿಗಳು ಮತ್ತು ಚಿತ್ರದುರ್ಗ ತಾಲೂಕಿನ ತುರವನೂರು ಹೋಬಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಬಜೆಟ್ನಲ್ಲಿ ಘೋಷಿಷಲಾಗಿತು್ತ ಎಂದು ಹೇಳಿದರು.
ಈ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ನೀರಿನಲ್ಲಿ ಫ್ಲೋರೈಡ್ ಅಂಶ ಕಾಣಿಸಿಕೊಂಡಿದೆ. ಇದರಿಂದ ಜನ ತೊಂದರೆಗೆ ಸಿಲುಕಿದ್ದಾರೆ. ಹೀಗಾಗಿ ಯೋಜನೆಯನ್ನು ತ್ವರಿತವಾಗಿ ಜಾರಿಗೆ ತರಲು ಸರಕಾರ ಮುಂದಾಗಿದೆ. ಈ ಸಂಬಂಧ ಗ್ರಾಮೀಣ ಅಭಿವೃದ್ಧಿ ಇಲಾಖೆ ಸಂಪೂರ್ಣವಾದ ಯೋಜನಾ ವರದಿ ತಯಾರು ಮಾಡಿದೆ. ಸಚಿವ ಸಂಪುಟದ ಮುಂದಿನ ಸಭೆಯಲ್ಲಿ ಪ್ರಸ್ತಾವನೆ ಮಂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಒಪ್ಪಿಗೆ ಸಿಕ್ಕ ಕೂಡಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದರು.
ಕುಡಿಯುವ ನೀರು ಪೂರೈಕೆಯಾಗುವ ಐದು ತಾಲೂಕುಗಳ ಜನಸಂಖ್ಯೆ ಸುಮಾರು ಹತ್ತು ಲಕ್ಷದಷ್ಟಿದೆ. ಯೋಜನಾ ವರದಿಯನ್ನು 2050ರ ವರೆಗೆ ಅನ್ವಯ ಆಗುವಂತೆ ತಯಾರಿಸಿದ್ದು, ಒಟ್ಟು 2250 ಕೋಟಿ ರೂ.ವೆಚ್ಚವಾಗಬಹುದು ಎಂದು ಅಂದಾಜು ಮಾಡಲಾಗಿದೆ ಎಂದರು.
ಹತ್ತು ಲಕ್ಷ ಜನಸಂಖ್ಯೆ ಪೈಕಿ ಶೇ.50ಕ್ಕೂ ಅಧಿಕ ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ ಎಸ್ಸಿಪಿ, ಟಿಎಸ್ಪಿಕಾರ್ಯಕ್ರಮದಲ್ಲಿ ಅನುದಾನ ಒದಗಿಸಲು ನಿರ್ಧರಿಸಿದೆ. 704 ಕೋಟಿ ರೂ.ಬಿಡುಗಡೆ ಮಾಡಲು ಈಗಾಗಲೆ ಒಪ್ಪಿಗೆ ಸಿಕ್ಕಿದೆ. ಉಳಿದ ಹಣವನ್ನು ಬೇರೆ ಮೂಲದಿಂದ ಒದಗಿಸಲಾ ಗುವುದು ಎಂದು ವಿವರಿಸಿದರು.
ತುಂಗಭದ್ರಾ ಹಿನ್ನೀರಿನಲ್ಲಿ 2 ಟಿಎಂಸಿಯನ್ನು ಯೋಜನೆಗೆ ಬಳಸಿಕೊಳ್ಳಲಾಗುವುದು. ಹೊಸಪೇಟೆ ಬಳಿ ನೀರು ಪಂಪ್ ಮಾಡಿ, ಶುದ್ಧೀಕರಣದ ಬಳಿಕ ಕೊಳವೆಗಳ ಮೂಲಕ ಪೂರೈಕೆ ಮಾಡಲಾಗುವುದು. ನೀರು ಹರಿಯುವ ಕೊಳವೆ ಮಾರ್ಗ ಹೊಸಪೇಟೆಯಿಂದ ಪಾವಗಡವರೆಗೆ 230 ಕಿ.ಮೀ ಹಾದು ಹೋಗಲಿದೆ. ಕುಡಿಯುವ ನೀರಿನ ಯೋಜನೆ 230 ಕಿ.ಮೀ ವರೆಗೆ ಹೋದ ನಿರ್ದನ ಇಲ್ಲ ಎಂದ ಅವರು, ಎರಡು ಪಟ್ಟಣಗಳ ಜೊತೆಗೆ 1170 ಹಳ್ಳಿಗಳಿಗೆ ಇದರಿಂದ ಪ್ರಯೋಜನವಾಗಲಿದೆ. ಜನರ ಜೊತೆಗೆ ಜಾನುವಾರುಗಳಿಗೂ ನೀರು ಒದಗಿಸಲಾಗುವುದು. ಇದರಿಂದ ಅಂತರ್ಜಲ ಮಟ್ಟವೂ ವೃದ್ಧಿಯಾಗುತ್ತದೆ. ಸುಮಾರು ಎರಡು ವರ್ಷದಲ್ಲಿ ಯೋಜನೆ ಪೂರ್ಣವಾಗಲಿದೆ. ಇಂತಹ ಯೋಜನೆ ಬಗ್ಗೆ ಯಾರೂ ಆಲೋಚನೆ ಮಾಡಿರಲಿಲ್ಲ. ಆದರೆ, ನಾವು ಜಾರಿಗೆ ತರುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ನಿಮ್ಮ ಅವಧಿಯಲ್ಲೇ ಯೋಜನೆ ಪೂರ್ಣಗೊಳಿಸಬಹುದಿತ್ತಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಬೃಹತ್ ಯೋಜನೆಯಾಗಿದ್ದು, ಪೂರ್ಣಗೊಳ್ಳಲು ಎರಡು ವರ್ಷ ಬೇಕೇ ಬೇಕು. ಇಷ್ಟಕ್ಕೂ ನಮ್ಮ ಅವಧಿ ಇನ್ನೂ 8 ತಿಂಗಳಿದೆ. ಮುಂದೆಯೂ ನಾವೇ ಅಧಿಕಾರ್ಕಕೆ ಬರುತ್ತೇವೆ. ಹೀಗಾಗಿ 8 ತಿಂಗಳ ಜೊತೆಗೆ ಇನ್ನೂ ಐುದು ವರ್ಷ ಸಿಗಲಿದೆ ಎಂದರು.
ಚಳವಳಿ ಕೈ ಬಿಡಲು ದೂರವಾಣಿ ಮೂಲಕ ಮನವಿ: ಕುಡಿಯುವ ನೀರಿನ ಯೋಜನೆಗೆ ಆಗ್ರಹಿಸಿ ಪಾವಗಡದಲ್ಲಿ ಚಳವಳಿ ನಡೆಯುತ್ತಿದೆ. ಚಳವಳಿಯ ನೇತೃತ್ವ ವಹಿಸಿರುವ ಮುಖಂಡರಿಗೆ ಪತ್ರಿಕಾಗೋಷ್ಠಿಯಲ್ಲೇ ದೂರವಾಣಿ ಮೂಲಕ ಕರೆ ಮಾಡಿದ ಮುಖ್ಯಮಂತ್ರಿ, ಯೋಜನೆ ಕುರಿತು ಇಂದಿನ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ. ಟೆಂಡರ್ ಕರೆಯಲು ಸಿದ್ಧತೆಯಾಗಿದೆ. ಹೀಗಾಗಿ ಚಳವಳಿ ವಾಪಸ್ ಪಡೆದುಕೊಳ್ಳಿ ಎಂದು ಕೋರಿದರು.
ಸಭೆಯಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್, ಶಾಸಕರಾದ ತಿಮ್ಮರಾಯಪ್ಪ, ವಿ.ಎಸ್.ಉಗ್ರಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು