×
Ad

ಪೊಲೀಸ್ ಪೇದೆ ಮೇಲೆ ಹಲ್ಲೆ: ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಪುತ್ರ ಸೇರಿ ನಾಲ್ವರ ಬಂಧನ

Update: 2017-09-17 20:07 IST

ಬೆಂಗಳೂರು, ಸೆ. 17: ಮದ್ಯದಂಗಡಿಯಲ್ಲಿ ಕುಡಿದು ಜಗಳ ನಡೆಯುತ್ತಿದ್ದನ್ನು ಪ್ರಶ್ನಿಸಿದ ಪೊಲೀಸ್ ಪೇದೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು ಪುತ್ರ ಸೇರಿ ನಾಲ್ವರನ್ನು ಇಲ್ಲಿನ ಮಲ್ಲೇಶ್ವರಂ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿಯ ಚಿ.ನಾ.ರಾಮು ಪುತ್ರ ಕಾರ್ಲ್‌ಮಾರ್ಕ್ಸ್ (21), ಈತನ ಸ್ನೇಹಿತರಾದ ಶ್ರೇಯಸ್ (22), ಚೇತನ್ (20) ಮತ್ತು ಕೇಶವ (23) ಎಂಬವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿಗಳ ವಿರುದ್ಧ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ, ಮಾರಣಾಂತಿಕ ಹಲ್ಲೆ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಘಟನೆ ಸಂಬಂಧ ನಗರದ ಮಲ್ಲೇಶ್ವರಂ ಠಾಣೆ ಪೇದೆ ಉಮೇಶ್ ಎಂಬವರಿಗೆ ಗಂಭೀರ ಗಾಯವಾಗಿದ್ದು, ಇಲ್ಲಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ರೀತಿ, ಆರೋಪಿಗಳು ಗೃಹರಕ್ಷಕ ದಳದ ಸಿಬ್ಬಂದಿ ರುದ್ರೇಶ್ ಮೇಲೂ ಹಲ್ಲೆ ನಡೆಸಿದ್ದು, ಅವರಿಗೆ ಸಣ್ಣಪುಟ್ಟ ಗಾಯವಾಗಿವೆ ಎಂದು ತಿಳಿದು ಬಂದಿದೆ.

ಘಟನೆ ವಿವರ:  ಶನಿವಾರ ರಾತ್ರಿ ತನ್ನ ಮೂವರು ಸ್ನೇಹಿತರೊಂದಿಗೆ ಚಿ.ನಾ.ರಾಮು ಪುತ್ರ ಕಾರ್ಲ್‌ಮಾರ್ಕ್ಸ್ ನಗರದ ಮಲ್ಲೇಶ್ವರಂ 8ನೆ ಮುಖ್ಯರಸ್ತೆಯ 16ನೆ ಅಡ್ಡರಸ್ತೆಯಲ್ಲಿರುವ ‘ವೈಕಿಂಗ್ ಮದ್ಯದಂಗಡಿಗೆ ಮದ್ಯ ಸೇವಿಸಲು ಹೋಗಿದ್ದ. ಮದ್ಯ ಸೇವಿಸಿದ ಬಳಿಕ ತಡರಾತ್ರಿ 1:20ರ ಸುಮಾರಿಗೆ ನೀರಿನ ಬಾಟಲಿ ವಿಚಾರಕ್ಕೆ ಮದ್ಯದಂಗಡಿಯ ಸಿಬ್ಬಂದಿ ಜೊತೆ ತೆಗೆದಿದ್ದಾರೆ ಎನ್ನಲಾಗಿದೆ.

ಬಳಿಕ ಸಿಬ್ಬಂದಿ ಮತ್ತು ಆರೋಪಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಜಗಳ ಕೈ-ಕೈ ಮೀಲಾಯಿಸುವ ಹಂತಕ್ಕೆ ಹೋಗಿದೆ.ಇದನ್ನು ಗಮನಿಸಿದ ಮಲ್ಲೇಶ್ವರಂ ಠಾಣೆ ಪೇದೆ ಉಮೇಶ್ ಮತ್ತು ರುದ್ರೇಶ್, ಆರೋಪಿಗಳನ್ನು ಠಾಣೆಗೆ ನಡೆಯುವಂತೆ ಸೂಚಿಸಿದ್ದರು. ಇಷ್ಟಕ್ಕೆ ಕೋಪಗೊಂಡ ಚಿ.ನಾ.ರಾಮು ಪುತ್ರ ಕಾರ್ಲ್‌ಮಾರ್ಕ್ಸ್, ‘ಯಾರ ಮಗ ಗೊತ್ತಾ?’ ಎಂದು ಪ್ರಶ್ನಿಸಿದ್ದಾನೆ ಎಂದು ಹೇಳಲಾಗಿದೆ.

ಮದ್ಯದ ಅಮಲಿನಲ್ಲಿ ಪೊಲೀಸ್ ಪೇದೆಯನ್ನು ನಿಂದಿಸಿದ್ದಾರೆ. ಬಳಿಕ ಓರ್ವನಿಗೆ ಲಾಠಿಯಲ್ಲಿ ಹೊಡೆದು ಠಾಣೆಗೆ ಕರೆದುಕೊಂಡು ಹೋಗಲು ಮುಂದಾದ ವೇಳೆ ನಾಲ್ವರು ಸೇರಿ ಉಮೇಶ್ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಉಮೇಶ್ ಸ್ಥಳದಲ್ಲೇ ಕುಸಿದು ಬಿದಿದ್ದರು ಎಂದು ಮೂಲಗಳು ತಿಳಿಸಿವೆ.

ಪೇದೆ ಜತೆಗಿದ್ದ ರುದ್ರೇಶ್ ಹೊಯ್ಸಳ ಮತ್ತು ಠಾಣೆಗೆ ವಿಷಯ ಮುಟ್ಟಿಸಿದಾಗ ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ ಪೇದೆ ಉಮೇಶ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಲ್ಲಿ ಉಮೇಶ್ ಎಡಕಣ್ಣು, ಕತ್ತಿನ ಭಾಗದಲ್ಲಿ ಗಾಯವಾಗಿದೆ ಎನ್ನಲಾಗಿದೆ.

ಈ ಸಂಬಂಧ ತಡರಾತ್ರಿಯಾದರೂ ಮದ್ಯದಂಗಡಿ ಮುಚ್ಚದ ಮಾಲಕನ ವಿರುದ್ಧವೂ ಮೊಕದ್ದಮೆ ದಾಖಲಿಸಲಾಗಿದೆ ಎಂದು ಮಲ್ಲೇಶ್ವರಂ ಠಾಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News