ಹುಟ್ಟೂರಿನ ಕಾಡುವಿಕೆಯೇ ಬರವಣಿಗೆಗೆ ಪ್ರೇರಣೆ: ಜಯಂತ್ ಕಾಯ್ಕಿಣಿ
ಬೆಂಗಳೂರು, ಸೆ.23: ಕಾಲೇಜಿನ ವಿದ್ಯಾಭ್ಯಾಸಕ್ಕಾಗಿ ಕುಮುಟಾದ ಹಾಸ್ಟೆಲ್ಗೆ ಸೇರಿದಾಗ ನನ್ನ ಹುಟ್ಟೂರು ಗೋಕರ್ಣ ತೀವ್ರವಾಗಿ ಕಾಡತೊಡಗಿತು. ನನಗೆ ಕಾಡಿದ ಆ ಭಾವನೆಗಳೇ ಬರವಣಿಗೆಗೆ ಪ್ರೇರೇಪಣೆ ನೀಡಿತು ಎಂದು ಕತೆಗಾರ ಜಯಂತ ಕಾಯ್ಕಿಣಿ ತಮ್ಮ ಬಾಲ್ಯದ ಅನುಭವಗಳನ್ನು ಹಂಚಿಕೊಂಡರು.
ಶನಿವಾರ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಲೇಖಕಿಯರ ಸಂಘ ನಗರದ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಆಯೋಜಿಸಿದ್ದ ‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ತಮ್ಮ ಬದುಕನ್ನು ರೂಪಿಸಿದ ಘಟನೆಗಳನ್ನು ಸಾಹಿತ್ಯಾಸಕ್ತರ ಮುಂದೆ ಬಿಚ್ಚಿಟ್ಟು ಮಾತನಾಡಿದ ಅವರು, ನನಗೆ ಹುಟ್ಟೂರು ಗೋಕರ್ಣವೆಂದರೇ ಅಪಾರವಾದ ಪ್ರೀತಿ. ಊರಲ್ಲಿದ್ದ ನೂರಾರು ದೇವಸ್ಥಾನಗಳು. ಪ್ರತಿದಿನ ಬರುವ ಯಾತ್ರಿಕರು, ಟೂರಿಸ್ಟ್ ಬಸ್ಗಳು, ಊರಿನ ಜನ ಎಲ್ಲವೂ, ಎಲ್ಲರೊಂದಿಗೆ ಸಂಬಂಧವನ್ನು ಏರ್ಪಡಿಸಿಕೊಂಡಿದ್ದೆ. ಇಂತಹ ಸಮಯದಲ್ಲಿ ವಿದ್ಯಾಭ್ಯಾಸಕ್ಕಾಗಿ ಗೋಕರ್ಣ ಬಿಟ್ಟು ಕುಮುಟಾದಲ್ಲಿ ಹಾಸ್ಟೆಲ್ನಲ್ಲಿ ಉಳಿಯಬೇಕಾಗಿತ್ತು. ಆ ಸಂದರ್ಭದಲ್ಲಿ ಕುಮುಟಾದಲ್ಲಿ ಕಾಣುತ್ತಿದ್ದ ನಮ್ಮೂರಿನ ಬಸ್ಗಳನ್ನು ನೋಡಿ ಊರನ್ನು ನೋಡಿದಷ್ಟೆ ಖುಷಿಯನ್ನು ಅನುಭವಿಸುತ್ತಿದ್ದೆ ಎಂದು ನೆನಪಿಸಿಕೊಂಡರು.
ಊರನ್ನು ಬಿಟ್ಟು ಹಾಸ್ಟೆಲ್ನಲ್ಲಿ ಸೆರೆಯಾಗಿದ್ದು, ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ನಾನು ಕಾಲೇಜಿನಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಜಿಗಿದಿದ್ದು ನನ್ನ ಭಾವನೆಗಳ ಮೇಲೆ ಸಾಕಷ್ಟು ಪರಿಣಾಮ ಬೀರಿತು. ಹೀಗಾಗಿ ಮನೆಯ ನೆನಪು, ಇಂಗ್ಲಿಷ್ ಕಾಟದಿಂದ ಸ್ವಲ್ಪಮಟ್ಟಿಗೆ ನಿರಾಳ ಪಡೆಯುವುದಕ್ಕಾಗಿ ‘ಸಂಕ್ರಮಣ’, ‘ಮಲ್ಲಿಗೆ’ ಪತ್ರಿಕೆಗಳಿಗೆ ಕವನ, ಕತೆಗಳನ್ನು ಬರೆಯುತ್ತಿದ್ದೆ. ಆ ಬರವಣಿಗೆ ನನ್ನನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆ ಎಂದ ಅವರು ತಮ್ಮ ಬರವಣಿಗೆಯ ಗುಟ್ಟನ್ನು ಬಿಚ್ಚಿಟ್ಟರು.
ಧಾರವಾಡದ ಸಾಹಿತ್ಯ ಕೂಟ: ಉನ್ನತ ಶಿಕ್ಷಣಕ್ಕಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂಎಸ್ಸಿ ಬಯೋ ಕೆಮಿಸ್ಟ್ರಿ ಸೇರಿದೆ. ಅಲ್ಲಿನ ಸಾಹಿತ್ಯದ ವಿಶಾಲ ವಾತಾವರಣ, ಧಾರವಾಡದ ಸಂಸ್ಕೃತಿ ನನ್ನನ್ನು ಸೇರಿದಂತೆ ಎಂತಹವರಿಗೂ ಕೂಡ ಜೀವನಕ್ಕೆ ಆಗುವಷ್ಟು ಆತ್ಮವಿಶ್ವಾಸವನ್ನು ತಂದುಕೊಡಬಲ್ಲದು. ಅಲ್ಲಿದ್ದ ಹಿರಿಯ ಸಾಹಿತಿಗಳಾದ ಕೀರ್ತಿನಾಥ ಕುರ್ತಕೋಟಿ ಕಾವ್ಯವನ್ನು ಅರ್ಥ ಮಾಡಿಕೊಳ್ಳುವ ಬಗೆಯನ್ನು ಹೇಳಿಕೊಟ್ಟರು. ಕವಿತೆಯೆಂದರೆ ವಿಶಿಷ್ಟವಾದ ಅನುಭವ ಕೊಡುವಂತಹದ್ದು. ಅದರಲ್ಲಿ ಮತ್ತೇನನ್ನು ಹುಡುಕ ಹೋಗಬಾರದು ಎಂದು ನನ್ನೊಗಿದ್ದ ಕೆಲವೊಂದು ಗೊಂದಲಗಳನ್ನು ನಿವಾರಿಸಿದರು ಎಂದು ಅವರು ಸ್ಮರಿಸಿದರು.
ಮುಂಬೈನ ಮಾನವೀಯ ಮುಖ: ಕೆಲಸಕ್ಕಾಗಿ ಮುಂಬೈಗೆ ಹೋದ ನನಗೆ ಅಲ್ಲಿನ ವಿಸ್ಮಯ ಲೋಕಕ್ಕೆ ಮಾರುಹೋದೆ. ಜಾತಿ, ಮತ, ಪಂಥಗಳೆಂಬ ಯಾವುದೇ ಭೇದ ಭಾವವಿಲ್ಲದೆ ಎಲ್ಲರನ್ನು ಸಮಾನವಾಗಿ ಅಪ್ಪಿಕೊಳ್ಳುವ ಮುಂಬೈ ನನ್ನ ಬರವಣಿಗೆಗೆ ಮತ್ತಷ್ಟು ಕಸುವನ್ನು ತಂದಿಟ್ಟಿತು. ಅಲ್ಲಿನ ಸಿನೆಮಾಗಳು, ನಾಟಕಗಳು ನನ್ನೊಳಗಿನ ಚಿಂತನೆಗಳನ್ನು ಮತ್ತಷ್ಟು ಹೊಳಪನ್ನು ನೀಡಿತು ಎಂದು ಅವರು ಹೇಳಿದರು.
ನಾನು ಮುಂಬೈಯಲ್ಲಿರುವಾಗಲೇ ಉದಯವಾಣಿ ಕಥಾ ಸ್ಪರ್ಧೆಯಲ್ಲಿ ನನಗೆ ಪ್ರಥಮ ಬಹುಮಾನ ಸಿಕ್ಕಿತು. ಇದರಿಂದ ನನಗೆ ಅತೀವ ಆನಂದ ಆಯಿತು. ಈ ಸಂತೋಷವನ್ನು ಹಂಚಿಕೊಳ್ಳಲು ಹಿರಿಯ ಕತೆಗಾರ ಯಶವಂತ ಚಿತ್ತಾಲರ ಬಳಿಗೆ ಹೋದೆ. ನನ್ನ ಕತೆಯನ್ನು ಮೆಚ್ಚಿಕೊಳ್ಳುತ್ತಾ, ಈ ಪ್ರಶಸ್ತಿ ಬಂದಿರುವುದು ನಿನ್ನ ಕತೆಗೆ ಹೊರತು ನಿನಗಲ್ಲ ಎಂದರು. ಈ ಹೇಳಿಕೆ ನನ್ನ ರೂಢಿಗತ ಚಿಂತನೆಗಳನ್ನು ಬದಲಿಸಿಕೊಳ್ಳಲು ಸಾಧ್ಯವಾಯಿತು. ಹೀಗೆ ಬದುಕಿನ ಪ್ರಮುಖ ಘಟ್ಟಗಳಲ್ಲಿ ಹಿರಿಯ ಸಾಹಿತಿಗಳ ಸಲಹೆ, ಸೂಚನೆಗಳನ್ನು ಬದುಕನ್ನು ಸರಿಯಾದ ಧಿಕ್ಕಿನಲ್ಲಿ ರೂಪಿಸಿಕೊಳ್ಳಲು ಸಾಧ್ಯವಾಯಿತು ಎಂದು ಅವರು ಹೇಳಿದರು.
ಇವತ್ತು ನನಗೆ ಸಿನಿಮಾ ಸಾಹಿತ್ಯದಿಂದ ಸಾಕಷ್ಟು ಹೆಸರು ಬಂದಿದೆ. ಈ ಹೆಸರನ್ನು ಬಳಸಿಕೊಂಡೇ ಕಾಲೇಜು ವಿದ್ಯಾರ್ಥಿಗಳಿಗೆ ಜನಪರ ಚಿಂತನೆಗಳನ್ನು ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಸಾಮಾನ್ಯ ಜನತೆಯ ಬದುಕೇ ಸೃಜನಶೀಲ ಬರಣಿಗೆಯ ನಿಜವಾದ ಪ್ರೇರಕ ಶಕ್ತಿ. ಹೀಗಾಗಿ ಯುವ ಜನತೆ ಹಿರಿಯ ಸಾಹಿತಿಗಳ ಪುಸ್ತಕಗಳನ್ನು ಓದುತ್ತಾ, ಜನಸಾಮಾನ್ಯರ ಜೊತೆ ಬೆರೆತಾಗ ಸಾಹಿತ್ಯ ತಾನಾಗಿಯೇ ಹುಟ್ಟುತ್ತೆ ಎಂದು ಅವರು ತಮ್ಮ ಬರವಣಿಗೆಯ ಗುಟ್ಟನ್ನು ಬಿಚ್ಚಿಟ್ಟರು.