ಕಸ ವಿಲೇವಾರಿಯಲ್ಲಿ 688 ಕೋಟಿ ರೂ. ಅವ್ಯವಹಾರ: ಬಿಎಂಟಿಎಫ್ಗೆ ದೂರು
ಬೆಂಗಳೂರು, ಸೆ. 23: ಬಿಬಿಎಂಪಿ ಕಸ ವಿಲೇವಾರಿಯಲ್ಲಿ ಸುಮಾರು 688 ಕೋಟಿ ರೂ.ಗಳಷ್ಟು ಅವ್ಯವಹಾರವಾಗಿದ್ದು, ಈ ಸಂಬಂಧ ತನಿಖೆಗೆ ಒತ್ತಾಯಿಸಿ ಲೋಕಾಯುಕ್ತ, ಎಸಿಬಿ ಮತ್ತು ಬಿಎಂಟಿಎಫ್ನಲ್ಲಿ ದೂರು ದಾಖಲಿಸಿರುವುದಾಗಿ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ತಿಳಿಸಿದ್ದಾರೆ.
ಶನಿವಾರ ನಗರದ ಖಾಸಗಿ ಹೊಟೇಲ್ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಸ ವಿಲೇವಾರಿಯಲ್ಲಿ ಸುಮಾರು 688 ಕೋಟಿ ರೂ.ಗಳಷ್ಟು ಅವ್ಯವಹಾರವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಕಸ ವಿಲೇವಾರಿಗೆ ಪ್ರಸ್ತುತ 1067 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, 2016ರ ಮಾರ್ಚ್ವರೆಗೂ ಕೇವಲ 385 ಕೋಟಿ ರೂ. ವ್ಯಯಿಸಲಾಗುತ್ತಿತ್ತು. ಕಸ ವಿಲೇವಾರಿಗೆ ಗುತ್ತಿಗೆದಾರರಿಗೆ ಏಕಾಏಕಿ 680 ಕೋಟಿ ರೂ.ಗಳ ಹೆಚ್ಚಳವಾಗಿದೆ. ಈ ಹಿಂದೆ ವಾರ್ಷಿಕವಾಗಿ 236 ಕೋಟಿ ರೂ.ಗಳಷ್ಟು ಹಣ ಪಡೆಯುತ್ತಿದ್ದ ಗುತ್ತಿಗೆದಾರರಿಂದ ಪ್ರತಿತಿಂಗಳು ಕೋಟ್ಯಂತರ ರೂ. ಕಮೀಷನ್ ರೂಪದಲ್ಲಿ ಪಡೆದುಕೊಳ್ಳುವ ದುರುದ್ದೇಶದಿಂದ 925 ಕೋಟಿ ರೂ.ಗಳಷ್ಟು ಬೃಹತ್ ಪ್ರಮಾಣದ ಸಾರ್ವಜನಿಕರ ತೆರಿಗೆ ಹಣವನ್ನು ಗುತ್ತಿಗೆದಾರರಿಗೆ ಪಾವತಿಸಲು ಅನುವು ಮಾಡಿಕೊಡಲಾಗಿದೆ ಎಂದು ದೂರಿದರು.
ಬಿಬಿಎಂಪಿಯ ವಾರ್ಡ್ 198ರಲ್ಲಿ ಕಸ ವಿಲೇವಾರಿ ಕಾರ್ಯಕ್ಕೆ ಪ್ರತಿ ತಿಂಗಳು 11.81 ಲಕ್ಷ ರೂ. ಪಾವತಿಸಲಾಗುತ್ತಿತ್ತು. ಈ ಮೊತ್ತ ದಿಢೀರ್ ಎಂದು 1.04 ಕೋಟಿಗೆ ಏರಿಕೆಯಾಗಿದೆ. ಇದೊಂದು ವಾರ್ಡ್ ಉದಾಹರಣೆಯಾಗಿದೆ. ಎಲ್ಲ ವಾರ್ಡ್ಗಳಲ್ಲೂ ಇದೇ ರೀತಿಯಾಗಿದ್ದು, ಕಸದ ಮಾಫಿಯಾದಿಂದ ನೂರಾರು ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ಎನ್.ಆರ್.ರಮೇಶ್ ತಿಳಿಸಿದರು.
ಪಾಲಿಕೆಯ ದಾಖಲೆಗಳ ಪ್ರಕಾರ 31 ಸಾವಿರ ಗುತ್ತಿಗೆ ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು, 887ಕಾಂಪ್ಯಾಕ್ಟರ್ಗಳು, 2794 ಟಿಪ್ಪರ್ ಆಟೊ ಕಸವಿಲೇವಾರಿ ವಾಹನಗಳು ಕಾರ್ಯ ನಿರ್ವಹಿಸುತ್ತಿವೆ. ಇದಲ್ಲದೆ, ಪಾಲಿಕೆಯ 2734 ಮಂದಿ ಖಾಯಂ ಪೌರಕಾರ್ಮಿಕರು, 232 ಮಂದಿ ಹಿರಿಯ ಆರೋಗ್ಯ ಪರಿವೀಕ್ಷಕರು, 127 ಮೇಸ್ತ್ರಿಗಳು, 77 ತ್ಯಾಜ್ಯ ವಿಲೇವಾರಿ ವಾಹನ ಚಾಲಕರು, 162 ಕ್ಲೀನರ್ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲರಿಗೂ ವೇತನ ರೂಪದಲ್ಲಿ 83 ಕೋಟಿ ರೂ. ಹಣ ಪಾವತಿಸಲಾಗುತ್ತಿದೆ. ಪಾಲಿಕೆ ತನ್ನ ವಾರ್ಷಿಕ ಆದಾಯ ಶೇ.55 ರಷ್ಟು ಹಣವನ್ನು ಕಸವಿಲೇವಾರಿ ಕಾರ್ಯಕ್ಕೆ ಖರ್ಚು ಮಾಡುವ ಪರಿಸ್ಥಿತಿ ತಲುಪಿದೆ ಎಂದು ಹೇಳಿದರು.
ತನಿಖೆಗೆ ಪತ್ರ: 31 ಸಾವಿರ ಗುತ್ತಿಗೆ ಪೌರಕಾರ್ಮಿಕರ ಪೈಕಿ ಕೇವಲ 11,500 ಮಂದಿ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಸಫಾಯಿ ಕರ್ಮಚಾರಿ ಆಯೋಗ ವರದಿ ನೀಡಿದ್ದು, 6600 ಮಂದಿ ನಕಲಿ ಪೌರಕಾರ್ಮಿಕರ ಹೆಸರಲ್ಲಿ ವೇತನ ವಂಚನೆಯಾಗುತ್ತಿದೆ. ಈ ಬಗ್ಗೆ ಸಿಐಡಿ ತನಿಖೆ ನಡೆಸಬೇಕೆಂದು ಕಳೆದ ಸಾಲಿನ ಡಿಸೆಂಬರ್ನಲ್ಲಿ ಆಯುಕ್ತರು ಸರಕಾರಕ್ಕೆ ಪತ್ರ ಬರೆದಿದ್ದನ್ನು ರಮೇಶ್ ಉಲ್ಲೇಖಿಸಿದರು.
ಕಸದ ಬೃಹತ್ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಭಾರೀ ಅವ್ಯವಹಾರಕ್ಕೆ ಕಾರಣವಾಗಿರುವ 48 ಕಸವಿಲೇವಾರಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲಾಖೆ ವತಿಯಿಂದ ನಿರ್ವಹಣೆ ಮಾಡುತ್ತಿರುವ ಈ ಪದ್ಧತಿ ಕೈಬಿಟ್ಟು ಜಾಗತಿಕ ಟೆಂಡರ್ ಮೂಲಕ ಒಪ್ಪಿಗೆ ನೀಡಬೇಕು ಎಂದು ಒತ್ತಾಯಿಸಿದರು.