ಪಾರಂಪರಿಕ ಕಟ್ಟಡಗಳಿಗೆ ಬೇಟಿ ನೀಡಿದ ಜಾವಾ ಬೈಕ್‍ಗಳು

Update: 2017-09-24 17:42 GMT

ಮೈಸೂರು, ಸೆ.24: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಎರಡನೆ ದಿನದ ಪಾರಂಪರಿಕ ಕಾರ್ಯಕ್ರಮದಲ್ಲಿ  ರವಿವಾರ 'ಮೇಡ್ ಇನ್ ಮೈಸೂರ್' ಜಾವಾ ಬೈಕ್‍ಗಳಲ್ಲಿ ಪಾರಂಪರಿಕ ಕಟ್ಟಡಗಳಿಗೆ ಭೇಟಿ ನೀಡಲಾಯಿತು. 
    
ಮೈಸೂರಿನ ಹಾಗೂ ವಿವಿಧ ಭಾಗಗಳಿಂದ ತಮ್ಮ ನೆಚ್ಚಿನ ಜಾವಾ ಬೈಕ್‍ಗಳೊಡನೆ ಬಂದಿದ್ದ 40ಕ್ಕೂ ಹೆಚ್ಚಿನ ಆಸಕ್ತರು ಭಾಗವಹಿಸಿದರು. ಕರ್ನಾಟಕ ರಾಜ್ಯ ಡಾ.ಗಂಗೂಬಾಯ್ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಸರ್ವಮಂಗಳ ಶಂಕರ್ ಅವರು ಹಸಿರು ನಿಶಾನೆ ತೋರಿದರು. 
  
ಪಾರಂಪರಿಕ ನಡಿಗೆ ಕಾರ್ಯಕ್ರಮದ ವಿವರಣೆಯನ್ನು ಪಾರಂಪರಿಕ ತಜ್ಞರಾದ ಎನ್.ಎಸ್.ರಂಗರಾಜು ಹಾಗೂ ಈಚನೂರು ಕುಮಾರ್ ಅವರು ನೀಡಿದರು. ಜಾವಾ ಕಂಪನಿಯು ಮೈಸೂರು ಮತ್ತು ಜಕೋಸ್ಲಾವಿಯಾ ನಡುವೆ ಸೇತುವೆಯಾಗಿತ್ತು ಜಾವಾ ಬೈಕ್‍ಗಳ ತಯಾರಿಕೆಯಲ್ಲಿ. ಎಫ್.ಕೆ. ಇರಾನಿ ಅವರ ಕೊಡುಗೆ ಹಾಗೂ ಜನತಾ ದಸರೆಗೆ ಆರಂಭಿಸಲು ಅವರಿಟ್ಟ ಹಜ್ಜೆಗಳನ್ನು ತಜ್ಞರು ಸ್ಮರಿಸಿದರು ಅದರೊಂದಿಗೆ ಜಾವಾ ಕಂಪೆನಿಯ ಏಳು ಬೀಳುಗಳನ್ನು ಅದರಿಂದ ಸಾಮಾಜಿಕ ಪರಿಣಾಮಗಳನ್ನು ತಿಳಿಸಿದರು.
   
ಪಾರಂಪರಿಕ ಸಂಚಾರ ರಂಗಾಚಾರ್ಲು ಪುರಭವನ, ದೊಡ್ಡ ಗಡಿಯಾರ, ಹತ್ತನೇ ಚಾಮರಾಜೇಂದ್ರ ವೃತ್ತ, ಅಂಬಾವಿಲಾಸ ಅರಮನೆ, ಜಗನ್ಮೋಹನ ಅರಮನೆ, ಮಹಾರಾಜ ಕಾಲೇಜು, ಯುವರಾಜಾ ಕಾಲೇಜು, ಮಹಾರಾಣಿ ಕಾಲೇಜು, ಜಿಲ್ಲಾಧಿಕಾರಿ ಕಚೇರಿ, ಕ್ರಾಫರ್ಡ್ ಹಾಲ್, ರೈಲು ನಿಲ್ದಾಣ ಹಾಗೂ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಕೊನೆಗೊಂಡಿತು. 

ಕಾರ್ಯಕ್ರಮದಲ್ಲಿ ಪಾರಂಪರಿಕ ಇಲಾಖೆಯ ಉಪನಿರ್ದೆಶಕ ಡಾ.ಗವಿಸಿದ್ದಯ್ಯ, ಪುರಾತತ್ವ ತಜ್ಞ ಎನ್.ಎಲ್.ಗೌಡ ಹಾಗೂ ಇತರರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News