ತಾಯಿ-ಮಗುವಿನ ಆರೋಗ್ಯ ಸುಧಾರಣೆಗೆ ಮಾತೃಪೂರ್ಣ ಯೋಜನೆ ಸಹಕಾರಿ: ಉಮಾ ಮಹದೇವನ್
ಬೆಂಗಳೂರು, ಸೆ.26: ಆರೋಗ್ಯವಂತ ಮಗುವಿಗೆ ಜನ್ಮ ನೀಡಲು ಗರ್ಭಿಣಿ ಸ್ತ್ರೀಗೆ ಅಗತ್ಯವಾದ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಅ.2ರಿಂದ ರಾಜ್ಯಾದ್ಯಂತ ಮಾತೃಪೂರ್ಣ ಯೋಜನೆಗೆ ಚಾಲನೆ ನೀಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ತಿಳಿಸಿದ್ದಾರೆ.
ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಗರದ ಖಾಸಗಿ ಹೊಟೇಲ್ನಲ್ಲಿ ಆಯೋಜಿಸಿದ್ದ ‘ಮಾತೃಪೂರ್ಣ ಯೋಜನೆ’ ಕುರಿತು ಮಾಧ್ಯಮದೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಂಗನವಾಡಿಯತ್ತ ಗರ್ಭಿಣಿ, ಬಾಣಂತಿಯರು: ರಾಜ್ಯದ ಯಾವುದೇ ಗರ್ಭಿಣಿ, ಹಾಗೂ ಬಾಣಂತಿಯರು ಅಪೌಷ್ಟಿಕತೆಯಿಂದ ನರಳಬಾರದು. ರಾಜ್ಯದಲ್ಲಿ ಹುಟ್ಟುವ ಪ್ರತಿಮಗು ಆರೋಗ್ಯ ಪೂರ್ಣವಾಗಿರಬೇಕು. ಹೀಗಾಗಿ ರಾಜ್ಯದ ಪ್ರತಿ ಗರ್ಭಿಣಿಯರು ಹಾಗೂ ಬಾಣಂತಿ ಮಹಿಳೆಯರು ಅಂಗನವಾಡಿಗೆ ಬಂದು ಪೌಷ್ಟಿಕಾಂಶಯುಕ್ತ ಆಹಾರವನ್ನು ಊಟ ಮಾಡಿ ಹೋಗುವಂತಹ ಮಾತೃಪೂರ್ಣ ಯೋಜನೆಯನ್ನು ರಾಜ್ಯ ಸರಕಾರ ಅ.2ರಿಂದ ಜಾರಿ ಮಾಡುತ್ತಿದೆ ಎಂದು ಹೇಳಿದರು.
ಮಾತೃಪೂರ್ಣ ಯೋಜನೆಯ ಅಗತ್ಯತೆ: ದೇಶದ ಮಕ್ಕಳನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ 1975ರಲ್ಲಿ ದೇಶಾದ್ಯಂತ ಅಂಗನವಾಡಿಗಳನ್ನು ತೆರೆಯಲಾಯಿತು. 3ವರ್ಷದಿಂದ 6ವರ್ಷದವರೆಗಿನ ಎಲ್ಲ ಮಕ್ಕಳಿಗೆ ಉಚಿತವಾಗಿ ಊಟ ಹಾಗೂ ಶಾಲಾ ಪೂರ್ವ ಕಲಿಕೆಗೆ ಉತ್ತೇಜಿಸಲಾಯಿತು. ಆದರೆ, ಈ ಯೋಜನೆಯಿಂದಲೂ ಮಗುವಿನ ಆರೋಗ್ಯ ಸುಧಾರಿಸುವಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಿಲ್ಲ. ಹೀಗಾಗಿ ಮಗುವಿನ ಆರೋಗ್ಯವನ್ನು ಸುಧಾರಿಸಬೇಕಾದರೆ ತಾಯಿಯ ಹೊಟ್ಟೆಯಲ್ಲಿರುವಾಗಲೆ ಆರೈಕೆ ಮಾಡುವ ನಿಟ್ಟಿನಲ್ಲಿ ಗರ್ಭಿಣಿ ಸ್ತ್ರೀಯರ ಆರೋಗ್ಯಕ್ಕೆ ಹಲವು ಯೋಜನೆಗಳನ್ನು ರೂಪಿಸಲಾಯಿತು ಎಂದರು.
ಪೋಷಕಾಂಶಯುಕ್ತ ಆಹಾರ ಪದಾರ್ಥಗಳನ್ನು ಗರ್ಭಿಣಿ ಸ್ತ್ರೀಯರ ಮನೆಗಳಿಗೆ ಕೊಡಲಾಯಿತು. ಆದರೆ, ಗರ್ಭಿಣಿ ಸ್ತ್ರೀಯರು ಈ ಆಹಾರ ಪದಾರ್ಥಗಳನ್ನು ತಾವು ಉಪಯೋಗಿಸದೆ ಮನೆಯ ಇತರೆ ಸದಸ್ಯರಿಗೆ ಕೊಡುತ್ತಿದ್ದರು. ಹೀಗಾಗಿ ಗರ್ಭಿಣಿಯರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತಿರಲಿಲ್ಲ ಎಂದು ವಿಷಾದಿಸಿದರು.
ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಯರು ಕೊನೆಯಲ್ಲಿ ಊಟ ಮಾಡುವ ಪದ್ಧತಿಯಿದೆ. ಹೀಗಾಗಿ ಮಧ್ಯಮ ಹಾಗೂ ಬಡ ಕುಟುಂಬದ ಮಹಿಳೆಯರು ಅರೆ ಹೊಟ್ಟೆಯಲ್ಲಿಯೇ ದಿನದೂಡುತ್ತಾರೆ. ಹೀಗಾಗಿ ಮಧ್ಯಮ ಹಾಗೂ ಬಡ ಕುಟುಂಬದ ಶೇ.90ರಷ್ಟು ಗರ್ಭಿಣಿಯರು ಅಪೌಷ್ಟಿಕತೆ ಹೊಂದಿರುತ್ತಾರೆ. ಇಂತಹ ಗರ್ಭಿಣಿ ಹೊಟ್ಟೆಯಲ್ಲಿ ಹುಟ್ಟಿದ ಮಗು ಅನಾರೋಗ್ಯವನ್ನು ಹೊಂದಿರುತ್ತದೆ. ಈ ಹಿನ್ನೆಲೆಯಲ್ಲಿ ಅಂಗನವಾಡಿಯಲ್ಲಿಯೇ ಪೌಷ್ಟಿಕ ಆಹಾರ ನೀಡವಂತಹ ಮಾತೃಪೂರ್ಣ ಯೋಜನೆ ಅಗತ್ಯವಿದೆ ಎಂದು ಹೇಳಿದರು.
ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕಿ ದೀಪಾ ಚೋಲನ್, ಆರೋಗ್ಯ ಇಲಾಖೆಯ ರಾಜ್ಕುಮಾರ್ ಉಪಸ್ಥಿತರಿದ್ದರು.
ಮಾತೃಪೂರ್ಣ ಯೋಜನೆಯ ಉದ್ದೇಶ
-ಅಂಗನವಾಡಿಗಳಲ್ಲಿಯೇ ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡುವುದು.
-ತಿಂಗಳಿಗೆ 21ದಿನ ಆಹಾರ ನೀಡುವುದು.
-ಗರ್ಭಿಣಿ ಅವಧಿಯಲ್ಲಿ ಕನಿಷ್ಠ 100 ಕಬ್ಬಿಣಾಂಶದ ಮಾತ್ರೆಗಳನ್ನು ಸೇವಿಸುವುದು.
-ಗರ್ಭಿಣಿ ಅವಧಿಯಲ್ಲಿ ಕನಿಷ್ಠ 7ರಿಂದ 8ಕೆಜಿ ತೂಕ ಹೆಚ್ಚಿಸುವುದು.
-ಜಂತುಹುಳು ಮಾತ್ರೆ ಸೇವನೆ ಪ್ರಮಾಣ ಹೆಚ್ಚಿಸುವುದು.
-ಗರ್ಭಿಣಿ ಮಹಿಳೆಯರಲ್ಲಿ ಶೇಕಡಾವಾರು ಹಿಮೋಗ್ಲೋಬಿನ್ ಪ್ರಮಾಣದ ಹೆಚ್ಚಳ
-ಗರ್ಭಿಣಿ ಮಹಿಳೆಯರಿಗೆ ಶಿಶು ಮತ್ತು ಮಕ್ಕಳ ಆಹಾರ ಸೇವನೆ ಕುರಿತು ಆಪ್ತ ಸಮಾಲೋಚನೆಯ ಶೇಕಡಾವಾರು ಪ್ರಮಾಣ ಹೆಚ್ಚಳ.
-ಶಿಶುವಿಗೆ ಶೀಘ್ರ ಎದೆಹಾಲುಣಿಸುವ ಶೇಕಡಾವಾರು ಪ್ರಮಾಣದಲ್ಲಿ ಹೆಚ್ಚಳ