‘ಪುನೀತ ಯಾತ್ರೆ’ಗೆ ಸಿಎಂ ಸಿದ್ದರಾಮಯ್ಯ ಚಾಲನೆ
ಬೆಂಗಳೂರು, ಸೆ.27: ರಾಜ್ಯ ಮತ್ತು ಹೊರ ರಾಜ್ಯಗಳ ಪ್ರಮುಖ ಧಾರ್ಮಿಕ, ಐತಿಹಾಸಿಕ, ಪಾರಂಪರಿಕ ಸ್ಥಳಗಳಿಗೆ ರಿಯಾಯಿತಿ ದರದಲ್ಲಿ ಎಲ್ಲ ಧರ್ಮದ ಪ್ರವಾಸಿಗರನ್ನು ಕರೆದೊಯ್ಯುವ ಪುನೀತಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಚಾಲನೆ ನೀಡಿದರು.
ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಹಭಾಗಿತ್ವದಲ್ಲಿ ರೂಪಿಸಿರುವ ಪುನೀತ ಯಾತ್ರೆಗೆ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಯಾತ್ರಾರ್ಥಿಗಳಿಗೆ ಶುಭಕೋರಿ, ಈ ಹೊಸ ಯೋಜನೆ ಯಶಸ್ವಿಯಾಗಲಿ, ಎಲ್ಲರೂ ಸದುಪಯೋಗಪಡಿಸಿಕೊಳ್ಳಲಿ ಎಂದು ಹಾರೈಸಿದರು.
ಪ್ರವಾಸವನ್ನು ಎರಡು ಹಂತದಲ್ಲಿ ಆಯೋಜಿಸಲಾಗುವುದು. ಒಟ್ಟು 1.38 ಲಕ್ಷ ಮಂದಿ ಇದರ ಲಾಭ ಪಡೆಯುವ ನಿರೀಕ್ಷೆ ಇದೆ. ಮೊದಲ ಹಂತದಲ್ಲಿ ಇಂದಿನಿಂದಲೇ ಹೊಯ್ಸಳ, ಗೊಮ್ಮಟೇಶ್ವರ ದರ್ಶನ, ಉತ್ತರ ಕರ್ನಾಟಕ, ಭಾರತದ ವಿಸ್ಮಯ ಕ್ಷೇತ್ರಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, ತಿರುಪತಿ, ಕಾಳಹಸ್ತಿ, ಮಂತ್ರಾಲಯ ಮತ್ತು ಶಿರಡಿಯನ್ನು ಪ್ಯಾಕೇಜ್ ಒಳಗೊಂಡಿದೆ ಎಂದು ತಿಳಿಸಿದರು.
ಅಕ್ಟೋಬರ್ 15ರಿಂದ ಎರಡನೆ ಹಂತದ ಯಾತ್ರೆ ಆರಂಭವಾಗಲಿದೆ. ಇದರಲ್ಲಿ ರಾಜ್ಯದ ಇತಿಹಾಸ ಪ್ರಸಿದ್ಧ ಚರ್ಚ್. ಮಸೀದಿಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, ಗಾಣಗಾಪುರ, ದತ್ತಾತ್ರೇಯ ಮಳಖೇಡ ರಾಘವೇಂದ್ರ, ಸನ್ನತಿ ಚಂದ್ರ ಲಾಂಬಮ, ಸವದತ್ತಿ ಎಲ್ಲಮ್ಮ, ಶರಣ ಬಸವರ ಪವಿತ್ರ ಸ್ಥಳಗಳ ದರ್ಶನ ಇರಲಿದೆ ಎಂದು ಹೇಳಿದರು.
ನಂಜನಗೂಡು, ಬಾಬಾ ಬುಡನ್ ಗಿರಿ, ಆದಿಚುಂಚನಗಿರಿ, ಗೋಕರ್ಣ, ಶಿರಸಿ ಮಾರಿಕಾಂಬೆ, ಶಿರಡಿ, ಶಬರಿಮಲೆ, ಮಧುರೆಗೆ ಪ್ರವಾಸಿಗರನ್ನು ಕರೆದೊಯ್ಯಲಾಗುವುದು. ರಾಜ್ಯದ ಜನತೆಗೆ ಸರಕಾರ ನೀಡುತ್ತಿರುವ ದಸರಾ ಕೊಡುಗೆ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಇನ್ನಿತರರರು ಉಪಸ್ಥಿತರಿದ್ದರು.