‘ಜನರಿಕ್ ಔಷಧಿಗಳ ಗುಣಮಟ್ಟ ಹೆಚ್ಚಳಕ್ಕೆ ಆದ್ಯತೆ’
ಬೆಂಗಳೂರು, ಅ.13: ಕೇಂದ್ರ ಸರಕಾರದ ಔಷಧೀಯ ಇಲಾಖೆಯೊಂದಿಗೆ ಅಸೋಚಾಮ್(ಎಎಸ್ಎಸ್ಒಸಿಎಚ್ಎಎಂ) ರಾಜ್ಯ ಘಟಕವು ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಇಂದು ‘ಜನರಿಕ್ ಔಷಧಿಗಳ ಗುಣಮಟ್ಟಕ್ಕೆ ಆದ್ಯತೆ’ ಕುರಿತ ಸಮ್ಮೇಳನ ಜರುಗಿತು.
ಅಸೋಚಾಮ್ ರಾಜ್ಯ ಘಟಕದ ಅಧ್ಯಕ್ಷ ಆರ್.ಶಿವಕುಮಾರ್ ಮಾತನಾಡಿ, ಕೈಗಟಕುವ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಸಿದ್ಧಪಡಿಸುವುದರಿಂದ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುತ್ತದೆ. ಔಷಧಿಗಳನ್ನು ತಯಾರಿಸುವವರು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಇದಕ್ಕಾಗಿ ಸಂಬಂಧಪಟ್ಟ ಪ್ರಾಧಿಕಾರಗಳು ಔಷಧ ಉದ್ಯಮಕ್ಕೆ ಸಹಕಾರ ನೀಡಬೇಕು ಎಂದರು.
ರಾಜ್ಯ ಔಷಧ ನಿಯಂತ್ರಕ ಭಾಗೋಜಿ ಟಿ.ಖಾನಾಪುರೆ ಮಾತನಾಡಿ, ಸರಕಾರವು ಜನೌಷಧಿ ಕೇಂದ್ರಗಳ ಮೂಲಕ ಜನರಿಕ್ ಔಷಧಿಗಳ ಬಳಕೆಗೆ ಪ್ರೋತ್ಸಾಹ ನೀಡುತ್ತಿದೆ. ರಾಜ್ಯದಲ್ಲಿ ಈ ಜನೌಷಧಿ ಕೇಂದ್ರಗಳ ಸಂಖ್ಯೆ ಮತ್ತಷ್ಟು ಹೆಚ್ಚಬೇಕಿದೆ. ಈ ಕೇಂದ್ರಗಳಿಗೆ ಎಲ್ಲ ವಿಧದ ಔಷಧಿಗಳನ್ನು ಪೂರೈಸಲು ಉದ್ಯಮ ವಲಯ ಮುಂದಾಗಬೇಕು ಎಂದು ಮನವಿ ಮಾಡಿದರು.
ಔಷಧ ನಿಯಂತ್ರಕ ಇಲಾಖೆಯು ಜನೌಷಧಿ ಕೇಂದ್ರಗಳಲ್ಲಿ ಲಭ್ಯವಿರುವ ಔಷಧಿಗಳು ಹಾಗೂ ಬ್ರಾಂಡೆಡ್ ಔಷಧಿಗಳ ಗುಣಮಟ್ಟವನ್ನು ಪರೀಕ್ಷಿಸಿದೆ. ರಾಜ್ಯದಲ್ಲಿ ಔಷಧೀಯ ಪಾರ್ಕ್ ನಿರ್ಮಿಸಲು ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆ. ಉದ್ಯಮಿಗಳು ಈ ಪಾರ್ಕ್ನಲ್ಲಿ ಹೆಚ್ಚಿನ ಬಂಡವಾಳ ಹೂಡಿ ರಾಜ್ಯದ ಪ್ರಗತಿಗೆ ನೆರವಾಗಬೇಕು ಎಂದು ಕೋರಿದರು.
ಕೆಡಿಪಿಎಂಎ ಅಧ್ಯಕ್ಷ ಸುನೀಲ್ ಅತ್ತಾವರ್ ಮಾತನಾಡಿ, ಔಷಧೀಯ ಉತ್ಪನ್ನಗಳಲ್ಲಿ ಗುಣಮಟವನ್ನು ನಿರಂತರವಾಗಿ ಹೆಚ್ಚಿಸುವ ಪ್ರಯತ್ನ ನಡೆಯಬೇಕು. ಇದಕ್ಕಾಗಿ ಕಂಪೆನಿಗಳು ತನ್ನ ಸಿಬ್ಬಂದಿಗಳನ್ನು ಬಲವರ್ಧನೆಗೊಳಿಸಬೇಕು. ಔಷಧಿಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡುವುದನ್ನು ಪ್ರೋತ್ಸಾಹಿಸಬೇಕು. ಇದರಿಂದಾಗಿ, ಅವರಿಗೆ ಪ್ರತ್ಯಕ್ಷವಾಗಿ ಔಷಧಿಗಳ ಉತ್ಪನ್ನಗಳ ಕಾರ್ಯವಿಧಾನಗಳ ಪರಿಚಯವಾಗುತ್ತದೆ ಎಂದರು.
ಸಮ್ಮೇಳನದಲ್ಲಿ ಯುಎಲ್ ಇಂಡಿಯಾ ಸಂಸ್ಥೆಯ ಸೌತ್ ಏಷಿಯಾ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಸುಗಾವನಮ್, ಅಸೋಚಾಮ್ ಹೆಲ್ತ್ಕೇರ್ ಹಾಗೂ ಫಾರ್ಮ ವಿಭಾಗದ ಉಪ ನಿರ್ದೇಶಕ ಅನೂಜ್ ಮಾಥೂರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಲ್ಟಿವೇಟಿಂಗ್ ಕ್ವಾಲಿಟಿ ಇನ್ ಜನರಿಕ್ ಡ್ರಗ್ಸ್ ಮ್ಯಾನುಫ್ಯಾಕ್ಚರಿಂಗ್ಗೆ ಸಂಬಂಧಿಸಿದ ವರದಿಯನ್ನು ಬಿಡುಗಡೆ ಮಾಡಲಾಯಿತು.
ಜಾಗತಿಕವಾಗಿ ಸಿದ್ಧಪಡಿಸಲಾಗುವ ಔಷಧಿಗಳ ಪ್ರಮಾಣದ ಪೈಕಿ ಶೇ.10ರಷ್ಟನ್ನು ಭಾರತೀಯ ಔಷಧೀಯ ಉದ್ಯಮವು ಪಾಲು ಹೊಂದಿದೆ. 2020ರ ವೇಳೆಗೆ ಈ ವ್ಯವಹಾರವು 55 ಬಿಲಿಯನ್ ಡಾಲರ್ಗೆ ತಲುಪುವ ನಿರೀಕ್ಷೆಯಿದೆ ಎಂದು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಗಣ್ಯರು ತಿಳಿಸಿದರು.