ಮಾಧ್ಯಮಗಳಿಗೆ 'ಅಭಿವ್ಯಕ್ತಿ ಸ್ವಾತಂತ್ರ್ಯ' ಸ್ವೇಚ್ಛಾಚಾರವಾಗಬಾರದು: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಅ.17:ಮಾಧ್ಯಮಗಳು ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರದ ನಡುವಿನ ವ್ಯತ್ಯಾಸವನ್ನು ಗುರುತಿಸಿ ಕಾರ್ಯನಿರ್ವಹಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ನಗರದ ಖಾಸಗಿ ಹೊಟೇಲ್ನಲ್ಲಿ ಕರ್ನಾಟಕ ಮಾಧ್ಯಮ ಅಕಾಡಮಿ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ 'ಸಮರ್ಥ ಆಡಳಿತಕ್ಕೆ ಮಾಧ್ಯಮದ ಜತೆ ಜನರೆಡೆಗೆ- ಸಂವಾದ ಕಾರ್ಯಕ್ರಮ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನರಿಗೆ ರೋಚಕ ಸುದ್ದಿ, ಉಪಯೋಗವಿಲ್ಲದ ಸುದ್ದಿಗಳು ಅವಶ್ಯವಿಲ್ಲ. ಮಾಧ್ಯಮಗಳು ಸತ್ಯಕ್ಕೆ ಹೆಚ್ಚು ಒತ್ತು ನೀಡಿದರೆ ಸಮಾಜಕ್ಕೆ ಒಳ್ಳೆಯದು. ಜನರು ಹಾಗೂ ಸರಕಾರದ ನಡುವಿನ ಪ್ರಭಾವಿ ಸೇತುವೆ ಆಗಿ ಮಾಧ್ಯಮ ಕೆಲಸ ಮಾಡಬೇಕು. ಅಭಿವ್ಯಕ್ತಿ ಸ್ವಾತಂತ್ರದಲ್ಲಿ ನಂಬಿಕೆ ಇದೆ, ಆದರೆ ಅದು ಸ್ವೇಚ್ಛಾಚಾರ ಆಗಬಾರದು ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಮಾಲಕರು. ಸರಕಾರಗಳು ಜನರಿಗೆ ಉತ್ತರದಾಯಿಗಳಾಗಿ ಕೆಲಸ ಮಾಡುತ್ತವೆ. ಸಂವಿಧಾನದ ಆಶಯವಾದ ಸಮ ಸಮಾಜವನ್ನು ನಿರ್ಮಿಸುವುದು ಸರಕಾರಗಳ ಆದ್ಯ ಕರ್ತವ್ಯ. ಸಮ ಸಮಾಜ ನಿರ್ಮಾಣಕ್ಕೆ ಸಂವಿಧಾನದ ನಾಲ್ಕನೆ ಅಂಗ ಸೇರಿದಂತೆ ಎಲ್ಲ ಅಂಗಗಳೂ ಸಮನ್ವಯದಿಂದ ಕೆಲಸ ಮಾಡಬೇಕಿದೆ ಎಂದರು.
ಮಾಧ್ಯಮಗಳು ಇಂದು ಧ್ವನಿ ಇಲ್ಲದವರ ಪರ ಧ್ವನಿ ಎತ್ತಬೇಕಿದೆ. ಜನರ ಆಶಯಕ್ಕೆ, ನಿರೀಕ್ಷೆಗೆ ತಕ್ಕಂತೆ ಸರಕಾರಗಳು ಜನರಪರ, ಪಾರದರ್ಶಕ ಆಡಳಿತ ನೀಡದಿದ್ದರೆ ಮಾಧ್ಯಮಗಳು ಎಚ್ಚರಿಸಬೇಕು ಎಂದು ತಿಳಿಸಿದರು.
ಅಧಿಕಾರಿಗಳು ಸುಳ್ಳು ಹೇಳಬಾರದು: ಈ ನಾಲ್ಕು ವರ್ಷದಲ್ಲಿ ಸರಕಾರ ಮಾಡಿರುವ ಎಲ್ಲ ಕೆಲಸವನ್ನು ಜನರಿಗೆ ಹೇಳಬೇಕು. ಯಾವುದೇ ಕಾರಣಕ್ಕೂ ಜನರ ಬಳಿ ಸರಕಾರದ ಕಾರ್ಯಕ್ರಮಗಳ ಕುರಿತು ಸುಳ್ಳು ಹೇಳಬಾರದು. ಅನ್ನ ಭಾಗ್ಯ ಯೋಜನೆ ಕುರಿತು ಕೆಲವರು ಟೀಕೆ ಮಾಡಿದರು. ಈ ಯೋಜನೆಯಿಂದ ರಾಜ್ಯದಲ್ಲಿ ಸೋಮಾರಿಗಳು ಸೃಷ್ಟಿಯಾಗುತ್ತಾರೆ ಎಂದು ನಿಂದನೆ ಮಾಡಿದರು. ಈ ಕುರಿತು ಕೆಲ ಮಾಧ್ಯಮಗಳೂ ಸತ್ಯವನ್ನು ಮುಚ್ಚಿಟ್ಟವು. ಕಳೆದ ಎರಡು ಮೂರು ವರ್ಷದಿಂದ ರಾಜ್ಯದಲ್ಲಿ ಆವರಿಸಿದ್ದ ಬರಗಾಲದಿಂದ ಜನರು ತತ್ತರಿಸಿದ್ದಾರೆ. ಅನ್ನ ಭಾಗ್ಯ ಯೋಜನೆ ಕೊಡದಿದ್ದರೆ 4 ಕೋಟಿ ಜನರಿಗೆ ಯಾವ ಪರಿಸ್ಥಿತಿ ಇರುತ್ತಿತ್ತು ಎಂಬುವುದು ಊಹಿಸಲು ಅಸಾಧ್ಯ ಎಂದು ಹೇಳಿದರು.
ಎಂಎಂಎಲ್ ನಲ್ಲಿಟ್ಟಿದ ಸರಕಾರದ ಠೇವಣಿ ಹಣವನ್ನು ಅಪೆಕ್ಸ್ ಬ್ಯಾಂಕ್ಗೆ ವರ್ಗಾಯಿಸಿದ್ದಕ್ಕೆ ಸರಕಾರ ದಿವಾಳಿ ಆಗಿದೆ ಎಂದು ವಿರೋಧ ಪಕ್ಷದವರು ಟೀಕೆ ಮಾಡಿ, ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಅಪೆಕ್ಸ್ ಬ್ಯಾಂಕ್ನಲ್ಲಿ ಎಂಎಂಎಲ್ ನೀಡುವ ಬಡ್ಡಿಗಿಂತ ಹೆಚ್ಚಿನ ಬಡ್ಡಿ ನೀಡುತ್ತದೆ. ಹೆಚ್ಚು ಬಡ್ಡಿ ನೀಡಿದರೆ ಸರಕಾರಕ್ಕೆ ಲಾಭ. ಠೇವಣಿ ವರ್ಗಾವಣೆ ಮಾಡಿದ್ದರಿಂದ ಸರಕಾರ ದಿವಾಳಿಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಔಟ್ ಲುಕ್ ವಾರಪತ್ರಿಕೆಯ ನಿವೃತ್ತ ಮುಖ್ಯ ಸಂಪಾದಕ ಕೃಷ್ಣ ಪ್ರಸಾದ್ ಮಾತನಾಡಿ, ದೇಶದಲ್ಲಿ ಮೊದಲ ಬಾರಿಗೆ ಮಾಧ್ಯಮಗಳು ಸರಕಾರದ ಪರ ನಿಂತಿವೆ. ವಿದ್ಯುನ್ಮಾನ ಮಾಧ್ಯಮಗಳು ಸ್ವಯಂ ನಿಯಂತ್ರಣವನ್ನು ಕಳೆದುಕೊಳ್ಳುತ್ತಿವೆ ಎಂಬ ಮಾತು ಕೇಳಿ ಬರುತ್ತಿವೆ. ದೇಶದಲ್ಲಿ ಜನರ ಸಂಬಂಧಗಳಿಗೆ ಕಂಟಕವಾಗಿರುವ ಸಮಸ್ಯೆಗಳಿವೆ. ಗೋರಖಪುರ ಪ್ರಕರಣ ಸೇರಿದಂತೆ ಇತರೆ ಪ್ರಕರಣಗಳು ಮಾಧ್ಯಮಗಳ ಕಣ್ಣಿಗೆ ಕಾಣುತ್ತಿಲ್ಲ. ಕಳೆದ 40 ತಿಂಗಳಲ್ಲಿ ಮಾಧ್ಯಮಗಳು ತಮ್ಮ ಕೆಲಸವನ್ನು ಮರೆತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಶ್ಚಂದ್ರ ಕುಂಟಿಯಾ, ಮಾದ್ಯಮ ಅಕಾಡಮಿ ಅಧ್ಯಕ್ಷ ಸಿದ್ದರಾಜು, ವಾರ್ತಾ ಇಲಾಖೆ ನಿರ್ದೇಶಕ ಡಾ.ಹರ್ಷ, ಕಾರ್ಯದರ್ಶಿ ಮಣಿವಣ್ಣನ್ ಸೇರಿದಂತೆ ಇತರರು ಇದ್ದರು.