ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿತ

Update: 2017-10-17 15:04 GMT

ಬೆಂಗಳೂರು, ಅ.17: ನಗರದಲ್ಲಿ ಈಜಿಪುರದ ಮೂರು ಅಂತಸ್ತಿನ ಕಟ್ಟಡ ಕುಸಿದು ಏಳು ಮಂದಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ಇಲ್ಲಿನ ಯಶವಂತಪುರದಲ್ಲಿ ಮತ್ತೊಂದು ಎರಡು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಆದರೆ, ಮನೆ ಮಾಲಕನ ಸಮಯ ಪ್ರಜ್ಞೆಯಿಂದ ಕಟ್ಟಡದಲ್ಲಿ ವಾಸಿಸುತ್ತಿದ್ದ ಎರಡು ಕುಟುಂಬಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಯಶವಂತಪುರ ಸಮೀಪದ ಬಿ.ಕೆ.ನಗರದಲ್ಲಿರುವ ರಾಮಪ್ಪ ಎಂಬವರ ಎರಡು ಅಂತಸ್ತಿನ ಕಟ್ಟಡ ಸೋಮವಾರ ತಡರಾತ್ರಿ ಕುಸಿದು ಬಿದಿದ್ದು, ಘಟನೆಯಲ್ಲಿ ಮನೆಯಲ್ಲಿದ್ದ ವಸ್ತುಗಳು ಜಖಂಗೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಸೋಮವಾರ ರಾತ್ರಿ 10:45ರ ಸಮಯದಲ್ಲಿ ರಾಮಪ್ಪ ಊಟ ಮಾಡುತ್ತಿದ್ದಾಗ ಕಟ್ಟಡ ಅಲುಗಾಡಿದ ಅನುಭವವಾಯಿತು. ಕೂಡಲೇ ಆ ಮನೆಯಲ್ಲಿದ್ದವರನ್ನೆಲ್ಲಾ ಹೊರಗೆ ಕರೆತಂದ ಕೆಲ ಕ್ಷಣಗಳಲ್ಲಿಯೇ ಇಡೀ ಕಟ್ಟಡ ಕುಸಿದು ಬಿತ್ತು. ನಗರದಲ್ಲಿ ಸತತವಾಗಿ ಸುರಿದ ಭಾರೀ ಮಳೆಯಿಂದಾಗಿ ತೇವಾಂಶದಿಂದ ಶಿಥಿಲಗೊಂಡು ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಬಗ್ಗೆ ಸುದ್ದಿ ತಿಳಿದ ಯಶವಂತಪುರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News