ಕನ್ನಡಿಗರ ಮೇಲೆ ತಮಿಳು ನಟ ವಿಜಯ್ ಅಭಿಮಾನಿಗಳಿಂದ ಹಲ್ಲೆ
ಬೆಂಗಳೂರು, ಅ.19: ನಗರದ ಸಂಪಿಗೆ ಚಿತ್ರಮಂದಿರದಲ್ಲಿ ತಮಿಳು ನಟ ವಿಜಯ್ ಅಭಿನಯದ ‘ಮರ್ಸಲ್’ ಚಿತ್ರ ಪ್ರದರ್ಶನದ ವೇಳೆ ಅಲ್ಲಿದ್ದ ವಿಜಯ್ ಅಭಿಮಾನಿಗಳು ಕನ್ನಡಿಗರ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಚಿತ್ರಮಂದಿರದ ಎದುರು ಪ್ರತಿಭಟನೆ ನಡೆಸಿದರು.
ಕನ್ನಡ ಪರ ಹೋರಾಟಗಾರ ಸಾ.ರಾ.ಗೋವಿಂದು, ಪ್ರವೀಣ್ ಶೆಟ್ಟಿ, ಶಿವರಾಮೇಗೌಡ ಸೇರಿದಂತೆ ಹಲವು ನಾಯಕರು ಹಾಗೂ ಸಂಘಟನೆಯ ಕಾರ್ಯಕರ್ತರು ಸಂಪಿಗೆ ಚಿತ್ರಮಂದಿರದ ಎದುರು ಹಾಕಲಾಗಿದ್ದ ಕಟೌಟ್ಗಳನ್ನು ತೆರವುಗೊಳಿಸಿದರು. ಈ ವೇಳೆ ನೂಕುನುಗ್ಗಲು ಉಂಟಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಮುಂಜಾಗ್ರತಾ ಕ್ರಮವಾಗಿ ಚಿತ್ರಮಂದಿರಕ್ಕೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಈ ವೇಳೆ ಪ್ರತಿಕ್ರಿಯಿಸಿರುವ ಚಿತ್ರಮಂದಿರದ ಮಾಲಕರು ಕನ್ನಡಿಗರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿರುವ ತಮಿಳು ಅಭಿಮಾನಿಗಳು ಯಾರು ಎನ್ನುವುದು ಗೊತ್ತಿಲ್ಲ. ಕಟೌಟ್ ಹಾಕುತ್ತಿದ್ದವರು ಬೇರೆ. ಈ ಗಲಾಟೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.