ತಾಯ್ನಾಡಿನ ಮಕ್ಕಳಿಗೆ ನೆರವಾಗುವ ಒಸಾಟ್

Update: 2017-10-21 17:25 GMT

ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ಸಾಫ್ಟ್‌ವೇರ್ ಕಂಪೆನಿಯ ಮಾಲಕರಾದ ಬಿ.ವಿ. ಜಗದೀಶ್ ಅವರು ಒಸಾಟಿನ ನಿರ್ದೇಶಕರು. ಮತ್ತೊಬ್ಬರು ಗೋವಿಂದ ಶ್ರೀಕಂಠಯ್ಯ. ಶ್ರೀಮತಿ. ಮೋನಿಕಾ ವೆಂಕಟೇಶ ಮೂರ್ತಿ ಅಧ್ಯಕ್ಷರು. ರವಿಶಂಕರ್ ಅವರು ಉಪಾಧ್ಯಕ್ಷರು, ಜಯಶ್ರೀ ವಘೇಲ ಖಜಾಂಚಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಮೆರಿಕ ಮತ್ತು ಭಾರತದಲ್ಲಿ ಸಕ್ರಿಯ ಸದಸ್ಯರ ತಂಡಗಳಿವೆ.

ತನ್ನ ತಾಯಿ ನೆಲಕ್ಕೆ ಕೈಲಾದ ಸಹಾಯವನ್ನು ಮಾಡುತ್ತಿರುವ ತಂಡವೊಂದರ ಸೇವಾಸ್ಪೂರ್ತಿಯ ಕಥೆ ಇದು. ಇದರ ಸದಸ್ಯರು ಮಾಹಿತಿ ತಂತ್ರಜ್ಞಾನದ ಉದ್ಯೋಗದಲ್ಲಿ ತೊಡಗಿಕೊಂಡಿರುವ ಸಮಾನ ಮನಸ್ಕರು. ಉನ್ನತ ಸ್ಥಾನಗಳಲ್ಲಿರುವವರು. ಹೆಚ್ಚಿನವರು ಕರ್ನಾಟಕದ ಮೂಲದವರು. ಇವರೆಲ್ಲ ಕೂಡಿ ಹುಟ್ಟು ಹಾಕಿರುವ ಸಂಸ್ಥೆ One school at a time. ಇದರ ಸಂಕ್ಷಿಪ್ತ ರೂಪ osaat-ಒಸಾಟ್.

ಗ್ರಾಮೀಣ ಭಾಗದಲ್ಲಿ ನಾಲ್ಕೈದು ದಶಕಗಳ ಅಥವಾ ಅದಕ್ಕೂ ಹಳೆಯ ಶಾಲೆಗಳು ಇಂದಿಗೂ ಕಾಣಸಿಗುತ್ತವೆ. ಇಂಥ ಅಸುರಕ್ಷಿತ ಕಟ್ಟಡಗಳಲ್ಲಿ, ಅನನುಕೂಲದ ವಾತಾವರಣದಲ್ಲಿ ಮಕ್ಕಳು ಕಲಿಯಬೇಕಾದ ಅನಿವಾರ್ಯತೆಯಿದೆ. ಇಂಥ ಶಾಲೆ ಗಳನ್ನು ಗುರುತಿಸಿ ಸುರಕ್ಷಿತ ಹಾಗೂ ಸುಭದ್ರ ಶಾಲೆಗಳನ್ನು ನಿರ್ಮಿಸಿಕೊಡುವುದೇ ಒಸಾಟಿನ ಮೂಲ ಉದ್ದೇಶ.

ಒಸಾಟ್‌ನ ಸಹಾಯದಿಂದ ನಿರ್ಮಿಸಲ್ಪಟ್ಟ ಭದ್ರಾವತಿಯ ವಿಶ್ವಭಾರತಿ ಶಾಲೆ

ಒಸಾಟ್ ಸದಸ್ಯರಿಗೆ ಭಾರತದ ಗ್ರಾಮೀಣ ಭಾಗದ ಶಾಲೆಗಳು, ಅವುಗಳ ಸ್ಥಿತಿಗತಿಗಳ ಬಗ್ಗೆ ಅರಿವು ಬಹಳ ಚೆನ್ನಾಗಿರುವಂತಿದೆ. ಬಹುಶಃ ಅವರುಗಳು ಕೂಡ ಇಂಥದೇ ಶಾಲೆಗಳಿಂದಲೇ ಕಲಿತು ಶಿಕ್ಷಣವಂತ ವಾಗಿರಬಹುದು. ಆದ್ದರಿಂದಲೇ ನಮ್ಮ ಹಳ್ಳಿಗಳಲ್ಲಿರುವ ಹರುಕು ಮುರುಕು ಶಾಲೆಗಳನ್ನು ಸುಭದ್ರ ಶಾಲೆಗಳನ್ನಾಗಿ ಪರಿವರ್ತಿಸಲು ಪಣತೊಟ್ಟಿದ್ದಾರೆ. ಒಮ್ಮೆಗೆ ಒಂದು ಶಾಲೆಯ ಪುನಃಶ್ಚೇತನ ಕಾರ್ಯ ಮಾತ್ರ ಕೈಗೆತ್ತಿಕೊಳ್ಳುವುದು ಒಸಾಟಿನ ವಿಶೇಷತೆ. ಇದು ಅವರ ಕಾರ್ಯಕ್ಷಮತೆ ಮತ್ತು ಬದ್ಧತೆಯನ್ನು ಎತ್ತಿ ತೋರಿಸುತ್ತದೆ.

ಗ್ರಾಮೀಣ ಶಾಲೆಯ ದುರ ವಸ್ಥೆಯು ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಕ್ಕಳು ಅವಕಾಶ ವಂಚಿತರಾ ಗುತ್ತಾರೆ. ಅದರಲ್ಲೂ ಹೆಣ್ಣುಮಕ್ಕಳು ಶೌಚಾಲಯಗಳಿಲ್ಲದ ಕಾರಣ ಕ್ಕಾಗಿಯೇ ಶಾಲೆಗೆ ಬರುವುದನ್ನೇ ನಿಲ್ಲಿಸುತ್ತಾರೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಾರೆ. ಮನೆಯಲ್ಲಿರುವ ಮಕ್ಕಳನ್ನು ಬೇರೆ ದಾರಿಯಿಲ್ಲದೆ ದುಡಿಯಲು ಕಳುಹಿಸುತ್ತಾರೆ. ಅನಕ್ಷರತೆ, ಬಡತನ, ಬಾಲಕಾರ್ಮಿಕ ಸಮಸ್ಯೆಗಳು ಹೀಗೆ ಮುಂದುವರಿಯುತ್ತವೆ.

ಮೂಲ ಸೌಕರ್ಯಗಳನ್ನು ಒದಗಿಸಿಕೊಡುವುದು ತಕ್ಷಣದ ಅನಿವಾರ್ಯ. ಒಂದು ಶಾಲೆಯನ್ನು ಕೈಗೆತ್ತಿಕೊಂಡರೆ ಲಕ್ಷಾಂತರ ರೂಪಾಯಿ ಖರ್ಚು ವೆಚ್ಚ ಬರುತ್ತದೆ. ಎಲ್ಲಕ್ಕಿಂತ ಮೊದಲಾಗಿ ಸಂಬಂಧಪಟ್ಟ ಸರಕಾರಿ ಕಚೇರಿಗಳನ್ನು ಸಂಪರ್ಕಿಸಿ ಸರಕಾರದ ನೀತಿ ವಿಧಾನಗಳನ್ನು ತಿಳಿಯುವುದು. ಬೇಕಾಗುವ ಅನುಮತಿ ಪತ್ರ ಪಡೆಯುವುದು. ಯೋಜನೆಯ ಮೊದಲಿನಿಂದ ಹಿಡಿದು ಕೊನೆಯವರೆಗೆ ತಾಳ್ಮೆಯಿಂದ ವ್ಯವಹರಿಸುವ ಸ್ವಯಂಸೇವಕರು ಬೇಕಾಗುತ್ತಾರೆ. ಇಂಥ ಸವಾಲುಗಳಿಂದಾಗಿಯೇ ನಮ್ಮಲ್ಲಿ ಅನೇಕ ಎನ್‌ಪಿಒ, ಎನ್‌ಜಿಒ ಸಂಸ್ಥೆಗಳಿದ್ದರೂ ಕೆಲವೇ ಕೆಲವು ಮಾತ್ರ ಶಾಲಾ ಪುನಃಶ್ಚೇತನಗಳಲ್ಲಿ ತೊಡಗಿಕೊಂಡಿವೆ. ಒಸಾಟ್ ಇದಕ್ಕೆ ಕಟಿಬದ್ಧವಾಗಿ ನಿಂತಿದೆ.

ಒಸಾಟ್ ಶಾಲೆಯೊಂದನ್ನು ಆಯ್ದು ಕೊಳ್ಳಲು ತನ್ನದೇ ಆದ ನಿಯ ಮಾವಳಿಯನ್ನು ಪಾಲಿಸುತ್ತದೆ. ಶಾಲೆಯು ಗ್ರಾಮೀಣ ಭಾಗ ದಲ್ಲಿರಬೇಕು. ಮಕ್ಕಳ ಸಂಖ್ಯೆ ಗಣನೀಯವಾಗಿರಬೇಕು. ಶಾಲೆಯ ಸಿಬ್ಬಂದಿ, ಊರಿನ ಜನ, ಪೋಷಕರು ಕೂಡ ಆಸಕ್ತರಾಗಿರಬೇಕು. ಸರಕಾರದ ಪಠ್ಯ, ಧಾರ್ಮಿಕ ಅಥವಾ ರಾಜಕಾರಣದಿಂದ ದೂರವಿದ್ದು ಪುನಃಶ್ಚೇತನಗೊಂಡ ಶಾಲೆಯನ್ನು ಅದೇ ಸ್ಥಿತಿಯಲ್ಲಿ ಮುಂದು ವರಿಸಿಕೊಂಡು ಹೋಗುವ ಸಮುದಾಯವನ್ನು ಒಸಾಟ್ ಬಯಸುತ್ತದೆ.

                     ಒಸಾಟ್‌ನ ಭಾರತದ ತಂಡ

ಪ್ರತೀ ಯೋಜನೆಯು ಕಾರ್ಯರೂಪಕ್ಕೆ ತರಲು ಕನಿಷ್ಠ 10 ಲಕ್ಷ ರೂಪಾಯಿಗಳಾದರೂ ಬೇಕಾಗುತ್ತದೆ. ಇದು ಆವಶ್ಯಕತೆಯಂತೆ ಹಣದ ಮೊತ್ತ ಹಿರಿದಾಗುತ್ತಾ ಹೋಗುತ್ತದೆ. ಒಸಾಟ್ - ಪ್ರಮುಖವಾಗಿ ಕಾರ್ಪೊರೇಟ್ ದೇಣಿಗೆಯನ್ನು ಪಡೆಯುತ್ತದೆ. ಸಮುದಾಯ ಪ್ರದರ್ಶನಗಳು, ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕವೂ ಹಣ ಸಂಗ್ರಹಿಸುತ್ತದೆ. ದಾನಿಗಳನ್ನು ಕೂಡ ಆಶ್ರಯಿಸುತ್ತದೆ. ಇಷ್ಟೇ ಅಲ್ಲದೇ ಶಾಲೆಯೊಂದನ್ನು ದತ್ತು ಕೊಡುವುದರ ಮೂಲಕ ಇಡೀ ಒಂದು ಶಾಲೆಯ ಖರ್ಚನ್ನು ಒಬ್ಬರಿಗೆ ವಹಿಸುವ ಯೋಜನೆ ಕೂಡ ಇದೆ.

2005ರಲ್ಲಿ ಪ್ರಾರಂಭವಾದ ಒಸಾಟ್ - ತನ್ನ ಮೊದಲ ಕಾರ್ಯಕ್ರಮವಾಗಿ ಉಡುಪಿಯ ಬಜಗೋಳಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆಗೆ 3 ಕೊಠಡಿಗಳನ್ನು ಕೊಟ್ಟಿತು. ಈವರೆಗೆ ಸುಮಾರು 19 ಶಾಲೆಗಳಿಗೆ ಯೋಜನೆ ರೂಪಿಸಿ ಯಶಸ್ವಿಯಾಗಿ ನಿರ್ವಹಿಸಿದೆ. ಇದರಲ್ಲಿ ಬಹುತೇಕ ಕರ್ನಾಟಕದ ಶಾಲೆಗಳು. ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ ರಾಜ್ಯಗಳಲ್ಲಿನ ತಲಾ ಒಂದೊಂದು ಶಾಲೆಗಳನ್ನು ಪುನರ್ ನಿರ್ಮಿಸಿಕೊಟ್ಟಿದೆ. ಮತ್ತೆರಡು ಶಾಲೆಗಳ ನಿರ್ಮಾಣ ಜಾರಿಯಲ್ಲಿದೆ.

ಹೀಗೆ ಉತ್ತಮಗೊಂಡ ಶಾಲೆಗಳನ್ನು ಕಂಡು ಇನ್ನಿತರ ಸಹಾಯ ಸಂಸ್ಥೆಗಳಿಂದ ಕಂಪ್ಯೂಟರ್, ಪುಸ್ತಕ, ಲೈಬ್ರರಿ, ಊಟದ ವ್ಯವಸ್ಥೆ, ಮಕ್ಕಳಿಗೆ ಕ್ರೀಡಾ ಸಾಮಗ್ರಿ ಮುಂತಾದ ಸಹಾಯ ದೊರೆತಿದೆ. ಅನಕ್ಷರತೆ, ಬಾಲ ಕಾರ್ಮಿಕರು, ಅಸಹಾಯಕತೆ ಹೀಗೆ ಹಲವಾರು ಸಮಸ್ಯೆಗಳಿಗೆ ಪರಿವಾರವಾಗಿದೆ. ಉತ್ತಮ ಶಾಲೆಯೊಂದು ಸಾವಿರಾರು ಮಕ್ಕಳನ್ನು ವಿದ್ಯಾವಂತರನ್ನಾಗಿ ಸಮಾಜಕ್ಕೆ ಕೊಡುತ್ತದೆ. ಒಸಾಟಿನ ಕೆಲಸಗಳು ನಿರಾತಂಕವಾಗಿ ನಿರಂತರ ನಡೆಯಲಿ ಎಂದು ಆಶಿಸೋಣ.

Writer - ಬಸವರಾಜ್ ದೇ.ಸಿ.

contributor

Editor - ಬಸವರಾಜ್ ದೇ.ಸಿ.

contributor

Similar News