ಅಕ್ರಮ ಸಂಬಂಧ ಶಂಕೆ : ಪತ್ನಿಯನ್ನು ಕೊಲೆಗೈದ ಪತಿ

Update: 2017-10-23 14:16 GMT

ಬೆಂಗಳೂರು, ಅ.23: ಅಕ್ರಮ ಸಂಬಂಧ ಹೊಂದಿದ್ದ ಕಾರಣಕ್ಕಾಗಿ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಆರೋಪಿ ಪತಿ ವೆಂಕಟರೆಡ್ಡಿ ಕಾಡುಗೋಡಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಸೋಮವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವೈಟ್‌ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್, ಕೊಲೆಯಾದ ಪ್ರೇಮಾ ನಾಪತ್ತೆಯಾಗಿರುವ ಸಂಬಂಧ ಬಾಡಿಗೆಗೆ ಮನೆ ಕೊಟ್ಟಿದ್ದ ಮಾಲಕರು ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರು ವೆಂಕಟರೆಡ್ಡಿಯನ್ನು ಬಂಧಿಸಿದ್ದಾರೆ ಎಂದರು.

ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾದ ಶ್ರೀನಾಥ್ ಅನುಮಾನಾಸ್ಪದವಾಗಿ ಕಾಣೆಯಾಗಿರುವ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಹಾಗಾಗಿ ನಾಪತ್ತೆಯಾಗಿರುವ ಶ್ರೀನಾಥ್‌ಗಾಗಿ ಚಿಕ್ಕಬಳ್ಳಾಪುರ ಪೊಲೀಸರೊಂದಿಗೆ ತೀವ್ರ ಶೋಧ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಕರಣದ ಹಿನ್ನಲೆ: ಕಾಡುಗೋಡಿಯಲ್ಲಿ ಟಿವಿ ರಿಪೇರಿ ಕೆಲಸ ಮಾಡುತ್ತಿದ್ದ ವೆಂಕಟರೆಡ್ಡಿ ಒಂದು ವರ್ಷದ ಹಿಂದೆ ಅಕ್ಕನ ಮಗಳಾದ ಪ್ರೇಮಾಳನ್ನು ವಿವಾಹವಾಗಿದ್ದನು. ಆದರೆ, ಪ್ರೇಮಾ ಇತ್ತೀಚಿಗೆ ಶ್ರೀನಾಥ್ ಜೊತೆ ಅಕ್ರಮ ಸಂಬಂಧ ಹೊಂದಿದ್ದು ಗೊತ್ತಾಗಿ ಎಷ್ಟು ಬುದ್ಧಿ ಹೇಳಿದರೂ ಆಕೆಯ ವರ್ತನೆ ಸರಿಯಾಗಿರಲಿಲ್ಲ.

ಪತ್ನಿಯ ವರ್ತನೆಯಿಂದ ಆಕ್ರೋಶಗೊಂಡು ಕಳೆದ ಜುಲೈ 21 ರಂದು ಕಾರಿನಲ್ಲಿ ತನ್ನ ಸಂಬಂಧಿ ಬಾಬು ಹಾಗೂ ಮುಳಬಾಗಿಲು ಮೂಲದ ಸ್ನೇಹಿತ ಸುರೇಶ್‌ಬಾಬು ಜೊತೆ ಸೇರಿ ಕಾರಿನಲ್ಲೇ ಪತ್ನಿ ಪ್ರೇಮಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ವೆಂಕಟರೆಡ್ಡಿ ತಪ್ಪೊಪ್ಪಿಕೊಂಡಿರುವುದಾಗಿ ಅಬ್ದುಲ್ ಅಹದ್ ತಿಳಿಸಿದರು.

ನಾಪತ್ತೆಯಾಗಿರುವ ಶ್ರೀನಾಥ್ ವಿಚಾರದಲ್ಲಿ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಆದರೆ, ಶ್ರೀನಾಥ್ ತಾಯಿ ಭಾಗ್ಯಮ್ಮ ವಿಷ ಕುಡಿಯಲು ನಾನೆ ಕಾರಣನಾಗಿದ್ದೇನೆ. ಪ್ರೇಮಾ ಹಾಗೂ ಶ್ರೀನಾಥ್ ಪರಾರಿಯಾದ ನಂತರ ತಾನು ಭಾಗ್ಯಮ್ಮಳ ಮನೆಗೆ ಹೋಗಿ ನಿನ್ನ ಮಗ ಎಲ್ಲಿ ಎಂದು ಪದೇ ಪದೇ ಕಿರುಕುಳ ಕೊಟ್ಟಿದ್ದೇನೆ. ಆಗ, ಭಾಗ್ಯಮ್ಮ ನನ್ನೆದುರೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಳು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ವೆಂಕಟರೆಡ್ಡಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತಲೆಮರೆಸಿಕೊಂಡಿರುವ ಸುರೇಶ್ ಬಾಬುಗಾಗಿ ಶೋಧ ನಡೆಸಲಾಗಿದೆ ಡಿಸಿಪಿ ಅಬ್ದುಲ್ ಅಹದ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News