ನ.11 ರಿಂದ ಅಂತಾರಾಷ್ಟ್ರೀಯ ಕರಾಟೆ ಟೂರ್ನಮೆಂಟ್
ಬೆಂಗಳೂರು, ಅ.23: ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಟೂರ್ನಮೆಂಟ್ ಆದ ‘ಬೆಂಗಳೂರು ಚಾಂಪಿಯನ್ಶಿಪ್’ ಅನ್ನು ನ.11 ಮತ್ತು 12 ರಂದು ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಝೆನ್ ಸ್ಪೋರ್ಟ್ಸ್ ಅಂಡ್ ಫಿಟ್ನೆಸ್ನ ತರಬೇತುದಾರ ಎಂ.ಜಿ.ಪ್ರಸಾದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ದೇಶದಲ್ಲಿ ಪ್ರಮುಖ ಚಾಂಪಿಯನ್ಶಿಪ್ಆಗಿದ್ದು, 20 ರಾಜ್ಯಗಳ 1,500 ಕ್ಕೂ ಹೆಚ್ಚು ಕರಾಟೆ ಪಟುಗಳು ಸೇನೆ, ಸಿಆರ್ಪಿಎಫ್, ಐಟಿಬಿಪಿ ಸೇವೆಗಳು, ಅಸ್ಸಾಂ ರೈಫಲ್ಸ್ ತಂಡಗಳಲ್ಲದೆ ಶ್ರೀಲಂಕಾ, ನೇಪಾಳ ಸೇರಿದಂತೆ ಇನ್ನಿತರೆ ಕರಾಟೆಪಟುಗಳು ಭಾಗವಹಿಸಲಿದ್ದಾರೆ. ಈ ಚಾಂಪಿಯನ್ ಶಿಪ್ನ ಮುಖ್ಯ ಉದ್ದೇಶ 2020 ರಲ್ಲಿ ನಡೆಯಲಿರುವ ಒಲಿಂಪಿಕ್ಸ್ಗೆ ಕರಾಟೆ ಪಟುಗಳನ್ನು ಸಿದ್ಧಪಡಿಸುವುದಾಗಿದೆ ಎಂದು ಹೇಳಿದರು.
ಈ ಕರಾಟೆ ಚಾಂಪಿಯನ್ಶಿಪ್ ಪ್ರೊ ಕಬಡ್ಡಿ ಮಾದರಿಯಲ್ಲಿ ನಡೆಯಲಿದ್ದು, ದಕ್ಷಿಣ ಭಾರತದಲ್ಲಿ ಇಂತಹ ಪ್ರಥಮ ಪ್ರಯತ್ನವಾಗಿದೆ. ಎಲ್ಲ ಪಂದ್ಯಗಳಿಗೂ ವೇದಿಕೆ ಮೇಲೆ ನಗದು ಬಹುಮಾನ ವಿತರಿಸಲಿದ್ದೇವೆ. ಪ್ರತಿ ತಂಡಕ್ಕೆ 5 ಸ್ಪರ್ಧಿಗಳಿದ್ದು, ಕರ್ನಾಟಕದ 5 ತಂಡಗಳು ಸೇರಿದಂತೆ ವಿವಿಧ ಕಡೆಗಳಿಂದ 20 ತಂಡಗಳು ಭಾಗವಹಿಸಲಿವೆ ಎಂದು ಅವರು ಹೇಳಿದರು.