ಮುಂಬೈನಲ್ಲಿ ಮಮತಾ ಬ್ಯಾನರ್ಜಿ-ಮುಖೇಶ್ ಅಂಬಾನಿ ಭೇಟಿ

Update: 2017-11-01 06:40 GMT

ಮುಂಬೈ, ನ.1: ದೇಶದ ವಾಣಿಜ್ಯ ನಗರಿ ಮುಂಬೈಗೆ ನಾಲ್ಕು ದಿನಗಳ ಪ್ರವಾಸ ಕೈಗೊಂಡಿರುವ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಸಂಜೆ ಮುಖೇಶ್ ಅಂಬಾನಿ ತಮ್ಮ ಐಷಾರಾಮಿ ಬಂಗ್ಲೆಯಲ್ಲಿ ಏರ್ಪಡಿಸಿದ್ದ ಭೋಜನಕೂಟದಲ್ಲಿ ಭಾಗವಹಿಸಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ತಮ್ಮ ರಾಜ್ಯಕ್ಕೆ ಹೂಡಿಕೆದಾರರನ್ನು ಆಕರ್ಷಿಸಲು ಮುಂಬೈಗೆ ಆಗಮಿಸಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಬ್ಯಾನರ್ಜಿ ಮುಂದಿನ ವರ್ಷ ಕೋಲ್ಕತಾದಲ್ಲಿ ನಡೆಯಲಿರುವ ಬಂಗಾಳ ಗ್ಲೋಬಲ್ ಬ್ಯುಸಿನೆಸ್ ಸಮ್ಮಿಟ್‌ಗೆ ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್ ಮುಖೇಶ್ ಅಂಬಾನಿಯವರನ್ನು ಆಹ್ವಾನಿಸಿದ್ದಾರೆ.

ಮಂಗಳವಾರ ಸಂಜೆ ಮುಂಬೈಗೆ ಆಗಮಿಸಿದ ಮಮತಾ ಬ್ಯಾನರ್ಜಿ ತಾಜ್ ಮಹಲ್ ಪ್ಯಾಲೇಸ್‌ನಲ್ಲಿ ಕೆಲವು ಉದ್ಯಮಿಗಳೊಂದಿಗೆ ಸಭೆ ನಡೆಸಿದ್ದಾರೆ. ಪಶ್ಚಿಮಬಂಗಾಳಕ್ಕೆ ಹೂಡಿಕೆದಾರರನ್ನು ಆಕರ್ಷಿಸಲು ಬುಧವಾರ ಹಾಗೂ ಗುರುವಾರ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರಮೋದಿ ವಿರುದ್ಧ ಕಠಿಣ ನಿಲುವು ತಾಳಿರುವ ಹಾಗೂ ತನ್ನಂತೆಯೇ ಬಿಜೆಪಿಯನ್ನು ಸದಾ ಟೀಕಿಸುತ್ತಿರುವ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆಯವರನ್ನು ಮಮತಾ ಬ್ಯಾನರ್ಜಿ ಭೇಟಿಯಾಗುವ ಸಾಧ್ಯತೆಯಿದೆ. ಶಿವಸೇನೆಯ ಹಲವು ಸಂಸದರು ತೃಣಮೂಲ ಕಾಂಗ್ರೆಸ್‌ನ ಸಂಪರ್ಕದಲ್ಲಿದ್ದು, ಮಮತಾ ಬ್ಯಾನರ್ಜಿ ನ.3 ರಂದು ಕೋಲ್ಕತಾಕ್ಕೆ ವಾಪಸಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News