ಗೌರಿ ಲಂಕೇಶ್ ಹತ್ಯೆ ಪ್ರಕರಣ : ಹಂತಕರನ್ನು ಶೀಘ್ರ ಬಂಧಿಸಲು ಆಗ್ರಹಿಸಿ ಮೇಣದಬತ್ತಿ ಬೆಳಗಿಸಿ ಧರಣಿ

Update: 2017-11-05 14:41 GMT

ಬೆಂಗಳೂರು, ನ.5: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ನ.5 ಕ್ಕೆ ಎರಡು ತಿಂಗಳು ಕಳೆಯುತ್ತಿದ್ದರೂ, ಇದುವರೆಗೂ ಹಂತಕರನ್ನು ಬಂಧಿಸದಿರುವುದನ್ನು ಖಂಡಿಸಿ, ಶೀಘ್ರ ಹಂತಕರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಗೌರಿ ಲಂಕೇಶ್ ಹತ್ಯಾ ವಿರೋಧಿ ವೇದಿಕೆ ವತಿಯಿಂದ ಮೊಂಬತ್ತಿ ಬೆಳಗಿಸಿ ಧರಣಿ ಸತ್ಯಾಗ್ರಹ ನಡೆಸಲಾಯಿತು.

 ರಾಜ್ಯದಲ್ಲಿ ಸರಣಿ ವಿಚಾರವಾದಿಗಳ ಹತ್ಯೆಗಳು ನಡೆಯುತ್ತಿದ್ದರೂ ಹಂತಕರನ್ನು ಬಂಧಿಸಲು ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ನಗರದ ಪುರಭವನದ ಎದುರು ಸರಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಈ ವೇಳೆ ಮಾತನಾಡಿದ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್, ಸಾಮಾಜಿಕ ನ್ಯಾಯದ ಪರವಾಗಿ, ಉಳ್ಳವರ, ಕೋಮುವಾದಿ, ಭಯೋತ್ಪಾದಕರ ವಿರುದ್ಧವಾಗಿ ಧ್ವನಿ ಎತ್ತುತ್ತಿದ್ದ ಗೌರಿ ಲಂಕೇಶ್‌ರ ಹತ್ಯೆಯಾಗಿ ಎರಡು ತಿಂಗಳು ಕಳೆಯುತ್ತಿದೆ. ಆದರೆ, ಇದುವರೆಗೂ ಹಂತಕರನ್ನು ಬಂಧಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ದೂರಿದರು.

ರಾಜ್ಯ ಸರಕಾರ ನೇಮಿಸಿದ್ದ ವಿಶೇಷ ತನಿಖಾ ದಳ(ಎಸ್‌ಐಟಿ) ತನ್ನ ಕೆಲಸವನ್ನು ಸ್ಥಗಿತಗೊಳಿಸಿದ ಹಾಗೆ ಕಾಣುತ್ತಿದೆ. ಈ ತಂಡದಲ್ಲಿದ್ದ ಅನೇಕ ಹಿರಿಯ ಅಧಿಕಾರಿಗಳು ಈಗಾಗಲೇ ತಮ್ಮ ಮೂಲ ಸ್ಥಾನಗಳಿಗೆ ಹಿಂತುರಿಗಿದ್ದಾರೆ. ಇದನ್ನು ಗಮನಿಸಿದರೆ ಈ ಪ್ರಕರಣ ತನಿಖೆ ಮೂಲೆ ಗುಂಪು ಮಾಡುವ ವ್ಯವಸ್ಥಿತವಾದ ಹುನ್ನಾರ ಮಾಡಲಾಗುತ್ತಿದೆ ಎಂಬ ಅನುಮಾನ ಮೂಡುತ್ತಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ತನಿಖೆ ದಿಕ್ಕು ತಪ್ಪಬಾರದು ಎಂದು ಆಗ್ರಹಿಸಿದರು.

ಮತೀಯತೆಯ ಹೆಸರಿನಲ್ಲಿ ರಕ್ತ ಚೆಲ್ಲಲು ಬಿಡುವುದಿಲ್ಲ ಎಂದು ಹೇಳಿದ್ದರು ಮಹಾತ್ಮಗಾಂಧಿಜಿ. ಆದರೆ, ಇಂದು ದೇಶದ ಬೀದಿಗಳಲ್ಲಿ ನಿಂತು ಎಷ್ಟು ರಕ್ತ ಚೆಲ್ಲುತ್ತೀರಾ, ನಿಲ್ಲಿಸಿ ಎಂದು ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಬಹುಸಂಸ್ಕೃತಿಯನ್ನು ನಾಶ ಮಾಡುವ ಸಲುವಾಗಿ ಕೋಮುವಾದಿಗಳು ದೇಶದಲ್ಲಿ ಮತೀಯ ಹೆಸರಿನಲ್ಲಿ ದಾಳಿ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

ಕಳೆದ ಎರಡು ವರ್ಷಗಳ ಹಿಂದೆ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಕೊಲೆ ಮಾಡಿದರು. ಇದಕ್ಕೂ ಮೊದಲು ವಿಚಾರವಾದಿ ಲಿಂಗಣ್ಣ ಸತ್ಯಂಪೇಟ ಅನುಮಾನಸ್ವಾದವಾಗಿ ಸಾವು ಸಂಭವಿಸಿತು. ಅನಂತರ ಮಹಾರಾಷ್ಟ್ರದಲ್ಲಿ ವಿಚಾರವಾದಿಗಳ ದಾಬೋಲ್ಕರ್, ಪನ್ಸಾರೆಯನ್ನು ಹತ್ಯೆ ಮಾಡಲಾಯಿತು. ಒಂದು ಕಡೆ ವಿಚಾರವಾದಿಗಳನ್ನು ಹತ್ಯೆ ಮಾಡುವ ಮೂಲಕ ಸತ್ಯವನ್ನು ಹೊರಬರದಂತೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ದಲಿತ, ಅಲ್ಪಸಂಖ್ಯಾತ, ಮಹಿಳೆಯರ ವೆುೀಲೆ ದಾಳಿ ಮಾಡುವ ಮೂಲಕ ದೇಶದಲ್ಲಿ ರಕ್ತಸಿಕ್ತ ವಾತಾವರಣವನ್ನು ನಿರ್ಮಿಸುತ್ತಿದ್ದಾರೆ ಎಂದು ದೂರಿದರು.

 ರೈತ ಸಂಘದ ಮುಖಂಡರಾದ ಚುಕ್ಕಿನಂಜುಂಡಸ್ವಾಮಿ ಮಾತನಾಡಿ, ವಿಚಾರವಾದಿಗಳಾದ ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ. ಕಲ ಬುರ್ಗಿ ಹತ್ಯೆಯನ್ನು ಖಂಡಿಸಿ ನಡೆದ ಪ್ರತಿರೋದ ರ್ಯಾಲಿ, ಸಮಾವೇಶ ಎಲ್ಲದರಲ್ಲೂ ಗೌರಿ ಲಂಕೇಶ್ ಮುಂಚೂಣಿಯಲ್ಲಿ ನಿಂತಿದ್ದರು. ಹೀಗಾಗಿ, ಗೌರಿಯ ವಿಚಾರಗಳನ್ನು ಎದುರಿಸಲು ಸಾಧ್ಯವಾಗದ ಮನುವಾದಿಗಳು ಅವರನ್ನು ಹತ್ಯೆ ಮಾಡಿದ್ದಾರೆ. ಆದರೆ, ವ್ಯಕ್ತಿಗಳನ್ನು ಕೊಲ್ಲಬಹುದು, ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ ಎಂದರು.

 ಪ್ರತಿಭಟನೆಯಲ್ಲಿ ಆಂಧ್ರಪ್ರದೇಶದ ಮಾನವ ಹಕ್ಕುಗಳ ಸಂಘಟನೆಯ ಸದಸ್ಯರಾದ ವಸಂತಲಕ್ಷ್ಮಿ, ಪ್ರಾಧ್ಯಾಪಕ ಸಂಜಯ್ ಕಕ್ಕಾ , ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ, ಡಿವೈಎಫ್‌ಐ ಕಾರ್ಯದರ್ಶಿ ಬಸವರಾಜ್ ಪೂಜಾರ್, ಕೆವಿಎಸ್‌ನ ಸಂಜಯ್ ಕುಮಾರ್, ನರಸಿಂಹಮೂರ್ತಿ, ದಲಿತ ಮುಖಂಡ ಎನ್.ವೆಂಕಟೇಶ್, ಬರಹಗಾರ ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News