ಪೊಲೀಸ್ ಠಾಣೆಯಲ್ಲಿಯೇ ಗಲಾಟೆ : ಇಬ್ಬರು ಪೊಲೀಸರ ಅಮಾನತು
ಬೆಂಗಳೂರು, ನ.5: ನಗರದ ಮಹದೇವಪುರ ಠಾಣೆಯಲ್ಲಿ ಪೊಲೀಸರ ನಡುವೆ ನಡೆದ ಗಲಾಟೆ ಸಂಬಂಧ ಎಎಸ್ಸೈ ಅಮೃತೇಶ್ ಮತ್ತು ಮುಖ್ಯಪೇದೆ ಜಯಕಿರಣ್ ಅವರನ್ನು ಅಮಾನತು ಮಾಡಿ, ಮಾರತ್ತಹಳ್ಳಿ ಎಸಿಪಿ ನೇತೃತ್ವದಲ್ಲಿ ತನಿಖೆಗೆ ವೈಟ್ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ಆದೇಶಿಸಿದ್ದಾರೆ.
ಏನಿದು ಘಟನೆ?: ಶನಿವಾರ ಸಂಜೆ 6 ಗಂಟೆ ವೇಳೆಗೆ ಜೂಜಾಟ ಅಡ್ಡೆ ಮೇಲೆ ದಾಳಿ ನಡೆಸಿ ಪೊಲೀಸರು ಹತ್ತು ಜನರನ್ನು ಬಂಧಿಸಿ, 42 ಸಾವಿರ ರೂ. ಹಣವನ್ನು ವಶಕ್ಕೆ ಪಡೆದಿದ್ದರು. ಆರೋಪಿಗಳನ್ನು ಪೊಲೀಸ್ ಠಾಣೆಗೆ ಕರೆತಂದ ಎಎಸ್ಸೈ ಅಮೃತೇಶ್ ಮತ್ತು ಮುಖ್ಯಪೇದೆ ಜಯಕಿರಣ್ 8 ಗಂಟೆ ವೇಳೆಗೆ ಅವರನ್ನು ಬಿಟ್ಟು ಕಳುಹಿಸಿದ್ದರು. ಯಾವುದೇ ಕಾನೂನು ಪಾಲನೆ ಮಾಡದೇ ಆರೋಪಿಗಳನ್ನು ಬಿಟ್ಟಿದ್ದು, ಏಕೆ ಎಂದು ಎಸ್ಸೈ ಅಶ್ವಥ್ ಇಬ್ಬರನ್ನು ಪ್ರಶ್ನೆ ಮಾಡಿದ್ದಾರೆ.
ಅಶ್ವಥ್ ಪ್ರಶ್ನೆಗೆ ಅಮೃತೇಶ್ ಮತ್ತು ಜಯಕಿರಣ್ ಕೆಂಡಮಂಡಲವಾಗಿ ನಾವು ಬಿಟ್ಟಿದ್ದೇವೆ. ಅದನ್ನು ಪ್ರಶ್ನಿಸಲು ನೀವು ಯಾರು? ನಿನ್ನಂಥ ಎಸ್ಸೈಗಳನ್ನ ನೂರಾರು ಜನ ನೋಡಿದ್ದೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಈ ವೇಳೆ ಅಶ್ವಥ್ ಮೊಕದ್ದಮೆ ದಾಖಲಿಸದೇ ಬಿಡಬಾರದು ಎಂಬ ಜ್ಞಾನ ಇಲ್ಲವೇ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಈ ವೇಳೆ ಮೂವರ ನಡುವೆ ಮಾತಿನ ಚಕಾಮಕಿ ನಡೆದಿದ್ದು, ಏಕವಚನದಲ್ಲಿ ಬೈದಾಡಿಕೊಂಡು ಠಾಣೆಯ ಸಿಬ್ಬಂದಿ ಸಮ್ಮುಖದಲ್ಲೇ ಕೈ-ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ತಲುಪಿದೆ. ನಂತರ ಸ್ಟೇಷನ್ ಡೈರಿಯಲ್ಲಿ ದಾಖಲೆ ಮಾಡಿ ಗಲಾಟೆ ಬಗ್ಗೆ ಡಿಸಿಪಿ ಅಬ್ದುಲ್ ಅಹದ್ ಅವರಿಗೆ ಎಸ್ಸೈ ಅಶ್ವಥ್ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಪಿ ಅಬ್ದುಲ್ ಅಹದ್, ಪೊಲೀಸರು ಠಾಣೆಯಲ್ಲೇ ಪರಸ್ಪರ ಕೈ-ಕೈ ಮಿಲಾಯಿಸಿಕೊಂಡಿದ್ದಾರೆ. ಠಾಣೆ ಡೈರಿಯಲ್ಲಿ ದಾಖಲೆ ಮಾಡಿ ಗಲಾಟೆ ಬಗ್ಗೆ ಎಸ್ಸೈ ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಎಎಸ್ಸೈ ಮತ್ತು ಮುಖ್ಯಪೇದೆ ಕರ್ತವ್ಯ ಲೋಪ ಕಂಡು ಬಂದಿದ್ದು ಈಗ, ಇವರಿಬ್ಬರನ್ನು ಅಮಾನತು ಮಾಡಿ ಮಾರತ್ತಹಳ್ಳಿ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಅದೇಶ ನೀಡಲಾಗಿದೆ ಎಂದು ತಿಳಿಸಿದರು.