ನೋಟು ಬವಣೆಗೆ ಒಂದು ವರ್ಷ!

Update: 2017-11-08 05:47 GMT

ಪ್ರಧಾನಿ ಮೋದಿ ಓರ್ವ ಢೋಂಗಿ

ನೋಟುಗಳ ಅಮಾನ್ಯದಿಂದ ಕಪ್ಪುಹಣ ಹೊಂದಿರುವವರ ನಿದ್ದೆಗೆಡಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ, ಅವರು ಯಾರೂ ನಿದ್ದೆಗೆಡಲಿಲ್ಲ. ಅವರ ಬದಲು ಬಡವರು, ಕೂಲಿ ಕಾರ್ಮಿಕರು, ರೈತರು ಆರ್ಥಿಕವಾಗಿ ಸಂಕಷ್ಟಗಳಿಗೆ ಸಿಲುಕಿಕೊಂಡರು. ಹಲವು ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡರು. ಬಡವರು ಬ್ಯಾಂಕುಗಳ ಕಡೆಗೆ ಸುಳಿಯದಂತೆ ಮಾಡಿದರು. ಪ್ರಧಾನಿ ಮೋದಿ ಓರ್ವ ಢೋಂಗಿ.

 ಸಿದ್ದರಾಮಯ್ಯ, ಮುಖ್ಯಮಂತ್ರಿ

-------------------------------------------------------------------

ಜನ ಸಾಮಾನ್ಯರಿಗೆ ದುಸ್ವಪ್ನ

‘ನೋಟು ಅಮಾನ್ಯೀಕರಣ ಪ್ರಕ್ರಿಯೆ ಈ ದೇಶದ ಜನಸಾಮಾನ್ಯರಿಗೆ ಒಂದು ದುಸ್ವಪ್ನ..! ಇದನ್ನು ಸರಳೀಕರಿಸಿ ಹೇಳುವುದಾದರೆ ಜನಸಾಮಾನ್ಯರ ಆರ್ಥಿಕ ಚೈತನ್ಯವನ್ನು ಕುಗ್ಗಿಸಿ, ಬಂಡವಾಳಿಗರನ್ನು ಸಬಲೀಕರಿಸುವ ಉದ್ದೇಶ ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ಈಗಿನ ಬಿಜೆಪಿ, ಹಿಂದೆ ಜನಸಂಘವಾಗಿದ್ದಾಗ ಡಾ.ರಾಮಮನೋಹರ ಲೋಹಿಯಾ ಒಂದು ಮಾತನ್ನು ಹೇಳುತಿದ್ದರು. ಈ ಜಗತ್ತಿನಲ್ಲಿ ಆರ್ಥಿಕ ನೀತಿಯೇ ಇಲ್ಲದ ರಾಜಕೀಯ ಪಕ್ಷವೊಂದಿದೆ ಎಂದರೆ ಅದು ಜನಸಂಘ ಎಂದು. ಇಂದಿನ ಬಿಜೆಪಿಗೆ ಆರ್ಥಿಕ ನೀತಿ ಇದೆ ಎನ್ನುವುದಾದರೆ ಅದು ಎಂತಹ ಆರ್ಥಿಕ ನೀತಿ? ಅದು ಯಾರ ಹಿತ ಕಾಯಲು ಇದೆ? ಎನ್ನಲಿಕ್ಕೆ ನಮ್ಮ ಕಣ್ಣ ಮುಂದಿರುವ ಉತ್ತರ. ನೋಟು ಅಮಾನ್ಯೀಕರಣ ಮತ್ತು ಜಿಎಸ್ಟಿ ಅಂತಹ ಎಡವಟ್ಟುಗಳಷ್ಟೆ...!
ಈ ದೇಶದ ಉದ್ಯಮಿಗಳು, ಬಂಡವಾಳಿಗರು, ವ್ಯಾಪಾರಸ್ಥರು ಮತ್ತು ಪುರೋಹಿತಶಾಹಿಗಳ ಹಿತಕಾಯಲು ಉದಯಿಸಿದ ಪಕ್ಷವೊಂದರ ಸರಕಾರದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಇಂದು ಶೇಖರ್ ಗುಪ್ತ ಅವರ ಕಾಲಂ ಓದುತಿದ್ದೆ. ಅವರು ಜೋಸೆಪ್ ಹೆಲ್ಲರ್ ಎಂಬ ವಿಡಂಬನಾತ್ಮಕ ಕಾದಂಬರಿಕಾರನ ‘ಕ್ಯಾಚ್-22’ ಬಗ್ಗೆ ಬರೆಯುತ್ತಾ. ಲೆಪ್ಟಿನೆಂಟ್ ಮಿಲೊ ಮಿಂಡರ್ ಬಿಡರ್, ತನ್ನೊಂದಿಗೇ ವ್ಯಾಪಾರ ನಡೆಸುವ ಮೂಲಕ ಖ್ಯಾತಿಗೆ ಒಳಗಾಗಿರುತ್ತಾನೆ.
ಪ್ರತಿಯೊಬ್ಬರೂ ಒಳಗೊಂಡಿರುವ ವರ್ತುಲ ವ್ಯವಸ್ಥೆಯ ವಹಿವಾಟಿನಲ್ಲಿ ಸರಕಾರದ ಬೊಕ್ಕಸದಿಂದ ಹರಿದು ಬರುವ ಲಾಭವು ಕೊನೆಯಲ್ಲಿ ಒಬ್ಬನಲ್ಲಿಯೇ ಸಂಗ್ರಹಗೊಳ್ಳುವ ವಿಶಿಷ್ಟ ವಹಿವಾಟಿನ ಸ್ವರೂಪ ಅದಾಗಿರುತ್ತದೆ. ಹೀಗೆ ಮುಂದುವರೆಯುವ ಕತೆ ಕಡೆಗೆ ಮೋದಿ ಸರಕಾರದ ಆರ್ಥಿಕ ದ್ವಂದ್ವವನ್ನು ಅನಾವರಣಗೊಳಿಸುತ್ತದೆ’.

 ಡಾ.ಸಿ.ಎಸ್.ದ್ವಾರಕಾನಾಥ್
 ಹಿಂ.ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ

ದೇಶದ ಹಿತಕ್ಕಾಗಿ ದಿಟ್ಟ ನಿರ್ಧಾರ

ನೋಟುಗಳನ್ನು ನಿಷೇಧಿಸಿದಾಗ ದೇಶಾದ್ಯಂತ ಹಾಹಾಕಾರ ಎದ್ದಿತ್ತು. ಎಟಿಎಂಗಳಲ್ಲಿ ಕೆಲವು ದಿನಗಳ ಕಾಲ ಕೃತಕ ಕೊರತೆಯನ್ನು ಸೃಷ್ಟಿಸಲಾಯಿತು. ಆದರೆ ದಿನಗಳೆದಂತೆ ಜನತೆಗೆ ಪ್ರಧಾನಿಯವರ ಕ್ರಮದ ಹಿಂದಿನ ನಿಜವಾದ ಉದ್ದೇಶ ಅರ್ಥವಾಯಿತು. ಇದು ಆಗಲೇಬೇಕಿತ್ತು ಎಂದು ಅವರು ಹೇಳತೊಡಗಿದರು. ಕಳ್ಳನೋಟು ಹಾಗೂ ಕಪ್ಪು ಹಣವನ್ನು ಹೊರಗೆಳೆಯಲು ಇದೇ ಆಗಲೇ ಬೇಕಿತ್ತು. ಇದೊಂದು ದಿಟ್ಟತನದ ನಿರ್ಧಾರ ಎಂದು ಅವರಿಗೆ ಮನವರಿಕೆಯಾಗಿತ್ತು.
ಇದೀಗ ಒಂದು ವರ್ಷದ ಬಳಿಕ ಇದರ ಧನಾತ್ಮಕ ಅಂಶಗಳು ಗೋಚರಿಸುತ್ತಿವೆ. ದೇಶದ ಶೇ.90ರಷ್ಟು ಜನರಿಗೆ ಇದರಿಂದ ಯಾವುದೇ ತೊಂದರೆಯಾಗಿಲ್ಲ. ಅವರು ಇದರ ಲಾಭವನ್ನು ಪಡೆಯುತಿದ್ದಾರೆ. ಶೇ.10ರಷ್ಟು ಮಂದಿಗೆ ಅಲ್ಪಸ್ವಲ್ಪ ಸಮಸ್ಯೆಯಾದರೂ, ಅವರೂ ಇದಕ್ಕೆ ಹೊಂದಿಕೊಂಡಿದ್ದಾರೆ. ದೇಶದಲ್ಲೀಗ ಕಪ್ಪುಹಣ, ಕಳ್ಳನೋಟುಗಳೆಲ್ಲ ಕಡಿಮೆಯಾಗಿದ್ದು, ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಹೀಗಾಗಿ ದೇಶದ ಹಿತಕ್ಕಾಗಿಯೇ ಪ್ರಧಾನಿ ಮೋದಿ ಈ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆಂಬುದು ಸಾಬೀತಾಗಿದೆ.
 ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ

ದೊಡ್ಡ ಬಂಡವಾಳಿಗರಿಗೆ ಅನುಕೂಲ

ಗರಿಷ್ಠ ಮೊತ್ತದ ನೋಟು ರದ್ದು ಭಯೋತ್ಪಾದಕ ನಿಗ್ರಹ, ಕಪ್ಪುಹಣ ಪತ್ತೆ ಮಾತು ಸುಳ್ಳಾಗಿದೆ. ಅಮಾನ್ಯೀಕರಣದಿಂದ ಕೆಳ ಮಧ್ಯಮ ವರ್ಗ ಹಾಗೂ ಅಸಂಘಟಿತ ವಲಯದ ಬಡವರು ಸೇರಿ ನಿತ್ಯದ ವ್ಯವಹಾರವನ್ನು ನಗದು ಮೂಲಕವೇ ನಡೆಸುತ್ತಿದ್ದ ಗ್ರಾಮೀಣ ಸಮೂಹಕ್ಕೆ ದೊಡ್ಡ ಹೊಡೆತ ಬಿದಿದ್ದೆ.
ಅಂತಾರಾಷ್ಟ್ರೀಯ ಆರ್ಥಿಕ ನೀತಿ ಹೇರಿಕೆಯ ಮೂಲಕ ತೃತೀಯ ರಾಷ್ಟ್ರಗಳಲ್ಲಿನ ಸಣ್ಣ ವ್ಯಾಪಾರಿ ವಲಯದ ಕತ್ತು ಹಿಸುಕಿ ದೊಡ್ಡ ಬಂಡವಾಳಿಗರಿಗೆ ಅನುಕೂಲ ಕಲ್ಪಿಸಲು 500 ರೂ., 1000 ರೂ.ನೋಟುಗಳ ಅಮಾನ್ಯೀಕರಣ ಮಾಡಲಾಗಿದೆ ಎಂಬ ಸತ್ಯವನ್ನು ಸಾಮಾನ್ಯ ಜನರು ಅರಿತುಕೊಳ್ಳಬೇಕು.

-ವಸಂತರಾಜ್, ಜನಶಕ್ತಿ ಸಂಪಾದಕ

ನಕಲಿ ನೋಟುಗಳಿಗೆ ಕಡಿವಾಣ

ನೋಟು ನಿಷೇಧದಿಂದ ನಮ್ಮ ಶತ್ರು ರಾಷ್ಟ್ರಗಳಿಂದ ಬರುತ್ತಿದ್ದ ಬರುತ್ತಿದ್ದ ನಕಲಿ ನೋಟುಗಳಿಗೆ ಕಡಿವಾಣ ಬಿದ್ದಿದೆ. ಇದರಿಂದ ದೇಶದಲ್ಲಿ ನಕಲಿ ನೋಟುಗಳ ಸಂಖ್ಯೆ ಸಂಪೂರ್ಣವಾಗಿ ಕಡಿಮೆಯಾಗಿವೆ. ಅಲ್ಲದೆ, ಜನ ಸಾಮಾನ್ಯರು ನೋಟು ನಿಷೇಧದ ವಿಷಯವನ್ನು ಮರೆತು ಪ್ರಸ್ತುತ ಸ್ಥಿತಿಗೆ ಹೊಂದಿಕೊಂಡಿದ್ದಾರೆ.

-ರಾಜೇಶ ನಾಯಕ್, ಬಿಜೆಪಿ ಜಿಲ್ಲಾ ವಕ್ತಾರ

ಕೇಂದ್ರ ಸರಕಾರದ ದುಡುಕಿನ ನಿರ್ಧಾರ

ನೋಟು ಅಮಾನ್ಯೀಕರಣದಿಂದಾಗಿ ದೇಶದ್ರೋಹಿ ಸಂಘಟನೆಗಳು ಸಂಗ್ರಹಿಸಿಟ್ಟಿದ್ದ ಕಪ್ಪುಹಣದ ಚಲಾವಣೆಗೆ ಕಡಿವಾಣ ಬಿದ್ದಿದೆ. ಆದರೆ, ನೋಟು ಅಮಾನೀಕರಣದ ಬೆನ್ನಲ್ಲೇ ಜಿಎಸ್‌ಟಿ ತೆರಿಗೆ ಪದ್ಧತಿ ಜಾರಿಗೆ ತಂದಿರುವುದು ಕೇಂದ್ರ ಸರಕಾರದ ದುಡುಕಿನ ನಿರ್ಧಾರ.

-ಹರೀಶ್ ಜಿ.ಆಚಾರ್ಯ, ಜಿಲ್ಲಾಧ್ಯಕ್ಷರು, ಪೀಪಲ್ಸ್ ಮೂವ್‌ಮೆಂಟ್ ಫಾರ್ ಹ್ಯೂಮನ್ ರೈಟ್ಸ್

ಒಳ್ಳೆಯ ಕ್ರಮವೇ. ಆದರೆ, ಸಿದ್ಧತೆ ಇರಲಿಲ್ಲ

ನೋಟು ನಿಷೇಧ ಲಾಭದಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟಿಸಿತ್ತು. ನೋಟು ನಿಷೇಧದ ಮೂಲಕ ಬಡವರ ಉದ್ಧಾರ, ಧನಿಕರ ಕಪ್ಪುಹಣ ಸಂಹಾರ ಆಗಬೇಕಿತ್ತು. ಆದರೆ, ಅದಾಗಲಿಲ್ಲ. ಕಪ್ಪುಹಣ ವಿವಿಧ ಮಾರ್ಗಗಳ ಮೂಲಕ ಬ್ಯಾಂಕಿಗೆ ಜಮಾ ಆಗಿ ಹೋಯಿತು. ಹೀಗೆ ಜಮಾ ಆದ ಹಣವನ್ನು ನಿರ್ವಹಿಸುವ ಕಷ್ಟ ಬ್ಯಾಂಕ್ ಮತ್ತು ತೆರಿಗೆ ಇಲಾಖೆಯ ಮುಂದಿದೆ. ಲಾಭ ಆಗಬೇಕಿತ್ತು. ಆಗಲಿಲ್ಲ. ಇದರಿಂದ ನಷ್ಟವೇ ಆಗಿದೆ. ಹೊಸ ನೋಟುಗಳ ಮುದ್ರಣ, ಹಳೆ ನೋಟುಗಳ ನಾಶ ಮತ್ತು ಇದನ್ನೆಲ್ಲಾ ನಿರ್ವಹಿಸಲು ಬ್ಯಾಂಕ್ ಮತ್ತು ತೆರಿಗೆ ಅಧಿಕಾರಿಗಳಿಗೆ ಹೆಚ್ಚಿನ ಸಂಬಳ ಹೀಗೆ ದೇಶಕ್ಕೆ ನಷ್ಟವೇ ಆಗಿದೆ.

ಒಳ್ಳೆಯ ಕ್ರಮವೇ. ಆದರೆ, ಸಿದ್ಧತೆ ಇರಲಿಲ್ಲ. ನಮ್ಮ ದೇಶದ ಬ್ಯಾಂಕಿಂಗ್ ವ್ಯವಸ್ಥೆಯೇ ಒಳ ವೈರಿಯಾಯಿತು. ಜನ ಸಾಮಾನ್ಯನ ಸಹಕಾರದ ನಡುವೆಯೂ ನೋಟು ನಿಷೇಧ ಒಂದು ಸರಕಾರಿ ಕಾರ್ಯಕ್ರಮದಂತೆ ಆಗಿ ಹೋಗಿದ್ದು ದುರಂತ. ಉಳ್ಳವರ ಖಜಾನೆಯಲ್ಲಿ ಹಳೆ ನೋಟುಗಳ ಭಾಗದಲ್ಲಿ ಹೊಸ ನೋಟುಗಳು ಶೇಖರವಾದವು. ಜನ ಸಾಮಾನ್ಯ ಎಂದಿನಂತೆ ಹಣದುಬ್ಬರದ ನಡುವಿನ ಜೀವನವನ್ನು ಒಪ್ಪಿಕೊಂಡ

 ಶಿವಕುಮಾರ್ ಚಾರ್ಟರ್ಡ್ ಅಕೌಂಟೆಂಟ್, ಬೆಂಗಳೂರು

ಪಟ್ಟ ಬವಣೆಗೆ ಪ್ರತಿಫಲ ಇನ್ನೂ ಸಿಕ್ಕಿಲ್ಲ

ಒಂದು ಉತ್ತಮ ಯೋಜನೆ ಸರಕಾರದ ಪೂರ್ವ ತಯಾರಿ ಇಲ್ಲದೆ ವಿಫಲವಾಗಿದೆ. ನೋಟು ಅಮಾನ್ಯೀಕರಣ ಕಪ್ಪು ಹಣ, ಖೋಟಾ ನೋಟು ಹಾಗೂ ಭಯೋತ್ಪಾದಕ ಕೃತ್ಯಗಳಿಗೆ ಹರಿದುಬರುತ್ತಿದ್ದ ಹಣಕಾಸಿನ ಮೂಲವನ್ನು ಕಡಿತಗೊಳಿಸುವುದು ಎಂದಿದ್ದ ಸರಕಾರದ ಮಾತು ಹುಸಿಯಾಗಿದೆ. ನೋಟು ಅಮಾನ್ಯೀಕರಣದಿಂದ ಹೊಡೆತದಿಂದ ಸಣ್ಣ, ಮಧ್ಯಮ ಮತ್ತು ಕಿರು ಕೈಗಾರಿಕೆಗಳು, ರಿಯಲ್ ಎಸ್ಟೇಟ್ ವಲಯ, ಸಹಕಾರಿ ಕ್ಷೇತ್ರ ಇನ್ನೂ ಚೇತರಿಸಿಕೊಂಡಿಲ್ಲ.

ಉದ್ಯೋಗ ಸೃಷ್ಟಿಯ ಮೇಲೆಯೂ ಹೊಡೆತ ಬಿದ್ದಿದ್ದು, ಆರ್ಥಿಕ ಬೆಳವಣಿಗೆಯೂ ಕುಸಿದಿದೆ. ಬಹುತೇಕ ರಾಜ್ಯ ಸರಕಾರಗಳಿಗೆ ಸ್ಟಾಂಪ್ ಡ್ಯೂಟಿಯಿಂದ ಬೊಕ್ಕಸಕ್ಕೆ ಬರುತ್ತಿದ್ದ ಹಣ ಕಡಿಮೆಯಾಗಿದೆ. ಬ್ಯಾಂಕ್‌ಗಳಲ್ಲಿ ಹಣವಿದ್ದರೂ ಸಾಲ ಸೃಷ್ಟಿಯಾಗುತ್ತಿಲ್ಲ. ಮೇಲ್ನೋಟಕ್ಕೆ ತೆರಿಗೆದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ನಗದುರಹಿತ ಹಾಗೂ ಡಿಜಿಟಲ್ ಆರ್ಥಿಕತೆಗೆ ಹೆಚ್ಚಿನ ಒತ್ತು ಸಿಕ್ಕಿದೆ. ಮುಂದಿನ ದಿನಗಳಲ್ಲಿ ಸರಕಾರ ಸೈಬರ್ ಕ್ರೈಮ್ ತಡೆಯುವಲ್ಲಿ ವಿಫಲವಾದರೆ ಜನಸಾಮಾನ್ಯರಿಗೆ ಹೆಚ್ಚಿನ ತೊಂದರೆಯಾಗಲಿದೆ. ಸಾಮಾನ್ಯ ಜನ ಪಟ್ಟ ಬವಣೆಗೆ ಪ್ರತಿಫಲ ಇನ್ನೂ ಸಿಕ್ಕಿಲ್ಲ.
 ಡಾ.ಎಸ್.ಆರ್.ಕೇಶವ್, 
ಅರ್ಥಶಾಸ್ತ್ರ ಪ್ರಾಧ್ಯಾಪಕರು, ಬೆಂಗಳೂರು ವಿವಿ

ಆರ್ಥಿಕ ಭಯೋತ್ಪಾದನೆ!

‘ಚರಿತ್ರೆಯ ಈಚಿನ ಅತಿ ಭೀಕರ ಅನಾಹುತಗಳನ್ನು ಆಯಾ ದಿನಾಂಕಗಳಿಂದ ನೆನೆಸಿಕೊಳ್ಳುವ ವಾಡಿಕೆ ಹುಟ್ಟಿಕೊಂಡಿದೆಯಲ್ಲ, ‘ನೈನ್ ಇಲವೆನ್’, ‘ಟ್ವೆಂಟಿಸಿಕ್ಸ್ ಇಲವೆನ್’.... ಹಾಗೇ ನೋಟು ರದ್ದಿನ ಅನಾಹುತವನ್ನೂ ‘ಎಯ್ಟ್ ಇಲವೆನ್’ ಎಂದು ನೆನೆಸಿಕೊಂಡರೇನೂ ತಪ್ಪಿಲ್ಲ. ಯಾಕೆಂದರೆ ಸರಕಾರವೇ ಇಂಥದೊಂದು ಆರ್ಥಿಕ ಭಯೋತ್ಪಾದನೆಯ ಕೃತ್ಯ ನಡೆಸಿದ ಮತ್ತೊಂದು ಉದಾಹರಣೆಯೇ ದೇಶದಲ್ಲಿಲ್ಲ.
ಯಾವ ಪೂರ್ವಸಿದ್ಧತೆಯೂ ಇಲ್ಲದೆ, ರಿಸರ್ವ್ ಬ್ಯಾಂಕನ್ನೂ ಕಡೆಗಣಿಸಿ, ಏಕಾಏಕಿ ಶೇಕಡಾ 86ರಷ್ಟು ನಗದನ್ನು ಹಿಂತೆಗೆದುಕೊಂಡು, ಅಸಂಘಟಿತ ಅರ್ಥವ್ಯವಸ್ಥೆಯನ್ನು ಸಂಪೂರ್ಣ ನಾಮಾವಶೇಷ ಮಾಡಿ, ನೂರಕ್ಕೂ ಹೆಚ್ಚು ಜನ ಬರೀ ಕ್ಯೂಗಳಲ್ಲಿ ಕೊನೆಯುಸಿರೆಳೆಯುವಂತೆ ಮಾಡಿ, ಆ ಹೊಡೆತಕ್ಕೆ ದೇಶವಿನ್ನೂ ಏದುಬ್ಬಸಪಡುವಾಗ, ಸೊಲ್ಲೆತ್ತಿದರೆ ‘ಗಡಿಗಳಲ್ಲಿ ನಮ್ಮ ಯೋಧರು ಕಾಯುತ್ತಿಲ್ಲವೇ?’ ಎಂಬ ಅಸಂಬದ್ಧ ದುರಹಂಕಾರದ ಮಾತುಗಳನ್ನು ಉಚಾಯಿಸಿಯೂ, 56 ಇಂಚು ಎದೆ ಉಬ್ಬಿಸಿ ತಿರುಗುವವರನ್ನು ಕೊಂಡಾಡುತ್ತಿರುವ ಭಕ್ತಗಣವನ್ನು ಪಡೆದ ಭಾರತವೇ ಧನ್ಯ ಧನ್ಯ...!’

 ಎನ್.ಎಸ್.ಶಂಕರ್, ಹಿರಿಯ ಪತ್ರಕರ್ತ, ಚಿತ್ರ ನಿರ್ದೇಶಕ, ಬೆಂಗಳೂರು

ಅಕ್ರಮವಾಗಿ ಸಂಗ್ರಹಿಸಿದ್ದ ಹಣವೆಲ್ಲ ನಾಶ

ನೋಟ್ ನಿಷೇಧದಿಂದ ಅಕ್ರಮವಾಗಿ ಸಂಗ್ರಹಿಸಿದ್ದ ಹಣವೆಲ್ಲ ನಾಶವಾಗಿದೆ. ಕಷ್ಟಪಟ್ಟು ಸಂಪಾದನೆ ಮಾಡಿರುವ ಹಣ ಉಳಿದುಕೊಂಡಿದೆ. ಇದರಿಂದ ಜನರಿಗೆ ಅನುಕೂಲವಾಗಿದೆ. ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಹಣದ ಹೊಳೆ ಹರಿಯುವುದು ತಪ್ಪುತ್ತದೆ.

 ಗುರುಮೂರ್ತಿ ಬೈಯಪ್ಪನಹಳ್ಳಿ, ಶಿಡ್ಲಘಟ್ಟ

ಆಶಾದಾಯಕ ಬೆಳವಣಿಗೆ

ನೋಟು ನಿಷೇಧದಿಂದ ಸದ್ಯ ಆರ್ಥಿಕ ವ್ಯವಹಾರಕ್ಕೆ ಸ್ವಲ್ಪ ಮಟ್ಟಿನ ಹೊಡೆತ ಬಿದ್ದಿರಬಹುದು. ಆದರೆ ಅದು ತಾತ್ಕಾಲಿಕ. ನಗದು ವ್ಯವಹಾರ ಕಡಿಮೆಯಾದರೂ ಇ-ಕಾಮರ್ಸ್ ವ್ಯವಹಾರ ವೃದ್ಧಿಯಾಗುತ್ತಿದೆ. ಇದು ಆಶಾದಾಯಕ ಬೆಳವಣಿಗೆ. ಭವಿಷ್ಯದಲ್ಲಿ ಈಗಿನ ಎಲ್ಲ ಸಮಸ್ಯೆಗೆ ಪರಿಹಾರ ಸಿಗಲಿದೆ.

 ವಾಟಿಕಾ ಪೈ, ಅಧ್ಯಕ್ಷೆ, ಕೆನರಾ ಛೇಂಬರ್ ಆಫ್ ಕಾಮರ್ಸ್, ಮಂಗಳೂರು

ನಿರುದ್ಯೋಗ ಹೆಚ್ಚಳ

ನೋಟು ಬ್ಯಾನ್ ಮಾಡಿದ್ದು ಒಳ್ಳೆಯದೇ ಆದರೆ, ಯಾವುದೇ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದೆ ಬ್ಯಾನ್ ಮಾಡಿದ್ದು ಸರಿಯಲ್ಲ. ದಿಢೀರ್ ಆಗಿ ನೋಟ್ ಬ್ಯಾನ್ ಮಾಡಿದ್ದರಿಂದ ಹಾಗೂ 2 ಸಾವಿರ ರೂ. ಹೊಸ ನೋಟುಗಳನ್ನು ಜಾರಿಗೆ ತಂದಿದ್ದರಿಂದ ಬಡವರು ಹಾಗೂ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುವಂತಾಯಿತು. ಹಾಗೂ ದೇಶದಲ್ಲಿ ಸಣ್ಣ ಸಣ್ಣ ಕೈಗಾರಿಕೆಗಳು ಮುಚ್ಚಿ ಹೋದವು. ಇದರಿಂದ ನಿರುದ್ಯೋಗ ಹೆಚ್ಚಾಯಿತು’

 ಶಂಕರಪ್ಪ ಹೈಕೋರ್ಟ್, ಹಿರಿಯ ನ್ಯಾಯವಾದಿ

ಹುಸಿಯಾದ ನಿರೀಕ್ಷೆ

ನೋಟ್ ನಿಷೇಧದಿಂದಾಗಿ ಕಪ್ಪು ಹಣವು ನಿರ್ಮೂಲನೆಯಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಬ್ಯಾಂಕುಗಳಲ್ಲಿ ಕಪ್ಪು ಹಣವನ್ನು ಬಿಳುಪಾಗಿಸಿಕೊಂಡಿದ್ದಾರೆ. ಅದನ್ನು ತಡೆಯಲು ಕೇಂದ್ರ ಸರಕಾರ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲದ ಕಾರಣ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆಯಾಗಿಲ್ಲ.

 ಪ್ರೇಮ.ಎಸ್. ವಿದ್ಯಾರ್ಥಿನಿ ಶಿಡ್ಲಘಟ್ಟ

ಭವಿಷ್ಯದಲ್ಲಿ ಒಳ್ಳೆಯ ಪರಿಣಾಮ

ಭಾರತ ದೇಶ ಅಭಿವೃದ್ಧಿಶೀಲ ರಾಷ್ಟ್ರವಾಗಿದ್ದು ನೋಟು ನಿಷೇಧದಿಂದ ನಮ್ಮ ದೇಶಕ್ಕೆ ಒಳಿತಾಗಿದೆ. ಸದ್ಯಕ್ಕೆ ನೋಟು ನಿಷೇಧದಿಂದ ದೇಶ ಮತ್ತು ರಾಜ್ಯಕ್ಕೆ ಲಾಭ ನಷ್ಟವೇನು ಕಾಣುತ್ತಿಲ್ಲ.ಆದರೆ ಮುಂದಿನ ದಿನಗಳಲ್ಲಿ ಒಳ್ಳೆಯ ಪರಿಣಾಮ ಬಿರಲಿದೆ.

 ಟಿ.ಪಿ.ವಿಶ್ವನಾಥ್, ಉಪ ಪ್ರಾಂಶುಪಾಲರು ವಿದ್ಯೋಧಯ ಪದವಿ ಪೂರ್ವ ಕಾಲೇಜು ತಿ.ನರಸೀಪುರ

ಕಷ್ಟಗಳು ಮತ್ತಷ್ಟು ಹೆಚ್ಚಿವೆ

ನೋಟು ನಿಷೇಧದ ಕ್ರಮದ ಹಿಂದೆ ಯಾವುದೇ ಆರ್ಥಿಕ ಚಿಂತನೆ ಇದ್ದಂತೆ ಕಾಣುತ್ತಿಲ್ಲ. ಜನಸಾಮಾನ್ಯರ ಕಷ್ಟಗಳು ಪರಿಹಾರವಾಗುವ ಬದಲಿಗೆ ಕಷ್ಟಗಳು ಮತ್ತಷ್ಟು ಹೆಚ್ಚಿವೆ. ನೋಟು ನಿಷೇಧದಿಂದ ಕಪ್ಪುಹಣ, ಭ್ರಷ್ಟಾಚಾರಗಳನ್ನು ತಡೆಯಲಿಕ್ಕೆ ಸಾಧ್ಯ ಎಂಬ ಸರಕಾರದ ಈ ವಾದದ ತಲೆಬುಡವೇ ಅರ್ಥವಾಗುತ್ತಿಲ್ಲ. ಸರಕಾರ ತೆರಿಗೆ ವಂಚಕರನ್ನು ಪತ್ತೆಹಚ್ಚಬೇಕೆಂದರೆ ಸಂಬಂಧಿತ ಇಲಾಖೆಗಳ ಆಡಳಿತವನ್ನು ಸರಿಪಡಿಸಬೇಕು.

 ಎ.ಶಶಿಕುಮಾರ್ ಶಿಡ್ಲಘಟ್ಟ

ಭವಿಷ್ಯದ ದಿನಗಳಲ್ಲಿ ಇದಕ್ಕೆ ಪರಿಹಾರ

ನೋಟು ಅಮಾನ್ಯದ ಉದ್ದೇಶ ಒಳ್ಳೆಯದಿರಬಹುದು. ಆದರೆ, ಮಾಡಿದ ಸಂದರ್ಭ ಅದಕ್ಕೆ ಪೂರಕವಾಗಿರಲಿಲ್ಲ. ಅದರ ಬೆನ್ನಿಗೆ ಜಿಎಸ್‌ಟಿ ಕೂಡ ಬಂತು. ಇದು ವ್ಯಾಪಾರಿಗಳ ಆರ್ಥಿಕ ಸ್ಥಿತಿಯ ಮೇಲೆ ಭಾರೀ ಹೊಡೆತವನ್ನೇ ನೀಡಿತು. ವ್ಯಾಪಾರ-ವಹಿವಾಟು ಪ್ರತಿಯೊಂದು ಕ್ಷೇತ್ರದೊಂದಿಗೆ ಹೊಂದಾಣಿಕೆಯಲ್ಲೇ ನಡೆಯುತ್ತಿದೆ. ಹಾಗಾಗಿ ಶ್ರೀಮಂತನಿಂದ ಹಿಡಿದು ಬಡವರ ಮೇಲೆ ಇದರ ಪರಿಣಾಮ ಅಪಾರ. ಸದ್ಯ ಇದರಿಂದ ತೊಂದರೆಯಾದರೂ ಭವಿಷ್ಯದ ದಿನಗಳಲ್ಲಿ ಇದಕ್ಕೆ ಪರಿಹಾರ ಸಿಗಬಹುದೇನೋ?
 ಹಾಜಿ ಎಸ್.ಎಂ. ರಶೀದ್, ಅಧ್ಯಕ್ಷರು, ಬ್ಯಾರೀಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ-ಮಂಗಳೂರು)

ಮೋದಿಯವರ ಹುಲಿ ಸವಾರಿ

ಮೋದಿಯವರ ಕೂಟ 2013ರ ನಂತರ ನೀಡುತ್ತಾ ಬಂದ ಚಿತ್ರಣ ಹಾಗೂ ಭರವಸೆಗಳು ವಾಸ್ತವಕ್ಕೆ ಬಲು ದೂರವಾಗಿದ್ದವು. ಆದರೆ, ಜನರನ್ನು ನಂಬಿಸಿದ್ದರಿಂದ ಮತ್ತು ಈ ಸುಳ್ಳುಗಳನ್ನು ದೊಡ್ಡ ಗಂಟಲಲ್ಲಿ ಪ್ರಚಾರ ಮಾಡಿದ ಭಾರೀ ದೊಡ್ಡ ಭಕ್ತ ಪಡೆಗಳನ್ನು ಸಾಕಿದ್ದರಿಂದ ಅವರೇ ತೊಂದರೆಗೆ ಸಿಲುಕಿದ್ದಾರೆ. ಇದೊಂದು ಹುಲಿ ಸವಾರಿ.

ಅದನ್ನು ತಣಿಸಬೇಕೆಂದರೆ ಹೊಸ ಹೊಸ ಸರ್ಕಸ್‌ಗಳನ್ನು ಮಾಡುತ್ತಾ ಇರಬೇಕಾಗುತ್ತದೆ. ಏಕಕಾಲದಲ್ಲಿ ತಾವು ಯಾರಿಗಾಗಿ ಅಧಿಕಾರಕ್ಕೇರಿದರೋ ಆ ಕಾರ್ಪೊರೇಟ್ ಕಂಪೆನಿಗಳ ಹಿತ ಕಾಯಬೇಕು. ಇನ್ನೊಂದೆಡೆ ಭಕ್ತಗಣದ ಮುಂದೆ ರಾಷ್ಟ್ರಹಿತದ ಪೋಸು ದಿನೇ ದಿನೇ ದೊಡ್ಡ ಕಟೌಟಿನಲ್ಲಿ ಬಿತ್ತರವಾಗಬೇಕು.
ನೋಟು ರದ್ದತಿ, ಮಧ್ಯರಾತ್ರಿಯಲ್ಲಿ ಜಿಎಸ್‌ಟಿ ಎಲ್ಲವೂ ಅದರ ಭಾಗವೇ. ಹಾಗೆಯೇ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಪಿಎಂಕೆವಿವೈ ಇತ್ಯಾದಿಗಳು. ಈ ಆಟ ಹೆಚ್ಚು ದಿನ ನಡೆಯುವುದಿಲ್ಲ. ಹುಲಿಯನ್ನು ತಣಿಸುವುದು ಕಷ್ಟ’

 ಡಾ.ವಾಸು, ಸಾಮಾಜಿಕ ಹೋರಾಟಗಾರ

ನೋಟು ನಿಷೇಧ, ಜಿಎಸ್‌ಟಿಯಿಂದ ಲಾಭವಾಗಿಲ್ಲ

ನೋಟು ಅಮಾನ್ಯೀಕರಣದಿಂದ ಹೆಚ್ಚಿನ ಪರಿಣಾಮ ಬೀರಿದ್ದು, ದುರ್ಬಲ ವರ್ಗದವರಿಗೆ ಹಾಗೂ ಮಧ್ಯಮ ವರ್ಗದವರಿಗೆ. ಜನರ ಬಳಿ ಹಣವಿಲ್ಲದೆ ವ್ಯಾಪಾರ ವಹಿವಾಟಿಗೂ ಹೊಡೆತ ಬಿತ್ತು. ಇದೆಲ್ಲದರಿಂದ ಹೊರ ಬರುವಷ್ಟರಲ್ಲಿ ಜಿಎಸ್‌ಟಿಯ ಏಟು ಬಿತ್ತು. ಜಿಎಸ್‌ಟಿ ಕ್ರಮವನ್ನು ಅನುಸರಿಸಲು ಸರಕಾರವೇ ಸಿದ್ಧವಿಲ್ಲ. ನೋಟು ಅಮಾನ್ಯದಿಂದ ರಾಷ್ಟ್ರಕ್ಕೇನು ಲಾಭವಿಲ್ಲ. ಆದರೆ ಎಲ್ಲರೂ ತಮ್ಮ ಹಣಕ್ಕೆ ದಾಖಲೆ ಇಡಲು ಅನುಕೂಲವಾಯಿತು. ಆದರೂ ಕಪ್ಪುಹಣವನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ.

 ಸುರೇಶ್ ಕುಮಾರ್ ಜೈನ್, ಕಾರ್ಯದರ್ಶಿ, ಮೈಸೂರು ಕೈಗಾರಿಕೆಗಳ ಸಂಘ

ಪೂರ್ವಸಿದ್ಧತೆ ಮತ್ತು ದೂರದೃಷ್ಟಿಯ ಕೊರತೆ

ನೋಟು ನಿಷೇಧದಿಂದ ಸಾಮಾನ್ಯ ಜನರ ವಹಿವಾಟಿಗೆ ಧಕ್ಕೆ ಉಂಟಾಗಿದೆ. ನಿರುದ್ಯೋಗ ಸಮಸ್ಯೆ ಉದ್ಭವವಾಗಿದೆ, ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ. ಹಾಗಾಗಿ ಜಿಡಿಪಿ ದರ ಕುಸಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೀರಿಕ್ಷೆ ಹುಸಿಯಾಗಿದ್ದು, ಕಪ್ಪು ಹಣ ಹೊರತೆಗೆಯುತ್ತೀನಿ ಎಂದು ರೈತರು, ಸಾಮನ್ಯ ವರ್ಗದವರು, ಮಧ್ಯಮ ವರ್ಗದವರು ಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ. ಮೇಲ್ನೋಟಕ್ಕೆ ಒಳ್ಳೆಯ ಕ್ರಮವಾದರೂ ಪೂರ್ವಸಿದ್ಧತೆ ಮತ್ತು ದೂರದೃಷ್ಟಿ ಇಲ್ಲದೆ ವಿಫಲರಾಗಿದ್ದಾರೆ.

 ಬಡಗಲಪುರ ನಾಗೇಂದ್ರ, ರೈತ ಮುಖಂಡ

ನೋಟು ನಿಷೇಧದಿಂದ ಲಾಭ

ನೋಟು ನಿಷೇಧ ಕ್ರಮವು ಉತ್ತಮ ಹಾಗೂ ಪ್ರಸ್ತುತ ಸಂದರ್ಭದಲ್ಲಿ ಅತ್ಯವಶ್ಯಕವೂ ಹೌದು. ದೇಶ ಮತ್ತು ರಾಜ್ಯಕ್ಕೆ ನೋಟು ನಿಷೇಧದಿಂದ ಲಾಭವಾಗಿದೆ. ಭ್ರಷ್ಠ ರಾಜಕಾರಣಿಗಳು ಹಾಗೂ ಅಕ್ರಮ ಸಂಪತ್ತು ಕ್ರೋಢಿಕರಿಸಿದ್ದ ಉದ್ಯಮಿಗಳ ಕಪ್ಪು ಹಣವನ್ನು ನಾಶ ಪಡಿಸಲು ಒಳ್ಳೆಯ ಯೋಜನೆ. ನೋಟು ನಿಷೇಧದಿಂದ ಸಾಕಷ್ಟು ತೆರಿಗೆ ಬಂದು ದೇಶ ಮತ್ತು ನಾಡಿಗೆ ಲಾಭವಾಗಿದೆ. ಜಮ್ಮು ಕಾಶ್ಮೀರ ಕಣಿವೆ ರಾಜ್ಯಗಳಿಗೆ ಅಕ್ರಮ ಹಣ ಅರಿದು ಬರುವುದು ಸ್ಥಗಿತಗೊಂಡಿರುವುದರಿಂದ ಸೈನಿಕರ ಮೇಲೆ ಕಲ್ಲೆಸತ ಕಡಿಮೆಯಾಗಿದೆ.

ರಂಗು ನಾಯಕ್, ಬಿಜೆಪಿ ಮೈಸೂರು ಜಿಲ್ಲಾ ಎಸ್ಟಿ ಘಟಕದ ಅಧ್ಯಕ್ಷ

ಬೇಕಾಗಿತ್ತಾ ಎನ್ನುವ ಪ್ರಶ್ನೆ

ದಿಲ್ಲಿಯ ಬದಲು ಗುಜರಾತಿನ ಗಾಂಧಿನಗರಕ್ಕೆ ರಾಜಧಾನಿಯನ್ನು ಬದಲಾಯಿಸುತ್ತೇನೆ ಎಂದಿದ್ದರೆ, ಆಗುವುದಕ್ಕಿಂತ ದೊಡ್ಡ ಆಘಾತವಾಗಿದೆ ಈ ನೋಟು ಅಮಾನ್ಯೀಕರಣದಿಂದ. ಬ್ಯಾಂಕ್ ಮ್ಯಾನೇಜರ್ ಆಗಿದ್ದ ನಾನು, ನವೆಂಬರ್ ಎಂಟರ ನಂತರದ ದಿನಗಳನ್ನು ಎದುರಿಸಲು ಮೂವತ್ತೇಳು ವರ್ಷಗಳ ಸಮಸ್ತ ಅನುಭವವನ್ನು ಪಣಕ್ಕಿಟ್ಟು ಕೆಲಸ ಮಾಡಬೇಕಾಯಿತು. ಜೊತೆಗೆ ಸಾವಿರದ ನೋಟಿನ ಬದಲಿಗೆ ಎರಡು ಸಾವಿರದ ಹೊಸ ನೋಟು ಬಿಡುಗಡೆ ಮಾ�

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News