ಜಲ ಸಂಪನ್ಮೂಲಗಳ ಮೌಲ್ಯದ ಅರಿವು ಅಗತ್ಯ: ಡಾ.ಚನ್ನೇಶ್
ಬೆಂಗಳೂರು, ನ. 8: ಜಲಸಂಪನ್ಮೂಲಗಳೆಂದರೆ ಕೇವಲ ನದಿಗಳ ಬಗ್ಗೆ ಮಾತ್ರ ಯೋಚಿಸುವುದಲ್ಲ. ಬದಲಿಗೆ, ನಮ್ಮ ಕೆರೆ-ಕಟ್ಟೆಗಳಿಗೂ ಇರುವ ಮೌಲ್ಯವನ್ನು ನಾವು ಅರಿಯಬೇಕಾಗಿದೆ ಎಂದು ಹಿರಿಯ ಕೃಷಿ ವಿಜ್ಞಾನಿ ಡಾ.ಟಿ.ಎಸ್.ಚನ್ನೇಶ್ ಹೇಳಿದ್ದಾರೆ.
ಬುಧವಾರ ಕನ್ನಡ ಗೆಳೆಯರ ಬಳಗವು ಕಸಾಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಕರ್ನಾಟಕದ ಜಲ ಸಂಪನ್ಮೂಲಗಳ ಸಂರಕ್ಷಣೆಯ ಅಗತ್ಯ’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ದಕ್ಷಿಣ ಭಾರತದಲ್ಲಿ ಜಲಸಂರಕ್ಷಣೆಯ ವಿಜ್ಞಾನ ಆರಂಭವಾಗಿದ್ದೇ ಕೆರೆಗಳ ಮೂಲಕ. ಈ ಭಾಗದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರದಲ್ಲಿ ಈಗಲೂ 1.27ಲಕ್ಷ ಕೆರೆಗಳು ಜೀವಂತವಾಗಿವೆ. ಇವುಗಳಿಗಿರುವ ಪಾರಂಪರಿಕ ಮತ್ತು ವೈಜ್ಞಾನಿಕ ಮಹತ್ವವನ್ನು ನಾವು ಮನಗಾಣಬೇಕಾದ ಜರೂರು ಈಗ ಸೃಷ್ಟಿಯಾಗಿದೆ ಎಂದರು.
ರಾಜ್ಯದಲ್ಲಿ 1991ರ ವರೆಗೂ ಕೆರೆಗಳ ಸ್ಥಿತಿಗತಿ ಚೆನ್ನಾಗಿಯೇ ಇತ್ತು. ಆದರೆ, ಕಳೆದ 25 ವರ್ಷಗಳಲ್ಲಿ ಮೇಲ್ಮೈನೀರನ್ನು ಎಳೆದು, ಬಳಸುವ ಅಪಾಯಕಾರಿ ಪ್ರವೃತ್ತಿ ಬೇರುಬಿಟ್ಟಿದೆ. ಹೀಗಾಗಿ, ಕಳೆದ ಕಾಲು ಶತಮಾನದಲ್ಲಿ ರಾಜ್ಯದ 10 ಸಾವಿರ ಕೆರೆಗಳು ಕಣ್ಮರೆಯಾಗಿವೆ ಎಂದು ಚನ್ನೇಶ್ ಆತಂಕ ವ್ಯಕ್ಯಪಡಿಸಿದರು.
ಚಿತ್ರದುರ್ಗದ ಚಂದವಳ್ಳಿಯ ಕೆರೆಯೆ ಕರ್ನಾಟಕದ ಅತ್ಯಂತ ಪ್ರಾಚೀನ ಕೆರೆ. ಇದನ್ನು ಕಟ್ಟಿಸಿದ್ದು ಕದಂಬ ಸಾಮ್ರಾಜ್ಯ ಸ್ಥಾಪಕ ಮಯೂರಶರ್ಮ. ಇನ್ನೊಂದೆಡೆ, ಇಡೀ ಏಷ್ಯಾದಲ್ಲೇ ಎರಡನೆ ಅತ್ಯಂತ ದೊಡ್ಡ ಕೆರೆಯಾದ ಚನ್ನಗಿರಿ ತಾಲೂಕಿನ ಸೂಳೆಕೆರೆಯೂ ನಮ್ಮ ರಾಜ್ಯದಲ್ಲಿದೆ. 44 ಕಿ.ಮೀ.ಸುತ್ತಳತೆಯುಳ್ಳ ಈ ಕೆರೆಯು ಇಂದಿಗೂ 40ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರನ್ನು ಒದಗಿಸುತ್ತಿದೆ ಎಂದು ವಿವರಿಸಿದರು.
ನಮ್ಮಲ್ಲಿ ಯಥೇಚ್ಛವಾದ ನೀರಿನ ಸಂಪನ್ಮೂಲವಿದೆ. ಆದರೆ ಅದನ್ನು ನಾವು ಸರಿಯಾಗಿ ಬಳಸುತ್ತಿಲ್ಲ. ಜತೆಗೆ ಜಲಾನಯನ ಪ್ರದೇಶಗಳಲ್ಲಿ ಒಂದೇ ಸಮನೆ ಒತ್ತುವರಿ ನಡೆಯುತ್ತಿದೆ. ಜಲಸಂರಕ್ಷಣೆಯ ಬಗ್ಗೆ ಇರುವ ನಮ್ಮ ಪಾರಂಪರಿಕ ತಂತ್ರಜ್ಞಾನದಲ್ಲಿ ಸಮರ್ಪಕತೆ ಇದೆ. ಒಟ್ಟಿನಲ್ಲಿ ನಾವು ನೀರಿಗೆ ಬೆಲೆ ಕೊಡುವುದನ್ನು ಕಲಿಯಬೇಕಾಗಿದೆ ಎಂದು ಅವರು ಗಮನ ಸೆಳೆದರು. ರಾಜ್ಯವು ಕೃಷ್ಣಾ, ಕಾವೇರಿ, ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ಹೀಗೆ ಒಟ್ಟು ಆರು ನದಿಗಳ ಮುಖಜಭೂಮಿಯಾಗಿ ಹಂಚಿಕೆಯಾಗಿದೆ. ಕೇವಲ ಬೃಹತ್ ಜಲಾಶಯಗಳ ಬಗ್ಗೆ ಮಾತ್ರ ಚಿಂತಿಸುವ ನಾವು, ಕೆರೆಗಳನ್ನು ಸಂಪನ್ಮೂಲಗಳೆಂದು ಪರಿಗಣಿಸುವುದನ್ನು ರೂಢಿಸಿಕೊಳ್ಳಬೇಕಾಗಿದೆ ಎಂದು ಪ್ರತಿಪಾದಿಸಿದರು.
ಇದೇ ವೇಳೆ ಕನ್ನಡ ಕ್ಯಾಥೊಲಿಕ್ ಕ್ರೈಸ್ತರ ಪರವಾಗಿ ಹೋರಾಟ ನಡೆಸುತ್ತಿರುವ ರಫಾಯಲ್ ರಾಜ್ಗೆ ‘ಕನ್ನಡ ಚಿರಂಜೀವಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಚಿದಾನಂದಮೂರ್ತಿ, ದೊಡ್ಡ ರಂಗೇಗೌಡ ಸೇರಿದಂತೆ ಇನ್ನಿತರ ಗಣ್ಯರು ಹಾಜರಿದ್ದರು.