×
Ad

ರಾಜ್ಯದ ಯಾವ ನ್ಯಾಯಬೆಲೆ ಅಂಗಡಿಯಲ್ಲೂ ಪಡಿತರ ಪಡೆಯುವ ವ್ಯವಸ್ಥೆ ಜಾರಿ: ಸಚಿವ ಖಾದರ್

Update: 2017-11-09 20:23 IST

ಬೆಂಗಳೂರು, ನ.9: ಬಿಪಿಎಲ್ ಪಡಿತರ ಚೀಟಿ ಹೊಂದಿರುವ ವಲಸೆ ಕಾರ್ಮಿಕರು ಸೇರಿದಂತೆ ಪಡಿತರ ಚೀಟಿದಾರರು ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಾದರೂ ತಮ್ಮ ಪಡಿತರ ಪಡೆಯಲು ಅವಕಾಶ ಕಲ್ಪಿಸುವ ನೂತನ ಯೋಜನೆ ಆರಂಭಿಸಲಾಗುತ್ತಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗದಿತ ನ್ಯಾಯಬೆಲೆ ಅಂಗಡಿಯಲ್ಲೇ ಪಡಿತರ ಪಡೆಯುವ ನಿಯಮ ಇತ್ತು. ಇದೀಗ ಅದನ್ನು ಬದಲಾವಣೆ ಮಾಡಿದ್ದು, ನ್ಯಾಯಬೆಲೆ ಅಂಗಡಿ ಮಾಲಕರ ದುವರ್ತನೆ ತಪ್ಪಿಸಲು ನೂತನ ವ್ಯವಸ್ಥೆ ಜಾರಿ ತರಲಾಗುವುದು ಎಂದರು.

ಕಲಬುರಗಿ ಸೇರಿ ವಿವಿಧೆಡೆಗಳಿಂದ ಬೆಂಗಳೂರಿಗೆ ಉದ್ಯೋಗ ಅರಸಿ ಬರುವ ಕಾರ್ಮಿಕರು ತಾವಿರುವ ಜಾಗದ ಸಮೀಪದಲ್ಲಿರುವ ನ್ಯಾಯಬೆಲೆ ಅಂಗಡಿಗೆ ತೆರಳಿ, ಬಯೋಮೆಟ್ರಿಕ್ ನೀಡಿ ಪಡಿತರ ಪಡೆಯಬಹುದು. ಅದೇ ರೀತಿ ಕಾರ್ಡ್‌ದಾರರು ತಮಗೆ ಇಷ್ಟ ಬಂದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಬಹುದು ಎಂದು ಅವರು ವಿವರಿಸಿದರು.

ಆಧಾರ್ ಸಾಕು: ಹೊಸ ಪಡಿತರ ಚೀಟಿಗೆ ಮನೆ ಸಂಖ್ಯೆ, ವಿದ್ಯುತ್ ಬಿಲ್ ಅಗತ್ಯವಿಲ್ಲ. ಬದಲಿಗೆ ಆಧಾರ್ ಸಂಖ್ಯೆಯಷ್ಟೇ ಸಾಕು ಎಂದ ಅವರು, ಹೊಸ ಪಡಿತರ ಚೀಟಿಗೆ 9ಲಕ್ಷ ಅರ್ಜಿಗಳು ಬಂದಿದ್ದು, ಈಗಾಗಲೇ 4.50ಲಕ್ಷ ಕಾರ್ಡುಗಳನ್ನು ಮುದ್ರಿಸಲಾಗಿದೆ. ತ್ವರಿತವಾಗಿ ಕಾರ್ಡ್ ವಿಲೇಗೆ ಕ್ರಮ ವಹಿಸಲಾಗಿದೆ ಎಂದರು.

ಡಿಸೆಂಬರ್ ಮೊದಲ ಜಾರಿ: ಅನಿಲಭಾಗ್ಯ ಯೋಜನೆ ಫಲಾನುಭವಿಗಳ ಆಯ್ಕೆಗೆ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಈ ಸಮಿತಿಗೆ ಶಾಸಕರು ಒಂದು ವಾರದಲ್ಲಿ ಫಲಾನುಭವಿಗಳ ಪಟ್ಟಿಯನ್ನು ನೀಡಬೇಕು ಎಂದು ಅವರು ತಾಕೀತು ಮಾಡಿದರು.

ರಾಜ್ಯದಲ್ಲಿ 30ಲಕ್ಷ ಕುಟುಂಬಗಳು ಅನಿಲ ಸಂಪರ್ಕಿ ರಹಿತ ಎಂದು ಗುರುತಿಸಿದ್ದು, ಆ ಪೈಕಿ ಕೇಂದ್ರ ಸರಕಾರ 5ಲಕ್ಷ ಕುಟುಂಬಗಳಿಗೆ ‘ಉಜ್ವಲ’ ಯೋಜನೆಯಡಿ ಅನಿಲ ಸಂಪರ್ಕ ಕಲ್ಪಿಸಲಿದೆ. ರಾಜ್ಯ ಸರಕಾರವೂ ಉಳಿದ 25 ಲಕ್ಷ ಕುಟುಂಬಗಳಿಗೆ ಅನಿಲ ಸಂಪರ್ಕ ಕಲ್ಪಿಸಲು ನಿರ್ಧರಿಸಿದೆ ಎಂದರು.

ರಾಜ್ಯ ಸರಕಾರ ಜಿಲ್ಲಾವಾರು ಕೋಟಾ ನಿಗದಿಮಾಡಲಿದ್ದು, ಮೊದಲ ಹಂತದಲ್ಲಿ 10ಲಕ್ಷ ಮಂದಿಗೆ ಅನಿಲಭಾಗ್ಯ (ತಲಾ 4,040 ರೂ.ವೆಚ್ಚದಲ್ಲಿ) ಯೋಜನೆಯಡಿ 2 ರಿಫಿಲಿಂಗ್ ಸಿಲಿಂಡರ್‌ಗಳು, ಸ್ಟವ್, ಲೈಟರ್ ಸಹಿತ ಉಚಿತ ಅನಿಲ ಸಂಪರ್ಕ ಕಲ್ಪಿಸಲಾಗುವುದೆಂದ ಅವರು, ಡಿಸೆಂಬರ್ ಮೊದಲ ವಾರದಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಉಳ್ಳಾಲದಲ್ಲಿ ಕ್ಯಾಂಟೀನ್: ಅಗ್ಗದ ದರದಲ್ಲಿ ಬಡ ಕೂಲಿ ಕಾರ್ಮಿಕರಿಗೆ ಉಪಾಹಾರ-ಊಟ ಒದಗಿಸುವ ಬೆಂಗಳೂರಿನ ಇಂದಿರಾ ಕ್ಯಾಂಟೀನ್ ಮಾದರಿಯಲ್ಲೇ ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಕೇಂದ್ರ ಹಾಗೂ ಉಳ್ಳಾಲದಲ್ಲಿಯೂ ಇಂದಿರಾ ಕ್ಯಾಂಟೀನ್ ಆರಂಭಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News