‘ಶ್ರಮ ಸಾಮರ್ಥ್ಯ’ ಯೋಜನೆ ಅನುಷ್ಠಾನಗೊಳಿಸಲು ಸಂಪುಟ ನಿರ್ಧಾರ: ಜಯಚಂದ್ರ
ಬೆಂಗಳೂರು, ನ.9: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ತರಬೇತಿ ಹಾಗೂ ಉಪಕರಣ ಕಿಟ್ ನೀಡುವ ‘ಶ್ರಮ ಸಾಮರ್ಥ್ಯ’ ಯೋಜನೆಯನ್ನು 2017-18ನೆ ಸಾಲಿನಲ್ಲಿ 99.88 ಕೋಟಿ ರೂ.ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಗುರುವಾರ ವಿಧಾನಸೌದದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಟ್ಟಡ ಮತ್ತು ಇತರೆ ನಿರ್ಮಾಣ ಕ್ಷೇತ್ರದಲ್ಲಿ 12 ಲಕ್ಷ ಜನ ಕಾರ್ಮಿಕರಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದರು.
ಕಾರ್ಮಿಕ ಮಂಡಳಿಯಿಂದ 37,442 ಕಾರ್ಮಿಕರಿಗೆ ವಸತಿ ಕೌಶಲ್ಯ ನಿರ್ಮಿತಿ ಕೇಂದ್ರಗಳ ಮೂಲಕ ತರಬೇತಿ ಮತ್ತು ಉಪಕರಣ ಕಿಟ್ ನೀಡಲು 2017-18ಕ್ಕೆ 99.88 ಕೋಟಿ ರೂ.ಖರ್ಚು ಮಾಡಲು ಒಪ್ಪಿಗೆ ನೀಡಲಾಗಿದೆ. ಅಲ್ಲದೆ, 2018-19ನೆ ಸಾಲಿನಲ್ಲೂ ಯೋಜನೆ ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ವಿವಿಧ ಗ್ರಾಮಗಳ ವಿವಿಧ ಸರ್ವೇ ನಂಬರ್ಗಳಲ್ಲಿ ಒಟ್ಟು 431.11 ಎಕರೆ ಸರಕಾರಿ ಗೋಮಾಳ ಮತ್ತು ಸರಕಾರಿ ಖರಾಬು ಜಮೀನುಗಳನ್ನು ‘ಬೆಂಗಳೂರು ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ’ಯನ್ನು ಅನುಷ್ಠಾನಗೊಳಿಸಲು ರಾಜೀವ್ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಉಚಿತವಾಗಿ ಮಂಜೂರು ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಒಂದು ಲಕ್ಷ ಮನೆ ನಿರ್ಮಾಣಕ್ಕೆ 1100 ಎಕರೆ ಭೂಮಿ ಅಗತ್ಯವಿದೆ. ಈ ಪೈಕಿ 431.11 ಎಕರೆಯನ್ನು ಸದ್ಯಕ್ಕೆ ಹಸ್ತಾಂತರಿಸಲಾಗುತ್ತಿದ್ದು, ಇನ್ನುಳಿದ ಜಾಗವನ್ನು ರಾಜೀವ್ಗಾಂಧಿ ಗ್ರಾಮೀಣ ವಸತಿ ನಿಗಮ ಗುರುತಿಸುತ್ತಿದ್ದಂತೆ ಹಸ್ತಾಂತರಿಸಲಾಗುವುದು ಎಂದು ಜಯಚಂದ್ರ ತಿಳಿಸಿದರು.
ವೃತ್ತಿಪರ ಶಿಕ್ಷಣ : ಮುಂದಿನ ಶೈಕ್ಷಣಿಕ ವರ್ಷದಿಂದ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ನಿಗದಿ ಮತ್ತು ಸೀಟು ಹಂಚಿಕೆ ಕುರಿತಂತೆ 2006ರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ರಾಜ್ಯ ಸರಕಾರ ಮಾಡಿಕೊಂಡಿರುವ ಒಪ್ಪಂದದ ಜೊತೆಗೆ ಕೆಲವು ಮಾರ್ಪಾಡುಗಳ ಒಡಂಬಡಿಕೆಗೆ ಸಚಿವ ಸಂಪುಟ ಘಟನೆತ್ತರ ಅನುಮೋದನೆ ನೀಡಿದೆ. ಖಾಸಗಿ ವೃತ್ತಿಪರ ಕೋರ್ಸುಗಳ ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ ಅಧಿನಿಯಮದಂತೆ ಈ ಹಿಂದೆ ಮಾಡಿಕೊಂಡಿರುವ ಒಪ್ಪಂದದ ಜೊತೆಗೆ ಮಾರ್ಪಾಡು ಮಾಡಿರುವ ನಿಯಮಕ್ಕೆ ಸಚಿವ ಸಂಪುಟ ಸಮ್ಮತಿ ನೀಡಿದೆ ಎಂದರು.
ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕಕ್ಕೆ ತಾತ್ವಿಕ ಒಪ್ಪಿಗೆ: ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕಕ್ಕೆ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿಯ ಪರಾಮರ್ಶೆಯ ನಂತರ ಸದನದಲ್ಲಿ ಮಂಡಿಸಲು ಸಚಿವ ಸಂಪುಟ ಸಮ್ಮತಿಸಿೆ ಎಂದು ಎಂದು ಅವರು ಹೇಳಿದರು.
ಮೈಸೂರು ಕಾಗದ ಕಾರ್ಖಾನೆ: ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಯ ಖಾಯಂ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆ ಹಾಗೂ ಗುತ್ತಿಗೆ ನೌಕರರಿಗೆ ಸ್ವಯಂ ಪ್ರತಿಕಿರಣ ಯೋಜನೆಗೆ ಸಂಪುಟ ಅನುಮತಿ ನೀಡಿದೆ. ಈ ಕಾರ್ಖಾನೆಯಲ್ಲಿರುವ ದಾಸ್ತಾನನ್ನು ಮಾರಾಟ ಮಾಡಿ ಪರಿಹಾರ ನೀಡಲು ಹಾಗೂ ಕಾರ್ಖಾನೆಯನ್ನು ಸರಕಾರದ ವಶದಲ್ಲೇ ಮುಂದುವರೆಸಲು ಸಂಪುಟ ನಿರ್ಧರಿಸಿದೆ ಎಂದು ತಿಳಿಸಿದರು.
ಭೂ ಕಂದಾಯ ಕಾಯಿದೆಗೆ ತಿದ್ದುಪಡಿ: ರಾಜ್ಯದಲ್ಲಿ ಲಂಬಾಣಿ ತಾಂಡಾ, ಗೊಲ್ಲರ ಹಟ್ಟಿ ಇನ್ನಿತರೆ ದಾಖಲೆ-ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಲು ಅನುವಾಗುವಂತೆ ಕರ್ನಾಟಕ ಭೂ ಕಂದಾಯ ಕಾಯಿದೆ ಪರಿಚ್ಚೇಧ 94 (ಡಿ)ಗೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಮಂಡ್ಯದ ನೂತನ ಏಕೀಕೃತ ವಿಶ್ವವಿದ್ಯಾನಿಲಯಕ್ಕೆ ಸಂಬಂಧಪಟ್ಟ ಕಟ್ಟಡ ಕಾಮಗಾರಿಗಳನ್ನು 42 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸೈನಿಕ ಶಾಲೆ ತೆರೆಯುವುದು ಸೇರಿದಂತೆ ಇತರ ಯೋಜನೆಗಳಿಗೆ 267.67 ಕೋಟಿ ರೂ.ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಅಲ್ಲದೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರಕ್ಕೆ ಬೆಳಗಾವಿ ಜಿಲ್ಲಾಧಿಕಾರಿಯನ್ನು ಸದಸ್ಯರನ್ನಾಗಿ ನೇಮಿಸಲು ವಿಧೇಯಕಕ್ಕೆ ತಿದ್ದುಪಡಿ ತರಲು ಅನುಮೋದನೆ ನೀಡಲಾಗಿದೆ.
ರಷ್ಯಾದ ಕಾರ್ಪೊರೇಷನ್ ಟ್ರಾನ್ಸ್ಟ್ರಾಯ್ ವಿರುದ್ಧ ಕೆಶಿಪ್ ವತಿಯಿಂದ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಸಿವಿಲ್ ದಾವೆಗಳನ್ನು ಬಡ್ಡಿ ರಹಿತವಾದ ಸಂಧಾನಿತ ಮೊತ್ತ 15.31 ಕೋಟಿ ರೂ.ಗಳಿಗೆ ಪೂರ್ಣವಾಗಿ ಮತ್ತು ಅಂತಿಮವಾಗಿ ಎರಡು ಪಕ್ಷಗಳ ಮಧ್ಯೆ ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಸಾರ್ವತ್ರಿಕ ರಜೆ: 2018ನೆ ಸಾಲಿಗೆ 23 ಸಾರ್ವತ್ರಿಕ ರಜೆಗಳನ್ನು ಘೋಷಿಸಲಾಗಿದೆ. ಎರಡನೆ ಶನಿವಾರ ಹಾಗೂ ರವಿವಾರ ಸೇರಿದಂತೆ ಒಟ್ಟು 87 ರಜೆಗಳು ಆಗುತ್ತವೆ ಎಂದು ಜಯಚಂದ್ರ ಹೇಳಿದರು.
ಚಳಿಗಾಲದ ಅಧಿವೇಶನದಲ್ಲಿ ‘ಕಂಬಳ ವಿಧೇಯಕ’ ಮಂಡನೆ: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿರುವ ಕಂಬಳ ಸ್ಪರ್ಧೆಯನ್ನು ಮುಂದುವರೆಸಲು ರಾಜ್ಯ ಸರಕಾರ ತಂದಿದ್ದ ಆಧ್ಯಾದೇಶಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಮುಂದಿನ ತಿಂಗಳಲ್ಲಿ ನಡೆಯಲಿರುವ ಕಂಬಳ ಸ್ಪರ್ಧೆಗೆ ಪೂರಕವಾದ ಶಾಸನ ತರುವ ಹಿನ್ನೆಲೆಯಲ್ಲಿ ಪ್ರಾಣಿಗಳಿಗೆ ಹಿಂಸೆ ಮಾಡುವುದನ್ನು ತಡೆಗಟ್ಟುವ(ಕರ್ನಾಟಕ ತಿದ್ದುಪಡಿ) ವಿಧೇಯಕ-2017ವನ್ನು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಜಯಚಂದ್ರ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ ಭವನ ನಿರ್ಮಾಣ ಕಾಮಗಾರಿಯ 8 ಕೋಟಿ ರೂ.ಗಳ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು