ಭಾರತೀಯ ಜನಶಕ್ತಿ ಕಾಂಗ್ರೆಸ್ ನಿಂದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಇಂದಿನಿಂದ ಆರಂಭ: ಅನುಪಮಾ ಶೆಣೈ
ಬೆಂಗಳೂರು, ನ.14: ಮುಂದಿನ ವರ್ಷದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಆಯ್ಕೆ ಪ್ರಕಿಯೆಯನ್ನು ಇಂದಿನಿಂದ ಆರಂಭಿಸಲಾಗುತ್ತಿದೆ ಎಂದು ಪಕ್ಷದ ಸಂಸ್ಥಾಪಕಿ ಅನುಪಮಾ ಶೆಣೈ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಕಳಕಳಿ ಹೊಂದಿರುವ, ಯಾವುದೇ ಕಳಂಕ ರಹಿತ, ಮಾನವೀಯ ಮೌಲ್ಯಗಳುಳ್ಳ ವ್ಯಕ್ತಿಗಳಿಗೆ ನಮ್ಮ ಪಕ್ಷದಿಂದ ಸ್ಪರ್ಧಿಸಲು ಅವಕಾಶ ನೀಡಲಾಗುತ್ತದೆ. ನಮ್ಮ ಪಕ್ಷದಿಂದ ಸ್ಪರ್ಧೆ ಮಾಡುವ ಆಸಕ್ತಿಯುಳ್ಳ ಯಾವುದೇ ಕ್ಷೇತ್ರದಲ್ಲಿರುವವರು ತಮ್ಮ ವಿವರಗಳನ್ನು ಸಲ್ಲಿಸಬಹುದು ಎಂದು ಹೇಳಿದರು.
ರಾಜ್ಯಾದ್ಯಂತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ವಿವಿಧ ವಲಯಗಳನ್ನಾಗಿ ವಿಂಗಡಿಸಿದ್ದು, ಪ್ರತೀ ವಲಯದಲ್ಲಿಯೂ ಒಬ್ಬ ವ್ಯಕ್ತಿಯನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗುತ್ತದೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂಬ ಅಭಿಲಾಷೆಯುಳ್ಳವರು ತಮ್ಮ ಸಾಮಾಜಿಕ ಸೇವೆ, ರಾಜಕೀಯ ಅನುಭವಗಳ ಕುರಿತು ಚಿತ್ರ ಸಹಿತ ಲಿಖಿತ ದಾಖಲೆಗಳ ಸಮೇತ ಮಾಹಿತಿ ನೀಡಬೇಕು. ಅನಂತರ ಅರ್ಹರನ್ನು ಗುರುತಿಸಿ ಆಯ್ಕೆ ಮಾಡಲಾಗುತ್ತದೆ ಎಂದರು.
ಬೆಳಗಾವಿ, ಗದಗ ವಿಭಾಗಕ್ಕೆ ಮಹದೇವ ಬಾಬು(73383 51858), ಹುಬ್ಬಳ್ಳಿ, ಧಾರವಾಡ ವಿಭಾಗಕ್ಕೆ ಫಾರೂಕ್ ಶೇಖ್(96207 19390), ಬೀದರ್, ಕಲಬುರಗಿ, ಯಾದಗಿರಿ, ಬಿಜಾಪುರ ವಿಭಾಗಕ್ಕೆ ಶರಣಪ್ಪ(74069 16027), ರಾಯಚೂರು, ಕೊಪ್ಪಳ, ಬಳ್ಳಾರಿ ವಿಭಾಗಕ್ಕೆ ಅನುಪಮಾ ಶೆಣೈ(94809 15985), ಹಾವೇರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗಕ್ಕೆ ಲಲಿತಾ ಬಾಯಿ(72595 82032), ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ವಿಭಾಗಕ್ಕೆ ಬೆನೆಟ್ ನವಿಟಾ ಕ್ರಾಸ್ತಾ(94803 11597), ಕೊಡಗು, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ ವಿಭಾಗಕ್ಕೆ ಚಂದ್ರಶೇಖರ್ (98863 77796), ತುಮಕೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ವಿಭಾಗಕ್ಕೆ ವಸೀಮ್(98867 86010) ರನ್ನು ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.