ಕಳವು ಪ್ರಕರಣ: ಆರೋಪಿಯ ಬಂಧನ
ಬೆಂಗಳೂರು, ನ.16: ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯೊಬ್ಬನನ್ನು ಬಂಧಿಸಿರುವ ನಗರದ ಪೂರ್ವ ವಿಭಾಗದ ಪೊಲೀಸರು 30 ಲಕ್ಷ ಮೌಲ್ಯದ ಚಿನ್ನಾಭರಣ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರಹಳ್ಳಿಯ ಮಂಜುನಾಥ ಯಾನೆ ಕಲ್ಕೆರೆಮಂಜ(32) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತನಿಂದ 30 ಲಕ್ಷ ಮೌಲ್ಯದ 850 ಗ್ರಾಂ ತೂಕದ ಚಿನ್ನಾಭರಣಗಳು, ಟಿವಿ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ತಮಿಳುನಾಡು ಮೂಲದ ಆರೋಪಿ ಮಂಜುನಾಥ್, ಸೈಕಲ್ ಕಳ್ಳತನದಿಂದ ಅಪರಾಧ ಕೃತ್ಯಗಳಿಗಿಳಿದಿದ್ದು, ಇಲ್ಲಿಯವರೆಗೆ 40ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಅದರಲ್ಲಿ 20ರಲ್ಲಿ ಖುಲಾಸೆಯಾಗಿದ್ದರೆ, ಇನ್ನು 24 ಪ್ರಕರಣಗಳನ್ನು ಎದುರಿಸುತ್ತಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆರೋಪಿಯು ಭಾರತಿನಗರ, ಪುಲಿಕೇಶಿನಗರ, ಸೋಲದೇವನಹಳ್ಳಿ, ಸೂರ್ಯನಗರ ಹಾಗೂ ಹಾಸನ ನಗರ ಬಡಾವಣೆಗಳಲ್ಲಿ ಕಳ್ಳತನ ಮಾಡಿದ್ದ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಕಬ್ಬಿಣದ ರಾಡ್ಗಳಿಂದ ಮನೆ ಬಾಗಿಲುಗಳನ್ನು ಶಬ್ದವಾಗದಂತೆ ಮುರಿಯುವಲ್ಲಿ ನಿಪುಣನಾಗಿದ್ದ ಎಂದು ವಿವರಿಸಿದರು.
ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಎರಡು ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಿದ್ದರೂ, ಮತ್ತೆ ಕೃತ್ಯಕ್ಕಿಳಿದಿದ್ದ ಆರೋಪಿಯು ಜೀವನ ನಿರ್ವಹಣೆಗೆ ಯಾವುದೇ ಉದ್ಯೋಗ ಮಾಡದೆ ಕಳವು ಮಾಡಿದ ಮಾಲುಗಳನ್ನು ಮಾರಾಟ ಮಾಡಿ ಕಾರಿನಲ್ಲಿ ಓಡಾಡುತ್ತ ಐಷಾರಾಮಿ ಜೀವನ ನಡೆಸುತ್ತಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದು ಹೇಳಿದರು.
ಆರೋಪಿಯನ್ನು ಭಾರತಿನಗರ ಪೊಲೀಸರು ಖಚಿತ ಮಾಹಿತಿಯಾಧರಿಸಿ ಬಂಧಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪೂರ್ವ ವಿಭಾಗದ ಡಿಸಿಪಿ ಅಜಯ್ ಹಿಲೋರಿ ಉಪಸ್ಥಿತರಿದ್ದರು.