×
Ad

ತಪ್ಪು ಮಾಡದ ವೃದ್ಧೆಗೆ ದಂಡ ವಿಧಿಸಿದ ಬಿಎಂಟಿಸಿಗೆ 20 ಸಾವಿರ ರೂ.ದಂಡ ವಿಧಿಸಿದ ಗ್ರಾಹಕರ ನ್ಯಾಯಾಲಯ

Update: 2017-11-21 19:37 IST

ಬೆಂಗಳೂರು, ನ.21: ಯಾವುದೇ ತಪ್ಪಿಲ್ಲದಿದ್ದರೂ ವೃದ್ಧೆಯೊಬ್ಬರಿಗೆ ದಂಡ ಹಾಕಿದ್ದಕ್ಕೆ ಅದರ 100 ಪಟ್ಟು ಹೆಚ್ಚು ದಂಡವನ್ನು ತೆರಬೇಕಾದ ಪರಿಸ್ಥಿತಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಉಂಟಾಗಿದೆ.

ಬೆಂಗಳೂರು ದಕ್ಷಿಣದ ಸೋಮನಹಳ್ಳಿ ನಿವಾಸಿಯಾಗಿರುವ ವೆಂಕಟೇಶ್ ಮೂರ್ತಿಯವರ ಪತ್ನಿ 61 ವರ್ಷದ ಮಂಜುಳಾ ಎಂಬವರು ಮೂರು ವರ್ಷಗಳ ನಂತರ ಪರಿಹಾರ ಮೊತ್ತವನ್ನು ಪಡೆದಿದ್ದಾರೆ.

ನಗರದಲ್ಲಿನ ಗ್ರಾಹಕರ ನ್ಯಾಯಾಲಯ ಬಿಎಂಟಿಸಿಗೆ ಮಂಜುಳಾ ಅವರಿಗೆ 20 ಸಾವಿರ ರೂ. ದಂಡದ ಮೊತ್ತ ನೀಡಲು ಆದೇಶಿಸಿತು. ಬಿಎಂಟಿಸಿ ಅಧಿಕಾರಿಗಳ ವರ್ತನೆ ಮಂಜುಳಾ ಅವರಿಗೆ ಬೇರೆ ಪ್ರಯಾಣಿಕರ ಎದುರು ಅವಮಾನವುಂಟು ಮಾಡಿದ್ದಲ್ಲದೆ ಮಾನಸಿಕವಾಗಿಯೂ ಹಿಂಸೆಯಾಗಿದೆ ಎಂದು ಹೇಳಿದೆ.

ಪ್ರಕರಣವೇನು: 2013ರ ಡಿಸೆಂಬರ್ 28ರಂದು ಬೆಳಗ್ಗೆ 5 ಗಂಟೆಗೆ ಕೆ.ಆರ್.ಮಾರ್ಕೆಟ್ ಮೂಲಕ ಸರ್ಜಾಪುರ ರಸ್ತೆಯಾಗಿ ಸೋಮನಹಳ್ಳಿಯಿಂದ ಚಿಕ್ಕ ತಿರುಪತಿಗೆ ಬಸ್ ಹೋಗುತ್ತಿತ್ತು. ಅಂದು ಶನಿವಾರವಾದರೂ ನಿರ್ವಾಹಕ ಚನ್ನೇಗೌಡ ಶುಕ್ರವಾರದ ದಿನದ ಪಾಸು ಮಂಜುಳಾಗೆ ನೀಡಿದರು. ಅದನ್ನು ಮಂಜುಳಾ ಪ್ರಶ್ನಿಸಿದಾಗ ತಮಗೆ ಶುಕ್ರವಾರದ ಪಾಸು ನೀಡಲು ಅವಕಾಶ ನೀಡಿದ್ದು ಅದಕ್ಕೆ ಡಿಸೆಂಬರ್ 28ಎಂದು ಟಿಕ್ ಮಾಡಿ ಕೊಟ್ಟರು. ಯಾರೂ ನಿಮ್ಮನ್ನು ಪ್ರಶ್ನೆ ಮಾಡುವುದಿಲ್ಲ ಎಂದು ಹೇಳಿ ನಿರ್ವಾಹಕ ಟಿಕೆಟ್ ಕೊಟ್ಟರು.

ಸರ್ಜಾಪುರಕ್ಕೆ ಮುಟ್ಟುವ ಮೊದಲು ಬಸ್ ನಿಲ್ದಾಣಕ್ಕೆ ತಲುಪುವ ಮುನ್ನ ತಪಾಸಣಾ ಅಧಿಕಾರಿಗಳು ಬಸ್ಸನ್ನು ನಿಲ್ಲಿಸಿ ಪ್ರಯಾಣಿಕರ ಟಿಕೆಟ್ ಪರೀಕ್ಷಿಸಲು ಆರಂಭಿಸಿದರು. ಮಂಜುಳಾ ಪಾಸ್ ತೋರಿಸಿದಾಗ ಅಧಿಕಾರಿಗಳು ಅದನ್ನು ಸ್ವೀಕರಿಸಲು ನಿರಾಕರಿಸಿದರು. ಆಕೆ ನಡೆದ ಸಂಗತಿಯನ್ನು ವಿವರಿಸಲು ಹೊರಟಾಗ ಅವರು ಕೇಳಿಸಿಕೊಳ್ಳಲು ಸಿದ್ದರಿರಲಿಲ್ಲ. 400 ರೂಪಾಯಿ ದಂಡ ಕಟ್ಟಲು ಹೇಳಿ ಬಸ್ಸಿನಿಂದ ಹೊರದಬ್ಬಿದರು. 400 ರೂಪಾಯಿ ದಂಡ ಕಟ್ಟಿದರೂ ಕೂಡ 220 ರೂಪಾಯಿಗೆ ರಶೀದಿ ನೀಡಿದ್ದರು.

ಈ ಬಗ್ಗೆ ಮಂಜುಳಾ ಅವರು ಬಿಎಂಟಿಸಿ ಅಧಿಕಾರಿಗಳನ್ನು ಸಂಪರ್ಕಿಸಿದರು, ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ. ಮಂಜುಳಾ ಕಡೆಯಿಂದ ಬಂದ ಲೀಗಲ್ ನೊಟೀಸನ್ನು ನಿರಾಕರಿಸಿದರು. ಇದಕ್ಕೆ ಮಂಜುಳಾ ಹಠ ಸಾಧಿಸಿ ಗ್ರಾಹಕರ ನ್ಯಾಯಾಲಯಕ್ಕೆ 2014ರಲ್ಲಿ ದೂರು ನೀಡಿದರು.

ಮೂರು ವರ್ಷಗಳ ವಾದದ ನಂತರ 10 ಸಾವಿರ ರೂ. ಪರಿಹಾರ ಮತ್ತು 10 ಸಾವಿರ ರೂ. ಕಾನೂನು ವ್ಯಾಜ್ಯ ವೆಚ್ಚ ನೀಡಬೇಕೆಂದು ಆದೇಶಿಸಿದೆ. ಆದೇಶ ಬಂದ 30 ದಿನಗಳೊಳಗೆ ಮಂಜುಳಾಗೆ ಈ 20 ಸಾವಿರ ರೂ. ನೀಡಬೇಕೆಂದು ಆದೇಶಿಸಿದೆ. ಇದಕ್ಕೆ ಕಾರಣಕರ್ತರು ನಿರ್ವಾಹಕ ಚನ್ನೇಗೌಡ, ಬನಶಂಕರಿ ವಿಭಾಗದ ಡಿಪೊ ಮ್ಯಾನೇಜರ್ ಮತ್ತು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News