"ಸತತ ಪ್ರಯತ್ನದಿಂದ ಚಿನ್ನದ ಪದಕ ಪಡೆಯಲು ಸಾಧ್ಯವಾಯಿತು"
ಬೆಂಗಳೂರು, ನ.26: ಗ್ರಾಮೀಣ ಪ್ರದೇಶದಿಂದ ಬಂದಿದ್ದ ನನಗೆ ವಿಜ್ಞಾನ ವಿಷಯ ಕಲಿಯುವುದು ತುಂಬಾ ಕಷ್ಟವೆನಿಸಿತ್ತು. ವಿಜ್ಞಾನ ಎನ್ನುವುದು ಭಿನ್ನವಾದ ಹಾಗೂ ಕ್ಲಿಷ್ಟಕರವಾದ ಶಿಕ್ಷಣವಾಗಿದೆ. ಆದರೆ, ಸತತ ಪ್ರಯತ್ನದಿಂದ ವಿಜ್ಞಾನ ವಿಭಾಗದಲ್ಲಿ ಚಿನ್ನದ ಪದಕ ಪಡೆಯಲು ಸಾಧ್ಯವಾಯಿತು....ನಗರದ ನ್ಯಾಷನಲ್ ಕಾಲೇಜಿನ ಎಂಟನೆ ಘಟಿಕೋತ್ಸವದಲ್ಲಿ ಎಂಎಸ್ಸಿ ಭೌತಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿ ಎಂ.ಚೇತನ್ರ ಮನದಾಳದ ಮಾತುಗಳಿವು.
ರವಿವಾರ ನಗರದ ನ್ಯಾಷನಲ್ ಕಾಲೇಜಿನ ಎಚ್.ಎನ್.ಸಭಾಂಗಣದಲ್ಲಿ ಆಯೋಜಿಸಿದ್ದ 8 ನೆ ಘಟಿಕೋತ್ಸವದಲ್ಲಿ 9 ಜನರಿಗೆ ಚಿನ್ನದ ಪದಕ, ಪದವಿಯಲ್ಲಿ 8 ಜನರಿಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ಪದಕ ಸೇರಿದಂತೆ ನೂರಾರು ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಯಿತು.
ಈ ವೇಳೆ ಮಾತನಾಡಿದ ರಾಜ್ಯ ಪೊಲೀಸ್ ಗೃಹ ನಿಗಮದ ನಿರ್ದೇಶಕ ಎಚ್.ಸಿ.ಕಿಶೋರ್ಚಂದ್ರ, ಶಿಕ್ಷಣ ಸಮಾಜಮುಖಿಯಾದಷ್ಟು ಹೆಚ್ಚು ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ ಎಂದು ಹೇಳಿದರು.
ಭಾರತಕ್ಕೆ ಇಂದು ವೌಲ್ಯಾಧಾರಿತ ಶಿಕ್ಷಣ ಅಗತ್ಯ. ನೈತಿಕ ವೌಲ್ಯಗಳು ಮನುಷ್ಯನ ಆರೋಗ್ಯಕರ ಬದುಕಿಗೆ ದಾರಿ ದೀಪವಾಗುತ್ತದೆ. ಇಂತಹ ಶಿಕ್ಷಣ ನೀಡುವ ಸಂಸ್ಥೆಗಳಲ್ಲಿ ಕೆಲವೇ ಕೆಲವು ಶಿಕ್ಷಣ ಸಂಸ್ಥೆಗಳಿವೆ. ಅದರಲ್ಲಿ ನ್ಯಾಷನಲ್ ಕಾಲೇಜು ಒಂದಾಗಿದೆ ಎಂದು ಅವರು ಶ್ಲಾಘಿಸಿದರು.
ಜೀವನದ ಮಹತ್ವ ಅರಿತು ಸಾರ್ಥಕ ಸೇವಾ ಪಥದಲ್ಲಿ ಸಾಗಬೇಕಾದರೆ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮನಸ್ಥೈರ್ಯ ಹಾಗೂ ಗುರಿ ಮುಟ್ಟುವ ಛಲ, ನೈತಿಕತೆ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು. ಉತ್ತಮ ವ್ಯಕ್ತಿತ್ವ ವಿಕಸನ ಹಾಗೂ ರಾಷ್ಟ್ರದ ಐಕ್ಯತೆಗೆ ಅನುವಾಗುವಂತಿರಬೇಕು ಎಂದು ಅವರು ತಿಳಿಸಿದರು.
ಇದೇ ವೇಳೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಆರ್.ಪರಿಣಿತ, ಶ್ರದ್ಧೆಯೇ ನಮ್ಮ ಬದುಕಿನ ಸಾರ್ಥಕತೆಗೆ ಮೂಲಾಧಾರ. ಸತ್ಯ, ಅಹಿಂಸೆ, ತ್ಯಾಗ ನನ್ನ ಉಸಿರು. ಸರಳ ಬದುಕು, ಉನ್ನತ ವಿಚಾರಗಳು ನನ್ನ ಗುರಿ. ಬದುಕನ್ನು ಪ್ರೀತಿಸುತ್ತೇನೆ. ಮಾನವೀಯ ವೌಲ್ಯಗಳನ್ನು ಅಳವಡಿಸಿಕೊಳ್ಳುತ್ತೇನೆ. ಭಾರತೀಯನಾಗಿ ವಿಶ್ವಮಾನವತ್ವದ ದಾರಿಯಲ್ಲಿ ಸಾಗುತ್ತೇನೆ ಎಂಬ ಪ್ರತಿ್ಞಾ ವಿಧಿಯನ್ನು ಬೋಧನೆ ಮಾಡಿದರು.
ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದ ಎನ್.ಪ್ರಣಶ್ರೀ(ಬಿಎ), ಡಿ.ಕೆ.ಸುಪ್ರಜಾ(ಬಿಎಸ್ಸಿ), ರಕ್ಷಾ ಜಯರಾಮ್(ಬಿಸಿಎ), ಎಸ್.ಜೆ.ಸ್ರವಂತಿ(ಬಿಕಾಂ), ಆರ್.ಲಕ್ಷ್ಮಿ(ಎಂಎಸ್ಸಿ-ಗಣಿತ), ಎಂ.ಚೇತನ್(ಎಂಎಸ್ಸಿ-ಭೌತಶಾಸ್ತ್ರ) ಹಾಗೂ ಬಿ.ಆರ್.ಶೀತಲ್(ಎಂಕಾಂ) ಇವರಿಗೆ ಚಿನ್ನದ ಪದಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ನ್ಯಾಷನಲ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಎ.ಎಚ್.ರಾಮಾರಾವ್, ಡಾ.ಸದಾನಂದ ಮಯ್ಯ, ಪ್ರೊ.ಎಸ್.ಎನ್.ನಾಗರಾಜರೆಡ್ಡಿ, ಕಾರ್ಯದರ್ಶಿ ಪ್ರೊ.ಎಚ್.ಪುಂಡರೀಕ್ ಭಟ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಪ್ರತಿದಿನ 3-4 ಗಂಟೆ ಅಧ್ಯಯನ ಮಾಡುತ್ತಿದ್ದೆ. ಜೊತೆಗೆ, ಪ್ರತಿಯೊಂದು ಸೆಮಿಸ್ಟರ್ನಲ್ಲಿ ಪ್ರಾಧ್ಯಾಪಕರು ನನಗೆ ಸ್ಫೂರ್ತಿ ತುಂಬುತ್ತಿದ್ದರು. ಅದರಿಂದಲೇ ನಾನಿಂದು ಚಿನ್ನದ ಪದಕ ಪಡೆಯಲು ನೆರವಾಯಿತು. ಆದರೆ, ನಾನು ಪದಕ ಪಡೆಯುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ. ಮುಂದಿನ ದಿನಗಳಲ್ಲಿ ಕೆಎಎಸ್ ಮಾಡುವ ಗುರಿ ಹೊಂದಿದ್ದೇನೆ.
-ಸ್ರವಂತಿ, ಬಿ.ಕಾಂ ವಿದ್ಯಾರ್ಥಿನಿ
ಪದಕ ಪಡೆಯಬೇಕು ಎಂದು ನಾನು ಓದಲಿಲ್ಲ ಹಾಗೂ ಕೊನೆ ಕ್ಷಣದವರೆಗೂ ನಿರೀಕ್ಷೆ ಮಾಡಿರಲಿಲ್ಲ. ಎಲ್ಲರಂತೆ ನಾನು ದಿನನಿತ್ಯ ಕಡ್ಡಾಯವಾಗಿ ತರಗತಿಗಳಿಗೆ ಹಾಜರಾಗುತ್ತಿದ್ದೆ. ಜೊತೆಗೆ, ಒಂದಿಷ್ಟು ಹೆಚ್ಚು ಅಭ್ಯಾಸ ಮಾಡುತ್ತಿದ್ದೆ. ಇದೀಗ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆಯಬೇಕು ಎಂಬ ಆಸೆಯಿದೆ’’
-ರಕ್ಷಾ ಜಯರಾಮ್, ಬಿಸಿಎ ವಿದ್ಯಾರ್ಥಿನಿ