×
Ad

‘ಪೋಸ್ಟ್ ಕಾರ್ಡ್’ ವಿರುದ್ಧ ಪೊಲೀಸ್ ಆಯುಕ್ತರಿಗೆ ಜೆಡಿಎಸ್ ದೂರು

Update: 2017-11-29 20:19 IST

ಬೆಂಗಳೂರು, ನ.29: ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಕಿಡಿಗೇಡಿಗಳು ಅಶಾಂತಿ ಉಂಟು ಮಾಡಲು ರಾಜ್ಯದ ವೀರ ಮಹಿಳೆಯರಾದ ರಾಣಿ ಚೆನ್ನಮ್ಮ ಹಾಗೂ ಒನಕೆ ಓಬವ್ವ ಹೆಸರು ಬಳಕೆ ಮಾಡಿ ಅತೀ ಕೀಳುಮಟ್ಟದ ಬರವಣಿಗೆ ಹಾಕಿರುವ ಕುರಿತು ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್ ನೇತೃತ್ವದ ನಿಯೋಗವು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.

"I support Pratap simha‘ಪೋಸ್ಟ್ ಕಾರ್ಡ್ ಕನ್ನಡ’ ಎಂಬ ಒಂದು ರಾಜಕೀಯ ಕೃಪಾಪೋಷಿತ ವೆಬ್‌ಸೈಟ್, ಇಂತಹ ಕೀಳುಮಟ್ಟದ ಸುದ್ದಿಯನ್ನು ಮೊದಲು ಪ್ರಕಟಿಸಿದ್ದು, ತದನಂತರ ತನ್ನದೇ ತಂಡದ ಸದಸ್ಯರು ನಡೆಸುವ, I support BJP,  Narendra Modi Fans from Karunadu ಹಾಗೂ ಇತ್ಯಾದಿ ಫೇಸ್ಬುಕ್ ಪೇಜುಗಳಲ್ಲಿ ಈ ಅಂಕಣ ವ್ಯಾಪಕವಾಗಿ ಶೇರ್ ಮಾಡಿದ್ದು, ಇದು ಮಹಾನ್ ಹೋರಾಟಗಾರರಿಗೆ ಮಾಡಿರುವ ಅವಮಾನ ಹಾಗೂ ಕನ್ನಡಿಗರ ಆತ್ಮಾಭಿಮಾನಕ್ಕೆ ತಂದಿರುವ ಧಕ್ಕೆಯಾಗಿದೆ" ಎಂದು ದೂರಿನಲ್ಲಿ ತಿಳಿಸಲಾಗಿದೆ.

"ಶಾಂತಿ ಕದಡುವ ಜನರ ಮೇಲೆ ದೂರು ದಾಖಲಿಸಿಕೊಂಡು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ರೀತಿಯ ಪೋಸ್ಟ್‌ಗಳು ಇದೇ ಮೊದಲಲ್ಲ. ಇಂತಹ ಎಷ್ಟೋ ಅಶಾಂತಿ ಮೂಡಿಸುವ ಪೋಸ್ಟ್ ಅನ್ನು ಇವರದ್ದೆ ಒಂದು ತಂಡ ಪದೇ ಪದೇ ಸೃಷ್ಟಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿರುವುದು ಈ ಹಿಂದೆಯೂ ತಮ್ಮ ಗಮನಕ್ಕೆ ತರಲಾಗಿದೆ" ಎಂದು ದೂರಿನಲ್ಲಿ ಪ್ರಕಾಶ್ ತಿಳಿಸಿದ್ದಾರೆ.

"I support Pratap simha,  I support BJP,  Narendra Modi Fans from Karunadu, Veer Kesari, ಢಮರುಗ-Damaruga, fight for right ಎಂಬ ಪೇಜ್‌ಗಳು ನಿರಂತರವಾಗಿ ಇಂತಹ ಕೆಲಸದಲ್ಲಿ ತೊಡಗಿದ್ದು, ಇದನ್ನು ನಿರ್ವಹಿಸುವ ಅಡ್ಮಿನ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಅವರು ಒತ್ತಾಯಿಸಿದ್ದಾರೆ.

"ಸಾಮಾಜಿಕ ಜಾಲತಾಣವು ಸಮಾಜವನ್ನು ಎಚ್ಚರಿಸುವ ಸಂದೇಶ ರವಾನಿಸಬೇಕೆ ಹೊರತು, ಸಮಾಜವನ್ನು ಒಡೆಯುವಂತಹ ಕೆಲಸವಾಗಬಾರದು. ಆದುದರಿಂದ, ಸಂಬಂಧಪಟ್ಟ ಇಲಾಖೆಯು ಈ ಬಗ್ಗೆ ಗಮನ ಹರಿಸಿ ಅಶಾಂತಿ ಮೂಡಿಸುವ ಪೇಜ್‌ಗಳು ಹಾಗೂ ಅದರ ನಿರ್ವಾಹಕರ ಮೇಲೆ ಸೈಬರ್ ಕ್ರೈಂ ತಂಡ ನಿರಂತರ ನಿಗಾ ಇಡಬೇಕು" ಎಂದು ಪ್ರಕಾಶ್ ದೂರಿನಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News