ಪ್ರವಾದಿ ಮಾರ್ಗದರ್ಶನದಲ್ಲಿ ನಡೆಸಿದ ಜೀವನ ಸಾರ್ಥಕ: ಡಾ.ಕೆ.ರಹ್ಮಾನ್ಖಾನ್
ಬೆಂಗಳೂರು, ಡಿ.2: ಪ್ರವಾದಿ ಮುಹಮ್ಮದ್(ಸ) ಮಾನವ ಕುಲಕ್ಕೆ ನೀಡಿರುವ ಸಂದೇಶ, ಮಾರ್ಗದರ್ಶನದಂತೆ ನಾವು ಜೀವನ ನಡೆಸಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ. ಪ್ರವಾದಿಯಿಂದಾಗಿ ನಮಗೆ ಪವಿತ್ರ ಕುರ್ಆನ್ ಸಿಕ್ಕಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಕೆ.ರಹ್ಮಾನ್ಖಾನ್ ಹೇಳಿದರು.
ಶನಿವಾರ ನಗರದ ವೈಎಂಸಿಎ ಮೈದಾನದಲ್ಲಿ ಜುಲೂಸೆ ಮುಹಮ್ಮದೀಯ ಸಮಿತಿ ಆಯೋಜಿಸಿದ್ದ ಮೀಲಾದ್ದುನ್ನಬಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರವಾದಿ ಮುಹಮ್ಮದ್(ಸ) ನಮಗೆ ನೀಡಿರುವ ಸಂದೇಶವನ್ನು ಎಲ್ಲರಿಗೂ ತಲುಪಿಸುವ ಅಗತ್ಯವಿದೆ. ಇಸ್ಲಾಮ್ ಧರ್ಮವು ಖಡ್ಗದ ಬಲದ ಮೇಲೆ ವಿಶ್ವದಲ್ಲಿ ಹರಡಿಲ್ಲ. ಪ್ರವಾದಿಯ ನಡವಳಿಕೆ, ಸಂದೇಶ, ಪ್ರೀತಿ, ಸೌಹಾರ್ದತೆಯ ಕಾರಣದಿಂದ ಹರಡಿದೆ ಎಂದು ರಹ್ಮಾನ್ಖಾನ್ ತಿಳಿಸಿದರು.
ಇಸ್ಲಾಮ್ ಧರ್ಮ ನಮಗೆ ಬೋಧಿಸಿರುವ ಕೋಮುಸೌಹಾರ್ದತೆಯ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಇಡೀ ಜಗತ್ತಿಗೆ ಕೋಮುಸೌಹಾರ್ದತೆಯ ನಿಜವಾದ ಅರ್ಥವನ್ನು ನಮ್ಮ ನಡವಳಿಕೆಯಿಂದ ಸಾರಬಹುದು ಎಂದು ಅವರು ಅಭಿಪ್ರಾಯಪಟ್ಟರು.
ನಗರಾಭಿವೃದ್ಧಿ ಹಾಗೂ ಹಜ್ ಸಚಿವ ಆರ್.ರೋಷನ್ ಬೇಗ್ ಮಾತನಾಡಿ, ಉತ್ತರಪ್ರದೇಶ, ಗುಜರಾತ್, ಮಧ್ಯಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಮುಸ್ಲಿಮರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮುಸ್ಲಿಮರು ಗಡ್ಡ ಬಿಟ್ಟರೆ, ಟೋಪಿ ಧರಿಸಿದರೆ ಅವರನ್ನು ಸಂಶಯದಿಂದ ಕಾಣಲಾಗುತ್ತದೆ. ಭಯೋತ್ಪಾದನೆಗೂ ಮುಸ್ಲಿಮರನ್ನು ತಳುಕು ಹಾಕುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ ಎಂದರು. ಜಾತ್ಯತೀತ ಮನಸ್ಥಿತಿಯ ಸಿದ್ದರಾಮಯ್ಯ ನಮಗೆ ಮುಖ್ಯಮಂತ್ರಿಯಾಗಿ ಸಿಕ್ಕಿದ್ದಾರೆ. ನಮ್ಮ ರಾಜ್ಯದಲ್ಲಿ ಬಕ್ರೀದ್, ಮೀಲಾದ್ದುನ್ನಬಿ, ಟಿಪ್ಪುಸುಲ್ತಾನ್ ಜಯಂತಿ ಎಲ್ಲವನ್ನೂ ಮುಸ್ಲಿಮರು ಸಂಭ್ರಮದಿಂದ ಆಚರಿಸಲು ಅವಕಾಶ ಸಿಕ್ಕಿದೆ ಎಂದು ರೋಷನ್ಬೇಗ್ ಹೇಳಿದರು.
ಕಾರ್ಯಕ್ರಮದಲ್ಲಿ ಉತ್ತರಪ್ರದೇಶದ ಮೌಲಾನ ಅಝ್ಹರುಲ್ ಖಾದ್ರಿ ಚುತುರ್ವೇದಿ ಸಾನ್ಪುರಿ ಪ್ರಧಾನ ಭಾಷಣ ಮಾಡಿದರು. ಅಧ್ಯಕ್ಷತೆಯನ್ನು ವೌಲಾನ ಸೈಯದ್ ಖಮರುಲ್ಲಾ ಶಾ ವಹಿಸಿದ್ದರು. ಶಾಸಕರಾದ ಎನ್.ಎ.ಹಾರೀಸ್, ದಿನೇಶ್ಗುಂಡೂರಾವ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಉಬೇದುಲ್ಲಾ ಶರೀಫ್, ಜುಲೂಸೆ ಮುಹಮ್ಮದೀಯ ಕಾರ್ಯದರ್ಶಿ ಅಫ್ಸರ್ಬೇಗ್, ಮುಖಂಡರಾದ ಅಮೀರ್ಜಾನ್ಖಾದ್ರಿ, ಅಯ್ಯೂಬ್ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.,
ಮೆರವಣಿಗೆ: ಮೀಲಾದ್ದುನ್ನಬಿ ಅಂಗವಾಗಿ ನಗರದ ಕೆ.ಆರ್.ಮಾರುಕಟ್ಟೆ, ಗೋರಿಪಾಳ್ಯ, ಮೈಸೂರು ರಸ್ತೆ, ಜಯನಗರ, ಕೋರಮಂಗಲ, ಜಾನ್ಸನ್ಮಾರ್ಕೆಟ್, ಕಲಾಸಿಪಾಳ್ಯ, ಚಿಕ್ಕಪೇಟೆ, ಶಿವಾಜಿನಗರ, ಟ್ಯಾನರಿ ರಸ್ತೆ, ನಾಗವಾರ, ಹಲಸೂರು, ಇಂದಿರಾನಗರ, ದರ್ಗಾ ಮೊಹಲ್ಲಾ, ಕೆ.ಆರ್.ಪುರ ಸೇರಿದಂತೆ ವಿವಿಧ ಪ್ರದೇಶಗಳಿಂದ ಮುಸ್ಲಿಮ್ ಬಾಂಧವರು ಪ್ರವಾದಿ ಮುಹಮ್ಮದ್ರ ಸಂದೇಶಗಳು, ಪವಿತ್ರ ಮಕ್ಕಾ ಹಾಗೂ ಮದೀನಾದ ಸ್ಥಬ್ಧ ಚಿತ್ರಗಳ ಮೆರವಣಿಗೆಯನ್ನು ನಡೆಸಿದರು.
ಅಲ್ಲದೆ, ಮಕ್ಕಳು ವಿವಿಧ ವೇಷಭೂಷಣಗಳನ್ನು ತೊಟ್ಟು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮೆರವಣಿಗೆ ಹಿನ್ನೆಲೆಯಲ್ಲಿ ನಗರದ ವಿವಿಧ ಭಾಗಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಲ್ಲದೆ, ರಸ್ತೆಗಳಲ್ಲಿ ಸಂಚಾರವನ್ನು ಮಾರ್ಪಾಡು ಮಾಡಲಾಗಿತ್ತು. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು.