ಬಾಬಾಬುಡಾನ್‌ಗಿರಿಯಲ್ಲಿ ದಾಂಧಲೆ :ದಕ್ಷಿಣ ಕನ್ನಡ ಜಿಲ್ಲಾ ಉಲಮಾ ಮತ್ತು ಉಮರ ಸಮಿತಿ ಸಭೆ ಖಂಡನೆ

Update: 2017-12-04 17:04 GMT

ಬೆಂಗಳೂರು, ಡಿ.4: ಚಿಕ್ಕಮಗಳೂರಿನ ಬಾಬುಬುಡಾನ್‌ಗಿರಿಯಲ್ಲಿ ದತ್ತಮಾಲಾ ಧಾರಿಗಳು ದಾಂಧಲೆ ನಡೆಸಿ ಗೋರಿಗಳನ್ನು ಧ್ವಂಸಗೊಳಿಸಲು ನಡೆಸಿದ ಪ್ರಯತ್ನವನ್ನು ದಕ್ಷಿಣ ಕನ್ನಡ ಜಿಲ್ಲಾ ಉಲಮಾ ಮತ್ತು ಉಮರ ಸಮಿತಿಯು ತೀವ್ರವಾಗಿ ಖಂಡಿಸಿದೆ.

ಸೋಮವಾರ ನಗರದ ಕನ್ನಿಂಗ್‌ಹ್ಯಾಮ್‌ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಮಿತಿ ಸಂಚಾಲಕ ಮೌಲಾನ ಶಾಫಿ ಸಅದಿ ಮಾತನಾಡಿ, ಬಾಬುಬುಡಾನ್‌ಗಿರಿಗೆ ಎಲ್ಲ ಜಾತಿ, ಧರ್ಮದ ಜನರು ಬಂದು ಆಶೀರ್ವಾದ ಪಡೆಯುತ್ತಾರೆ. ಅದೊಂದು ಭಾವೈಕ್ಯತೆಯ ಸಂಗಮವಾಗಿದೆ ಎಂದರು.

ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಕೋಮುವಾದಿ ಶಕ್ತಿಗಳು, ಅಲ್ಲಿನ ಭಾವೈಕ್ಯತೆಯ ವಾತಾವರಣವನ್ನು ಹಾಳು ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ದತ್ತಮಾಲೆಗೆ ಅವಕಾಶ ಸೇರಿದಂತೆ ಇನ್ನಿತರ ಕಾರಣಗಳಿಂದ ಸೌಹಾರ್ದತೆಯ ತಾಣದಲ್ಲಿ ವಿಷಬೀಜ ಬಿತ್ತುವ ಕೆಲಸ ನಡೆಯುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರಕಾರವು ಇಂತಹ ಬೆಳವಣಿಗೆಗಳಿಗೆ ಅವಕಾಶ ಮಾಡಿಕೊಡಬಾರದು. ಹಲವಾರು ಸಂಘಟನೆಗಳು ರಾಜಕೀಯಪ್ರೇರಿತವಾಗಿ ಗಲಭೆಗಳನ್ನು ಮಾಡಲು ಪ್ರಯತ್ನಿಸುತ್ತಿವೆ. ನಿನ್ನೆ ಬಾಬಾಬುಡಾನ್‌ಗಿರಿಯಲ್ಲಿ ನಡೆದ ಘಟನೆಗೆ ಜಿಲ್ಲಾಡಳಿತದ ವೈಫಲ್ಯವೇ ನೇರ ಕಾರಣ ಎಂದು ಶಾಫಿ ಸಅದಿ ಆರೋಪಿಸಿದರು.

ಕೆಲ ದತ್ತಮಾಲಾಧಾರಿಗಳು ದಾಂಧಲೆ ನಡೆಸಿದ ಸ್ಥಳ ನಿರ್ಬಂಧಿತ ಪ್ರದೇಶವಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿಕೆ ನೀಡುತ್ತಾರೆ. ಬಾಬಾಬುಡಾನ್‌ಗಿರಿಗೆ ಸಂಬಂಧಿಸಿದ 2 ಸಾವಿರ ಎಕರೆ ವಕ್ಫ್ ಭೂಮಿ ಇದೆ ಎಂದು ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ಯಾವುದು ನಿರ್ಬಂಧಿತ ಹಾಗೂ ಯಾವುದು ನಿರ್ಬಂಧಿತವಲ್ಲದ ಪ್ರದೇಶ ಎಂದು ವಿಭಜನೆ ಮಾಡಿದವರು ಯಾರೂ ಎಂದು ಅವರು ಪ್ರಶ್ನಿಸಿದರು.

ಸಾರ್ವಜನಿಕವಾಗಿ ಶಾಂತಿ ಭಂಗ ಉಂಟು ಮಾಡಲು ಅಧಿಕಾರಿಗಳು ಅವಕಾಶ ನೀಡಬಾರದು. ರಾಜಕಾರಣಿಗಳಿಗೆ ಬೇಕಾದ ರೀತಿಯಲ್ಲಿ ಅಧಿಕಾರಿಗಳು ಹೇಳಿಕೆಗಳು ನೀಡುವುದು ಎಷ್ಟರಮಟ್ಟಿಗೆ ಸರಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿರುವ ನಾಯಕ. ಈ ರೀತಿಯಲ್ಲಿ ದಾಂಧಲೆ ನಡೆಸಿ ಅಶಾಂತಿ ಸೃಷ್ಟಿಮಾಡಲು ಪ್ರಯತ್ನಿಸಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಚಿಕ್ಕಮಗಳೂರು ಜಿಲ್ಲೆಯ ಮುಸ್ಲಿಮರು ಶಾಂತಿಯುತವಾಗಿ ಜೀವನ ನಡೆಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ದಕ್ಷಿಣ ಕನ್ನಡ ಜಿಲ್ಲಾ ಉಲಮಾ ಹಾಗೂ ಉಮರ ಸಮಿತಿ ಸಭೆಯಲ್ಲಿ ಯುವ ಸಮುದಾಯದವನ್ನು ಯಾವ ರೀತಿಯಲ್ಲಿ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕವಾಗಿ ಮುನ್ನಡೆಸಬೇಕು, ಸಮುದಾಯದಲ್ಲಿರುವ ಹಲವಾರು ಸಮಸ್ಯೆಗಳನ್ನು ಯಾವ ರೀತಿಯಲ್ಲಿ ಬಗೆಹರಿಸಬೇಕು ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಶಾಫಿ ಸಅದಿ ಹೇಳಿದರು.

ಸಮಸ್ತ ಉಲಮಾ ಸಂಘಟನೆಯ ಕಾರ್ಯದರ್ಶಿ ಅಝೀಝ್ ದಾರಿಮಿ ಕಲ್ಲೇಗ ಮಾತನಾಡಿ, ಸಂತ ಪರಂಪರೆಯನ್ನು ಹೊಂದಿರುವ ನಮ್ಮ ರಾಜ್ಯದಲ್ಲಿ ದುಷ್ಟ ಶಕ್ತಿಗಳು ಅಶಾಂತಿ ಮೂಡಿಸಲು ಪ್ರಯತ್ನಿಸುತ್ತಿವೆ. ಬಾಬಾಬುಡಾನ್‌ಗಿರಿಯಲ್ಲಿ ರಾಜಕೀಯಪ್ರೇರಿತ ಶಕ್ತಿಗಳು ದಾಂಧಲೆ ನಡೆಸಿರುವುದು ಎಂದು ಟೀಕಿಸಿದರು.

ನಾಗರಿಕ ಸಮಾಜದಲ್ಲಿ ಶಾಂತಿ, ಸಹಭಾಳ್ವೆ, ಸೌರ್ಹಾದತೆಯ ಸಂದೇಶವನ್ನು ಸಂತರು ಬಲವಾಗಿ ಪ್ರತಿಪಾದಿಸಿದ್ದಾರೆ. ಆದರೆ, ಅಹಿತಕರ ಆಚರಣೆಗಳು, ಚಟುವಟಿಕೆಗಳು ನಡೆಯಲು ಅವಕಾಶ ಕಲ್ಪಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ವಿರುದ್ಧವಾಗಿ ಯಾವ ಸಂಘಟನೆಗಳು ನಡೆದುಕೊಂಡರು ಅವುಗಳಿಗೆ ಸರಕಾರ ಹಾಗೂ ಪೊಲೀಸ್ ಇಲಾಖೆ ಅವಕಾಶ ನೀಡಬಾರದು. ಸಂತ ಪರಂಪರೆಯಿಂದ ಸಿಕ್ಕಿರುವ ಸಂದೇಶವನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯ ಆಗಬೇಕಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಅಬ್ಬಾಸ್ ಉಸ್ತಾದ್, ಹಮೀದ್ ಮುಸ್ಲಿಯಾರ್ ಮಾಣಿ, ಎಸ್.ಪಿ.ದಾರಿಮಿ, ಉಮರ್ ದಾರಿಮಿ, ರಾಜ್ಯ ಹಜ್ ಸಮಿತಿ ಸದಸ್ಯ ಅಬುಬಕ್ಕರ್ ಸಿದ್ದೀಖ್ ಮೊಂಟುಗೋಳಿ, ಕರ್ನಾಟಕ ಕಲ್ಚರಲ್ ಫೌಂಡೇಷನ್ ಅಧ್ಯಕ್ಷ ಎಸ್.ಪಿ.ಹಂಝಾ ಸಖಾಫಿ, ಎಸ್‌ಕೆಎಸ್‌ಎಸ್‌ಎಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಎಸ್‌ಎಸ್‌ಎಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ,ಯಾಕೂಬ್ ಹೊಸನಗರ, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಹಮೀದ್ ಮೆಟ್ರೊ, ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಬಿ.ಎಂ.ಹಮೀದ್, ಮುಯಿದೀನಬ್ಬ, ಎಸ್‌ಇಡಿಸಿ ರಾಜ್ಯಾಧ್ಯಕ್ಷ ಕೆ.ಕೆ.ಮುಹಿಯು ದ್ದೀನ್ ಕಾಮಿಲ್ ಸಖಾಫಿ, ಶರೀಫ್ ಫೈಝಿ ಕಡಬ, ಅಬ್ದುಲ್ ಖಾದ್ ಮುಸ್ಲಿಯಾರ್ ಮಂಬ್ರಾಣ, ಎಸ್‌ಎಸ್‌ಎಫ್ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ರಹ್ಮಾನ್ ಮೊಗರ್ಪಣೆ ಸುಳ್ಯ, ಮುಸ್ತಫಾ ಕೆಂಪಿ, ಹುಸೈನ್ ದಾರಿಮಿ ರಂಜಲಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News