ಸರಕಾರಗಳ ಈಡೇರದ ಉದ್ಯೋಗ ಭವಸೆಗಳು ಖಂಡನೀಯ: ಪ್ರಾಧ್ಯಾಪಕಿ ಯಶೋಧಾ

Update: 2017-12-06 16:54 GMT

ದಾವಣಗೆರೆ, ಡಿ.6: ಕೇಂದ್ರ, ರಾಜ್ಯ ಸರಕಾರಗಳು ಅಧಿಕಾರಕ್ಕೆ ಬರುವ ಮುನ್ನ ನೀಡಿದ ಆಶ್ವಾಸನೆಗಳು, ಉದ್ಯೋಗದ ಭವಸೆಗಳು ಜಾರಿಯಾಗದಿರುವುದು ಖಂಡನೀಯ ಎಂದು ಚಿತ್ರದುರ್ಗದ ಪ್ರಾಧ್ಯಾಪಕಿ ಯಶೋಧಾ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದ ರೋಟರಿ ಬಾಲಭವನದಲ್ಲಿ ‘ಉದ್ಯೋಗಕ್ಕಾಗಿ ಯುವಜನರು ಕರ್ನಾಟಕ’ ಹಮ್ಮಿಕೊಂಡಿದ್ದ ಉದ್ಯೋಗದ ಸಾಧ್ಯತೆಗಳು ಮತ್ತು ಯುವ ಆಂದೋಲನದ ಮುಂದಿನ ಹೆಜ್ಜೆಗಳು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಂದು ಪಕ್ಷಗಳೂ ವಿದ್ಯಾರ್ಥಿ ಮತ್ತು ಯುವಜನತೆಗೆ ಉದ್ಯೋಗದ ಆಸೆ ತೋರಿಸಿ ಅಧಿಕಾರಕ್ಕೆ ಬಂದಿದ್ದು, ಈವರೆಗೂ ನಿರೀಕ್ಷಿತ ಉದ್ಯೋಗ ಸೃಷ್ಟಿಸಿಲ್ಲ. ಇದರಿಂದ ನಿರುದ್ಯೋಗ ಸಂಖ್ಯೆ ಹೆಚ್ಚುತ್ತಿದೆ. ಪ್ರತಿ ವರ್ಷ ರಾಜ್ಯದಲ್ಲಿ 8 ಲಕ್ಷಕ್ಕೂ ಅಧಿಕ ಯುವಜನರು ಶಿಕ್ಷಣ ಮುಗಿಸಿ, ಉದ್ಯೋಗ ಸಿಗದೆ ಪರದಾಡುತ್ತಿದ್ದಾರೆ. ಆದರೆ, ನಮ್ಮನ್ನಾಳುವ ಸರಕಾರಗಳು ಮಾತ್ರ ಜಾಣಕುರುಡು ಪ್ರದರ್ಶಿಸುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ವಿದ್ಯಾರ್ಥಿ, ಯುವಜನತೆಗೆ ಅವರು ಮಾಹಿತಿ ನೀಡಿದರು.

ಪ್ರಾಧ್ಯಾಪಕ ಎ.ಬಿ. ರಾಮಚಂದ್ರಪ್ಪ ಉಪನ್ಯಾಸ ನೀಡಿ, ದೇಶದಲ್ಲಿ ಉದ್ಯೋಗ ಸೃಷ್ಟಿಸುವ ಬದಲು ವಿದ್ಯಾರ್ಥಿ ಯುವಜನರ ಮನಸಲ್ಲಿ ಕೋಮುವಾದದ ವಿಷಬೀಜ ಬಿತ್ತುವ ಮೂಲಕ ಯುವಜನಾಂಗವನ್ನು ದಾರಿ ತಪ್ಪಿಸಲಾಗುತ್ತಿದೆ. ನಮ್ಮನ್ನಾಳುವ ಸರಕಾರಗಳು ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಉದ್ಯೋಗವೆಂಬ ಮಾಯಾ ಜಿಂಕೆಯನ್ನು ತೋರಿಸಿ ಯುವಜನರನ್ನು ನಿರುದ್ಯೋಗಿಗಳನ್ನಾಗಿಸುತ್ತಿದ್ದಾರೆ ಎಂದರು.

ಸಂಟನೆ ಜಿಲ್ಲಾ ಸಂಚಾಲಕ ಸತೀಶ್ ಅರವಿಂದ ಪ್ರಾಸ್ಥಾವಿಕ ಮಾತನಾಡಿದರು. ವಕೀಲ ಅನೀಷ್ ಪಾಷಾ, ವಿದ್ಯಾರ್ಥಿ ಉಮೇಶ್, ಜಬೀನಾ ಖಾನಂ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News