ಸರಕಾರದ ಜಾಲತಾಣಗಳಲ್ಲಿ ಕನ್ನಡದ ಅನುಷ್ಠಾನ

Update: 2017-12-09 11:00 GMT

ಮೆಸೂರಿನಲ್ಲಿ ನಡೆದ 83ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ಮೂರು ನಿರ್ಣಯಗಳ ಪೈಕಿ ‘‘ಸಾಮಾಜಿಕ ಜಾಲ ತಾಣದಲ್ಲಿ ಕನ್ನಡವನ್ನು ಅನುಷ್ಠಾನ ಗೊಳಿಸಬೇಕು’’ ಎಂಬ ನಿರ್ಣಯವಿದೆ. ಇದು ಪತ್ರಕರ್ತರೂ ಸೇರಿದಂತೆ ಬಹುತೇಕರಿಗೆ ಅರ್ಥವಾಗದ, ಒಂದು ವಿಚಿತ್ರ ನಿರ್ಣಯ ಎನಿಸಿರಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡವನ್ನು ಯಾರು ಅನುಷ್ಠಾನಗೊಳಿಸಬೇಕು? ಸರಕಾರವು ಅನುಷ್ಠಾನಗೊಳಿಸಬೇಕೇ? ಈಗ ಜಾಲತಾಣಗಳಲ್ಲಿ ಕನ್ನಡ ಬಳಕೆಯಾಗುತ್ತಿಲ್ಲವೇ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಯುನಿಕೋಡ್ ಶಿಷ್ಟತೆಯು ಜಾರಿಗೊಂಡ ನಂತರದಲ್ಲಿ ಕನ್ನಡವನ್ನು ಸ್ಮಾರ್ಟ್‌ಫೋನ್ ಮತ್ತು ಕಂಪ್ಯೂಟರ್‌ಗಳಲ್ಲಿ ಯಶಸ್ವಿಯಾಗಿ ಬಳಸಲು ಸಾಧ್ಯವಾಗಿದೆ. ಕನ್ನಡಾಭಿಮಾನಿಗಳು ಕನ್ನಡವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಳಸುತ್ತಿದ್ದಾರೆ. ಇದರಲ್ಲಿ ಸರಕಾರದ ಪಾತ್ರವೇನೂ ಇಲ್ಲ. ಈ ನಿರ್ಣಯದ ಹಿನ್ನೆಲೆ ತಿಳಿದರೆ ಇದೊಂದು ಮಹತ್ವದ ನಿರ್ಣಯ ಎನಿಸದಿರದು. ಇದು ಸಾಮಾಜಿಕ ಜಾಲತಾಣಗಳ ವಿಷಯವಲ್ಲ, ಬದಲಾಗಿ, ‘‘ಸರಕಾರದ ಜಾಲತಾಣಗಳಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸಬೇಕು’’ ಎನ್ನುವ ಮಹತ್ವದ ನಿರ್ಣಯವಾಗಿದೆ.

ಕರ್ನಾಟಕ ಸರಕಾರದ ವಿವಿಧ ಇಲಾಖೆಗಳಲ್ಲಿ ಕಚೇರಿ ಆಧುನೀಕರಣದ ನಿಟ್ಟಿನಲ್ಲಿ ಬಳಸಲಾಗುವ ಕಂಪ್ಯೂಟರ್‌ಗಳಲ್ಲಿ ಕನ್ನಡವನ್ನು ಬಳಸುವ ಬಗ್ಗೆ ಅಧ್ಯಯನ ಹಾಗೂ ಸಮಾಲೋಚನೆ ನಡೆಸುವುದು ಮತ್ತು ಕನ್ನಡವನ್ನೇ ಸಂಪೂರ್ಣವಾಗಿ ಬಳಸುವುದಕ್ಕೆ ಪ್ರೇರಕವಾಗಬಹುದಾದ ನಿರ್ಣಯಗಳನ್ನು ಕೈಗೊಂಡು ಅದನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ್ಯಗಳಲ್ಲಿ ಒಂದು. ಈ ಹಿನ್ನೆಲೆಯಲ್ಲಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಇತ್ತೀಚೆಗೆ ಕನ್ನಡ-ತಂತ್ರಾಂಶ-ತಜ್ಞ ಬೇಳೂರು ಸುದರ್ಶನರವರಿಗೆ ಹೊಣೆಗಾರಿಕೆಯನ್ನು ವಹಿಸಿ ಸರಕಾರದ ಜಾಲತಾಣಗಳನ್ನು ಕನ್ನಡೀಕರಿಸುವಲ್ಲಿ ಸೂಕ್ತ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ವರದಿಯೊಂದನ್ನು ನೀಡಲು ಕೋರಿತ್ತು. ಸಲ್ಲಿಕೆಯಾದ ವರದಿಯ ಶೀರ್ಷಿಕೆ - ‘‘ಕರ್ನಾಟಕ ಸರಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭ ಗ್ರಾಹ್ಯತೆ’’ - ಇದನ್ನು ಜಾರಿಗೊಳಿಸುವಂತೆ ಅಭಿವೃದ್ಧಿ ಪ್ರಾಧಿಕಾರವು ತನ್ನ ಶಿಫಾರಸಿನೊಂದಿಗೆ ಕರ್ನಾಟಕ ಸರಕಾರದ ಇ-ಆಡಳಿತ ಇಲಾಖೆಗೆ ಕಳುಹಿಸಿದೆ. ಪ್ರಾಧಿಕಾರದ ಒತ್ತಾಸೆಯ ಮೇರೆಗೆ ಮೈಸೂರಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ವರದಿಯ ಅನುಷ್ಠಾನಕ್ಕೆ ನಿರ್ಣಯವನ್ನು ಅಂಗೀಕರಿಸಲಾಗಿದೆ.

ಪ್ರಸ್ತುತ ಕರ್ನಾಟಕ ಸರಕಾರದ ಜಾಲತಾಣಗಳು ಯಾವುದೇ ಒಂದು ಶಿಷ್ಟತೆಗೆ ಒಳಪಡದೆ, ಬಹುತೇಕ ಜಾಲತಾಣಗಳು ಇಂಗ್ಲಿಷ್ ಭಾಷೆಯಲ್ಲಿಯೇ ಮಾಹಿತಿಗಳನ್ನು ನೀಡುತ್ತಿವೆ. ಸರಕಾರದ ಆಡಳಿತ ಭಾಷೆಯಾದ ಕನ್ನಡವೇ ಪ್ರಧಾನವಾಗಿ ಈ ಜಾಲತಾಣಗಳಲ್ಲಿ ಇರಬೇಕು. ಪೂರ್ವನಿಗದಿಯಂತೆ (ಡಿಫಾಲ್ಟ್ ಆಗಿ) ಇಂಗ್ಲಿಷ್‌ನಲ್ಲಿರದೆ ಜಾಲತಾಣಗಳು ತೆರೆದಾಗ ತಕ್ಷಣಕ್ಕೆ ಕನ್ನಡದಲ್ಲಿಯೇ ಗೋಚರವಾಗಬೇಕು. ಇಂಗ್ಲಿಷ್ ಕಡ್ಡಾಯವಾಗಿರದೆ ಒಂದು ಆಯ್ಕೆಯಾಗಿರಬೇಕು. ಇವುಗಳು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶಯಗಳಾಗಿವೆ. ಸರಕಾರದ ಜಾಲತಾಣಗಳು ಮೊದಲು ರಾಜ್ಯದ ಜನತೆಗೆ ಸರಳವಾಗಿ ಮತ್ತು ಕನ್ನಡದಲ್ಲಿ ಮಾಹಿತಿ ನೀಡಬೇಕು. ನಂತರದಲ್ಲಿ, ಅಗತ್ಯವಿರುವ ಎಲ್ಲರಿಗೂ ಇಂಗ್ಲಿಷ್‌ನಲ್ಲಿ ಮಾಹಿತಿ ನೀಡುವಂತೆ ಜಾಲತಾಣಗಳನ್ನು ರೂಪಿಸುವ ನೀತಿಯೊಂದನ್ನು ಸರಕಾರವು ಜಾರಿಗೊಳಿಸಬೇಕು ಎನ್ನುವ ಉದ್ದೇಶದಿಂದ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಈ ವರದಿಯು ಜಾರಿಯಾದರೆ, ಸರಕಾರದ ಜಾಲತಾಣಗಳಲ್ಲಿನ ಮಾಹಿತಿಗಳು ಪ್ರಾಥಮಿಕವಾಗಿ ಮತ್ತು ಗರಿಷ್ಠ ಪ್ರಮಾಣದಲ್ಲಿ ಕನ್ನಡದಲ್ಲಿಯೇ ಲಭ್ಯವಾಗಲಿವೆ. ಸರಕಾರದ ಜಾಲತಾಣಗಳು ಒಂದು ಶಿಷ್ಟತೆಗೆ (ಸ್ಟಾಂಡರ್ಡ್) ಒಳಪಡಲಿವೆ. ಅಷ್ಟೇ ಅಲ್ಲದೆ, ಜನಸಾಮಾನ್ಯರ ಸುಲಭ ಬಳಕೆಗೆ ಅನುವಾಗಿ ಅವರಿಗೂ ಅವು ಸುಲಭವಾಗಿ ತಲುಪಬಲ್ಲವು.

ಕಂಪ್ಯೂಟರ್ ಪರಿಭಾಷೆಯ ಪದಗಳನ್ನು ಇಂಗ್ಲಿಷ್‌ನಲ್ಲಿಯೇ ಬಳಸುವ ಪರಿಪಾಠವಿದೆ. ಅದರ ಬದಲಾಗಿ ತಾಂತ್ರಿಕ ಪದಗಳ ಕನ್ನಡೀಕರಣ, ಅಂದರೆ, ಆಂಗ್ಲಪದಗಳ ದೇಸೀಕರಣದ ಅಗತ್ಯ ವನ್ನು ವರದಿಯು ಒತ್ತಿ ಹೇಳಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ‘ತಂತ್ರಜ್ಞಾನ ದೇಸೀಕರಣ ಸಮಿತಿ’ಯೊಂದನ್ನು(Software Localisation Committee) ರಚಿಸುವ ಸಲಹೆಯನ್ನೂ ಸಹ ಈ ವರದಿಯಲ್ಲಿ ನೀಡಲಾಗಿದೆ. ಕನ್ನಡ ಭಾಷೆಗೆ ಸಂಬಂಧಿಸಿದಂತೆ ಹಲವು ತಂತ್ರಜ್ಞಾನೀಯ ಶಿಫಾರಸುಗಳನ್ನು ವರದಿಯಲ್ಲಿ ಮಾಡಲಾಗಿದೆ. ಅವುಗಳು ಹೀಗಿವೆ: ವಿವಿಧ ಇಲಾಖೆಗಳ ಪದಕೋಶಗಳನ್ನು ಪ್ರಾಧಿಕಾರದ ಮೂಲಕ ಪ್ರಕಟಿಸಬೇಕು. ಇದು ಯುನಿಕೋಡ್ ಪಠ್ಯದಲ್ಲಿದ್ದು, ಕಾಲಕಾಲಕ್ಕೆ ಸೂಕ್ತ ಪರಿಷ್ಕರಣೆಗೊಳಪಟ್ಟು, ಪ್ರಾಧಿಕಾರದ ಜಾಲತಾಣದಲ್ಲಿ ಉಚಿತ ಡೌನ್‌ಲೋಡ್‌ಗೆ ಲಭ್ಯವಿರಬೇಕು. ಜಾಲತಾಣದಲ್ಲಿನ ಸಂವಹನ ಸಂಬಂಧಿತ ಆದೇಶಪದಗಳ ದೇಸೀಕರಣ ಆಗಬೇಕು. (ಮೆನು ಮತ್ತು ವೆಬ್‌ಸೈಟ್, ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್ ಲೋಕಲೈಸೇಶನ್) ಇದಕ್ಕಾಗಿ ಸಮಿತಿಯು ಕನ್ನಡ ಮಾಹಿತಿ ತಂತ್ರಜ್ಞಾನ (ಐಟಿ) ಕಾರ್ಯಕರ್ತರ ಸಮುದಾಯದ ಜೊತೆಗೆ ಕೆಲಸ ಮಾಡಬೇಕು. ಸರಕಾರದ ಎಲ್ಲ ಜಾಲತಾಣಗಳು ಯುನಿಕೋಡ್ ಶಿಷ್ಟತೆಯನ್ನು ಅಳವಡಿಸಿಕೊಳ್ಳಬೇಕು. ಆ ಮೂಲಕ ಲಭ್ಯವಾಗುವ, ಲಿಪ್ಯಂತರಣ, ಭಾಷಾಂತರ, ಪಠ್ಯದ ಸ್ವಯಂ-ವಾಚನ ಇತ್ಯಾದಿ ಎಲ್ಲ ರೀತಿಯ ಸೌಲಭ್ಯಗಳಿಗೆ ಅನುವು ಮಾಡಿಕೊಡಬೇಕು.

ಜಾಲತಾಣಗಳು ಜನಸಾಮಾನ್ಯರೂ ಸಹ ಬಳಸುವಂತೆ ಸುಲಭ ಗ್ರಾಹ್ಯವಾಗುವಂತೆ ರೂಪುಗೊಳ್ಳಲು ಶಿಷ್ಟತೆಗಳನ್ನು ಪಾಲಿಸುವುದು ಅಗತ್ಯ. ಪ್ರಸ್ತುತ, ಸರಕಾರದ ಜಾಲತಾಣಗಳಲ್ಲಿ ಏಕರೂಪತೆ ಇಲ್ಲ. ಇದರಿಂದ ಮಾಹಿತಿಯನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತಿಲ್ಲ. ಬದಲಾಗಿ, ಒಂದೊಂದು ಇಲಾಖೆಯು ಒಂದೊಂದು ನಮೂನೆಯಲ್ಲಿ ಮಾಹಿತಿಗಳನ್ನು ತಮ್ಮ ತಮ್ಮ ಜಾಲತಾಣಗಳಲ್ಲಿ ಅಳವಡಿಸಿರುವ ಕಾರಣ ಮಾಹಿತಿಯ ಹುಡುಕಾಟ ಕಷ್ಟಕರವಾಗಿದೆ ಎನ್ನಲಾಗಿದೆ. ಕನ್ನಡ ಭಾಷೆಯ ಮೂಲಕ ಸರಕಾರದ ಜಾಲತಾಣಗಳು ಉತ್ತಮ ಗುಣಮಟ್ಟವನ್ನು ತಲುಪಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಶಿಷ್ಟತೆಗಳನ್ನು ಪರಿಪಾಲಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಸರಕಾರದ ಹಲವು ಜಾಲತಾಣಗಳಲ್ಲಿ ಪ್ರಮುಖ ಭಾಷಾ ಸಮಸ್ಯೆಗಳಿವೆ. ಕೇವಲ ಮುಖಪುಟದ ಕೆಲವೇ ಅಂಶಗಳು ಕನ್ನಡದಲ್ಲಿ ಇದ್ದು, ಒಳಪುಟಗಳಲ್ಲಿ ಎಲ್ಲೆಡೆ ಇಂಗ್ಲಿಷ್ ಬಳಕೆಯಾಗಿದೆ. ಇದು ತಪ್ಪಬೇಕು. ಕೋಷ್ಟಕ, ನಕಾಶೆ, ಪಟ್ಟಿಗಳು ಕೇವಲ ಇಂಗ್ಲಿಷ್‌ನಲ್ಲಿ ಮಾತ್ರವೇ ಇರದೆ, ವಿವಿಧ ಬಗೆಯ ಎಲ್ಲ ಮಾಹಿತಿಗಳು ಸಂಪೂರ್ಣವಾಗಿ ಕನ್ನಡೀಕರಣಗೊಳ್ಳಬೇಕು ಎಂಬ ಶಿಫಾರಸನ್ನು ಮಾಡಲಾಗಿದೆ. ರಾಜ್ಯ ಸರಕಾರದ ಆಡಳಿತ ವ್ಯವಸ್ಥೆಯನ್ನು ಬಳಸುವ ನಾಗರಿಕರು ಜಾಲತಾಣಗಳ ಮೂಲಕ ವ್ಯವಹರಿಸುವಾಗ, ಮಾಹಿತಿ ಊಡಿಕೆಯನ್ನು ಕೇವಲ ಇಂಗ್ಲಿಷ್‌ನಲ್ಲಿ ಮಾತ್ರವೇ ಅಲ್ಲದೆ, ಕನ್ನಡದಲ್ಲಿಯೂ ಮಾಹಿತಿ ನೀಡುವ ಅನುಕೂಲವನ್ನು ಒದಗಿಸಬೇಕು. ಅದಕ್ಕಾಗಿ, ಅರ್ಜಿ ಮುಂತಾದವುಗಳನ್ನು ತುಂಬುವಾಗ ಕನ್ನಡವನ್ನು ಟೈಪ್ ಮಾಡುವ ವ್ಯವಸ್ಥೆ ಇರುವಂತೆ ಜಾಲತಾಣಗಳನ್ನು ರೂಪಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

ರಾಜ್ಯ ಸರಕಾರದ ಜಾಲತಾಣಗಳು ಕೇವಲ ಕನ್ನಡದಲ್ಲೇ ಇರಬೇಕೆಂಬುದು ಅವಶ್ಯಕವಾದರೂ, ಕನ್ನಡ ಲಿಪಿ ಅರಿಯದ, ಆದರೆ, ಕನ್ನಡ ಭಾಷೆಯನ್ನು ಬಲ್ಲ ಸಾರ್ವಜನಿಕರಿಗೆ ಈ ತಾಣಗಳನ್ನು ಬಳಕೆಸ್ನೇಹಿಯಾಗಿ ಮಾಡುವುದೂ ಸರಕಾರದ ಕರ್ತವ್ಯ. ಹೀಗಾಗಿ, ಲಿಪ್ಯಂತರಣದ (ಭಾಷೆ ಕನ್ನಡವೇ ಆದರೂ ಲಿಪಿ ಮಾತ್ರ ಬೇರೆ ಬೇರೆ ಭಾಷೆಯದಾಗಿರುತ್ತದೆ) ಮೂಲಕ ಕನ್ನಡೇತರರಿಗೂ ಅನುಕೂಲ ಕಲ್ಪಿಸಲು ಶಿಫಾರಸು ಮಾಡಲಾಗಿದೆ. ಜಾಲತಾಣದ ಬಳಕೆದಾರರು ಆಯ್ದ ಭಾಷೆಯ ಲಿಪಿಯಲ್ಲಿ ಕನ್ನಡವನ್ನು ಓದಬಹುದು. ಯುನಿಕೋಡ್ ಶಿಷ್ಟತೆಯ ತಂತ್ರಜ್ಞಾನ ಅಳವಡಿಸುವುದರಿಂದ ಕನ್ನಡ ಲಿಪಿಯು ತತ್‌ಕ್ಷಣದಲ್ಲಿ ಲಿಪ್ಯಂತರಣಗೊಂಡು ‘ಆಯ್ದ-ಭಾಷಾ-ಲಿಪಿ’ಯಾಗಿ ಪರಿವರ್ತನೆಗೊಳ್ಳುತ್ತದೆ.

ಈ ವರದಿಯ ಅನುಷ್ಠಾನದಿಂದ ಕನ್ನಡವು ಸರಕಾರದ ಜಾಲತಾಣಗಳ ಅಧಿಕೃತ ಭಾಷೆಯಾಗಿ ಹೊರಹೊಮ್ಮಲಿದೆ. ಅಲ್ಲದೆ, ಸರಕಾರದ ಎಲ್ಲ ಇಲಾಖೆಗಳ ಜಾಲತಾಣಗಳು ಒಂದೇ ರೀತಿಯ ಏಕರೂಪತೆಗೆ ಒಳಪಟ್ಟು ಮಾಹಿತಿಯ ಹರಿವು ಮತ್ತು ವಿನಿಮಯ ಸುಗಮವಾಗಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಶಿಫಾರಸು ಮಾಡುವ ಅಧಿಕಾರ ಹೊಂದಿದ್ದು, ಈ ವರದಿಯ ಅನುಷ್ಠಾನದ ಹೊಣೆಗಾರಿಕೆ ಕರ್ನಾಟಕ ಸರಕಾರದ ಇ-ಗೌರ್ನೆನ್ಸ್ (ಇ-ಆಡಳಿತ) ಇಲಾಖೆಗೆ ಸೇರಿದೆ.

  

ಡಿಜಿಟಲ್ ಕನ್ನಡ

ಡಾ.ಎ. ಸತ್ಯನಾರಾಯಣ

Writer - ಡಾ.ಎ. ಸತ್ಯನಾರಾಯಣ

contributor

Editor - ಡಾ.ಎ. ಸತ್ಯನಾರಾಯಣ

contributor

Similar News