‘ಹುತಾತ್ಮ, ‘ಶಹೀದ್’ ಪದ ನಮ್ಮ ಪದಕೋಶದಲ್ಲಿ ಇಲ್ಲ: ಕೇಂದ್ರ ಸರಕಾರ
ಹೊಸದಿಲ್ಲಿ, ಡಿ. 15: ‘ಹುತಾತ್ಮ ಅಥವಾ ‘ಶಹೀದ್’ ಪದ ಸೇನೆ ಅಥವಾ ಪೊಲೀಸ್ ಇಲಾಖೆಯಲ್ಲಿ ಇಲ್ಲ. ಇದರ ಬದಲಾಗಿ ಯೋಧರು ಅಥವಾ ಪೊಲೀಸರು ಕಾರ್ಯಾಚರಣೆಯಲ್ಲಿ ಮೃತಪಟ್ಟಾಗ ‘ಯುದ್ಧ ಗಾಯಾಳು’ ಅಥವಾ ‘ಕಾರ್ಯಾಚರಣೆ ಗಾಯಾಳು’ ಎಂದು ಕ್ರಮವಾಗಿ ಕರೆಯಲಾಗುತ್ತದೆ ಎಂದು ರಕ್ಷಣೆ ಹಾಗೂ ಗೃಹ ಸಚಿವಾಲಯ ಕೇಂದ್ರ ಮಾಹಿತಿ ಆಯೋಗಕ್ಕೆ ಮಾಹಿತಿ ನೀಡಿದೆ.
ಕಾನೂನು ಹಾಗೂ ಸಂವಿಧಾನದ ಪ್ರಕಾರ ‘ಶಹೀದ್’ (ಹುತಾತ್ಮ) ಪದದ ವಿವರ ವ್ಯಾಖ್ಯಾನ ಹಾಗೂ ಅರ್ಥ ತಿಳಿಸುವಂತೆ ಕೋರಿ ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ವಿಷಯ ಚರ್ಚೆಗೆ ಬಂದಿದೆ.
ಈ ಪದಗಳ ದುರ್ಬಳಕೆ ತಡೆಯಲು ಹಾಗೂ ಉಲ್ಲಂಘನೆಗೆ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಇರುವ ಅವಕಾಶಗಳ ಬಗ್ಗೆ ಕೂಡ ಅರ್ಜಿಯಲ್ಲಿ ಕೋರಲಾಗಿದೆ.
ಈ ಅರ್ಜಿಯನ್ನು ಗೃಹ ಹಾಗೂ ರಕ್ಷಣಾ ಸಚಿವಾಲಯದ ವಿವಿಧ ಕಚೇರಿಗಳಿಗೆ ವರ್ಗಾಯಿಸಲಾಗಿತ್ತು. ಆದರೆ, ಅರ್ಜಿದಾರರಿಗೆ ಯಾವುದೇ ತೃಪ್ತಿಕರ ಪ್ರತಿಕ್ರಿಯೆ ದೊರಕಿರಲಿಲ್ಲ. ಅನಂತರ ಅವರು ಕೇಂದ್ರ ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು.