ಕುಮಾರಸ್ವಾಮಿಗೆ ಕೈಯ್ಯಾರೆ ಅಡುಗೆ ಮಾಡಿ ಬಡಿಸಿದ ಕಿಚ್ಚ ಸುದೀಪ್
Update: 2017-12-17 20:05 IST
ಬೆಂಗಳೂರು,ಡಿ.17:ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇಂದು ಮಧ್ಯಾಹ್ನ 2 ಗಂಟೆಗಳ ಕಾಲ ಊಟ ಮಾಡುತ್ತಾ ಆತ್ಮೀಯತೆಯ ಮಾತುಕತೆ ನಡೆಸಿದರು. ಸ್ವತಃ ಕಿಚ್ಚ ಸುದೀಪ್ ಅವರೇ ಅಡುಗೆ ಮಾಡಿ ಕುಮಾರಸ್ವಾಮಿ ಅವರಿಗೆ ಉಣಬಡಿಸಿದ್ದು ವಿಶೇಷ!
ಕುಮಾರಸ್ವಾಮಿ ಅವರ ಹುಟ್ಟು ಹಬ್ಬಕ್ಕೆ ನಿನ್ನೆ ಶುಭ ಕೋರಿದ್ದ ಕಿಚ್ಚ, ತಮ್ಮ ಮನೆಗೆ ಬನ್ನಿ ಎಂದು ಕರೆದಿದ್ದರು. ಕಿಚ್ಚನ ಕರೆಗೆ ಓಗೊಟ್ಟು ಕುಮಾರಸ್ವಾಮಿ ಅವರು ಇಂದು ಸುದೀಪ್ ಅವರ ಜೆ.ಪಿ.ನಗರದ ಮನೆಗೆ ಭೇಟಿ ನೀಡಿದರು.
ಕುಮಾರಸ್ವಾಮಿ ಅವರನ್ನು ಸಂತಸದಿಂದ ಬರಮಾಡಿಕೊಂಡ ಸುದೀಪ್ ಅವರು, ತನ್ನ ಕೈಯ್ಯಾರೆ ಅಡುಗೆ ಮಾಡಿ ಕುಮಾರಸ್ವಾಮಿಗೆ ಬಡಿಸಿದರು. ಇಬ್ಬರೂ ಜೊತೆಗೂಡಿ 2 ಗಂಟೆಗಳ ಕಾಲ ಬಹಳ ಆತ್ಮೀಯತೆಯಿಂದ ಮಾತುಕತೆ ನಡೆಸಿದರು.