ಮುಂಬೈ: ಅಗ್ನಿದುರಂತಕ್ಕೆ 12 ಬಲಿ

Update: 2017-12-19 03:42 GMT

ಮುಂಬೈ, ಡಿ.19: ಇಲ್ಲಿನ ಸಕಿ ನಾಕಾ ಬಳಿಯ ಖೈರಾನಾ ರಸ್ತೆಯ ಸ್ಕ್ಯಾಕ್‌ಶಾಪ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 12 ಮಂದಿ ಸಜೀವ ದಹನವಾಗಿದ್ದಾರೆ. ಘಟನೆಯಲ್ಲಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ರಾಜಾವಾಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರು ಕಟ್ಟಡದಲ್ಲಿ ಇನ್ನೂ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಮುಂಜಾನೆ 4:17ರ ಸುಮಾರಿಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ಸಿಕ್ಕಿದ್ದು, ಲಕ್ಷ್ಮೀನಾರಾಯಣ ದೇವಾಲಯ ಬಳಿಯ ಭಾನು ಫರ್ಸಾನ್ ಮಳಿಗೆಯಲ್ಲಿ ಘಟನೆ ಸಂಭವಿಸಿದೆ. ಮೂರು ಅಗ್ನಿಶಾಮಕ ವಾಹನಗಳು ಹಾಗೂ ನಾಲ್ಕು ನೀರಿನ ಟ್ಯಾಂಕರ್‌ಗಳು ತಕ್ಷಣ ಸ್ಥಳಕ್ಕೆ ಧಾವಿಸಿದವು. ಕಟ್ಟಡದ ವಿದ್ಯುತ್ ಸ್ಥಾವರಕ್ಕೆ ಬೆಂಕಿ ತಗುಲಿದ್ದು ಹೆಚ್ಚಿನ ಸಾವುನೋವಿಗೆ ಕಾರಣವಾಯಿತು ಎನ್ನಲಾಗಿದೆ. ನೆಲಮಾಳಿಗೆಯಲ್ಲಿ ಕೇಬಲ್ ಮತ್ತು ಪೀಠೋಪಕರಣಗಳ ದಾಸ್ತಾನು ಇತ್ತು ಎಂದು ತಿಳಿದುಬಂದಿದೆ.
ಘಟನೆಯ ಹಿನ್ನೆಲೆಯಲ್ಲಿ ಕಟ್ಟಡ ಭಾಗಶಃ ಕುಸಿದು ಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News