ಕ್ರೈಸ್ತ ನಿಗಮ ಮಂಡಳಿ ಸ್ಥಾಪಿಸಲು ಒತ್ತಾಯ
ಬೆಂಗಳೂರು, ಡಿ.20: ಕ್ರೈಸ್ತ ಜನಸಂಖ್ಯೆಗನುಗುಣವಾಗಿ ಬಜೆಟ್ನಲ್ಲಿ ಅನುದಾನ ಮೀಸಲಿಟ್ಟು ಕ್ರೈಸ್ತ ನಿಗಮ ಮಂಡಳಿ ಸ್ಥಾಪಿಸಬೇಕೆಂದು ಕ್ರೈಸ್ತ ಅಭಿವೃದ್ಧಿ ಪರಿಷತ್ ಉಪಾಧ್ಯಕ್ಷರೂ ಆಗಿರುವ ವಿಧಾನ ಪರಿಷತ್ನ ಮುಖ್ಯ ಸಚೇತಕ ಐವಾನ್ ಡಿಸೋಜಾ ಒತ್ತಾಯಿಸಿದ್ದಾರೆ.
ಬುಧವಾರ ನಗರದ ಪ್ರೆಸ್ಕ್ಲಬ್ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2017-18ನೆ ಸಾಲಿನ ಬಜೆಟ್ನಲ್ಲಿ ಅಲ್ಪಸಂಖ್ಯಾತರಿಗೆ 2,750 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. 800 ಕೋಟಿ ರೂ. ಅನುದಾನವನ್ನು ಅಲ್ಪಸಂಖ್ಯಾತರ ಕಾಲನಿಗಳ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಅನುದಾನ ಬಳಕೆಯಾಗದಿದ್ದಲ್ಲಿ, ಮುಂದಿನ ಸಾಲಿಗೆ ಬಳಸಿಕೊಳ್ಳಲು ಪ್ರತ್ಯೇಕ ಕಾನೂನು ರೂಪಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು.
ರಾಜ್ಯದ ಜನಸಂಖ್ಯೆಯಲ್ಲಿ ಶೇಕಡ 4ರಷ್ಟು ಕ್ರೈಸ್ತ ಸಮುದಾಯವಿದ್ದು, 24 ಜಿಲ್ಲೆಗಳಲ್ಲಿ ಕ್ರೈಸ್ತರಿದ್ದಾರೆ. ಆರೋಗ್ಯ-ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. ಸಂಸ್ಥೆಗಳಿಗೆ 500 ಕೋಟಿ.ರೂ ಮೀಸಲಿಡಬೇಕೆಂದು ಮನವಿ ಮಾಡಿದರು.
ನಾಳೆ ಸೌಹಾರ್ದ ಕ್ರಿಸ್ಮಸ್: ಕಾಂಗ್ರೆಸ್ ಭವನದಲ್ಲಿ ಡಿ.22ರಂದು ಸೌಹಾರ್ದ ಕ್ರಿಸ್ಮಸ್ ಸಮಾರಂಭ ಏರ್ಪಡಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉಧ್ಘಾಟಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ರೋಷನ್ ಬೇಗ್, ಕೃಷ್ಣ ಭೈರೇಗೌಡ, ಕೃಷ್ಣಪ್ಪ, ರೇವಣ್ಣ ಸೇರಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಐವಾನ್ ಡಿಸೋಜ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ರೈಸ್ತ ಸಮುದಾಯದ ಮುಖಂಡ ಡೇವಿಡ್, ಫಿಲಿಫ್, ಜಾರ್ಜ್ ರೋಜ್ ಸೇರಿ ಪ್ರಮುಖರಿದ್ದರು.