×
Ad

ಚಳವಳಿ ಮೂಲಕ ಸಂವಿಧಾನ ರಕ್ಷಿಸದಿದ್ದರೆ ಕೇಸರಿಕೊಂಡಿಗಳು ಮನುವಾದ ಜಾರಿ ಮಾಡುತ್ತಾರೆ: ಪ್ರೊ.ಚಂಪಾ

Update: 2018-01-11 22:08 IST

ಬೆಂಗಳೂರು, ಜ.11: ದೇಶದಲ್ಲಿ ಸಂವಿಧಾನದ ಮೌಲ್ಯಗಳಿಗೆ ಧಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.

ಗುರುವಾರ ಸಂಸ ಥಿಯೇಟರ್ ಹಾಗೂ ಬೆಂಗಳೂರು ಆರ್ಟ್ ಫೌಂಡೇಶನ್ ಸಹಯೋಗದಲ್ಲಿ ನಯನ ಸಭಾಂಗಣದಲ್ಲಿ ಸಾಹಿತಿ ಚಿ.ಶ್ರೀನಿವಾಸರಾಜು ಅವರ 75ನೆ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ‘ವರ್ತಮಾನದ ತವಕ ತಲ್ಲಣಗಳು’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸಂವಿಧಾನವನ್ನೇ ಬುಡಮೇಲು ಮಾಡುವ ಪ್ರಯತ್ನಗಳು ನಡೆಯುತ್ತಿದ್ದು, ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದ ಜೊತೆಗೆ ಕೇಸರೀಕರಣ ಇದಕ್ಕೆ ಕಾರಣವಾಗಿದೆ. ಇದನ್ನು ನಿರ್ನಾಮ ಮಾಡಬೇಕಾದರೆ ಹೋರಾಟವೊಂದೆ ಪರಿಹಾರ ಎಂದರು.

ಹೋರಾಟವೆಂದರೆ ಬ್ಯಾನರ್, ಬೋರ್ಡ್‌ಗಳನ್ನಿಟ್ಟು ಮಾಡುವಂಥದ್ದಲ್ಲ. ಬದಲಿಗೆ ಸಮಸ್ಯೆಯನ್ನು ಅರಿತು ಸಮಗ್ರವಾದ ತಂತ್ರ ರೂಪಿಸಿ ಜನ ಜಾಗೃತಿ ಮೂಡಿಸುವ ಮೂಲಕ ಬೃಹತ್ ಪ್ರಮಾಣದ ಚಳವಳಿ ರೂಪಿಸಬೇಕು. ಆ ಮೂಲಕ ಸಂವಿಧಾನವನ್ನು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ, ದೇಶದಲ್ಲಿ ವಿಸ್ತರಿಸಿಕೊಂಡಿರುವ ಕೇಸರಿಕೊಂಡಿಗಳು ಮನುವಾದವನ್ನು ಜಾರಿ ಮಾಡಿ ಬಿಡುತ್ತಾರೆ ಎಂದು ನುಡಿದರು.

ಆತಂಕ ಎನ್ನುವುದು ಎಲ್ಲ ಕಾಲದಲ್ಲೂ ಇದ್ದೇ ಇರುತ್ತದೆ. ಅದನ್ನು ಹಾಗೆ ಬಿಟ್ಟರೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅಪಾಯಕಾರಿಯಾಗುತ್ತದೆ. ಹಾಗಾಗಿ ಅದಕ್ಕೆ ಪರಿಹಾರ ಹುಡುಕಬೇಕು. ಸ್ವಾತಂತ್ರದ ನಂತರವೂ ದೇಶದ ಪರಿಸ್ಥಿತಿ ಹಾಗೆಯೇ ಇದೆ ಎಂದು ಕೆಲವರು ಹೇಳುತ್ತಾರೆ. ಇಂದಿನ ಪಿಡುಗುಗಳಿಗೆ ಬ್ರಿಟಿಷರೇ ಕಾರಣ ಎಂದು ಎಸ್.ಎಲ್.ಭೈರಪ್ಪ, ಚಂದ್ರಶೇಖರ ಕಂಬಾರ ಹಾದಿಯಾಗಿ ಹಲವರು ಮಾತನಾಡುತ್ತಾರೆ.
ಎಲ್ಲ ಕಾಲದಲ್ಲೂ ಸಮಸ್ಯೆಗಳು ಇದ್ದೇ ಇವೆ. ಹಾಗಾಗಿ ಪರಂಪರೆ ಎಂಬುದು ನಿರಂತರ ಬದಲಾವಣೆಗೆ ಒಳಗಾಗಬೇಕು. ಅಂದರೆ ಜಡ ಸಮಾಜ ಚಲನಶೀಲವಾಗಬೇಕು. ಸಂವೇದನಶೀಲರು ವರ್ತಮಾನದ ತುಡಿತಗಳಿಗೆ ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸಬೇಕು. ಚಿ.ಶ್ರೀನಿವಾಸರಾಜು ಅವರು ಕೂಡ ತಮ್ಮದೇ ರೀತಿಯಲ್ಲಿ ಸಮಾಜದ ತವಕ ತಲ್ಲಣಗಳಿಗೆ ಸ್ಪಂದಿಸುತ್ತಿದ್ದರು ಎಂದು ಸ್ಮರಿಸಿದರು.

ಸೃಜನಶೀಲ ಬರಹಗಾರರಾಗಿದ್ದ ಚಿ.ಶ್ರೀನಿವಾಸರಾಜು ಅವರನ್ನು ಸಾಹಿತ್ಯ ಪರಿಚಾರಕ ಎಂದು ಸೀಮಿತಗೊಳಿಸಬಾರದು. ಅವರು ಪತ್ರಿಕೆ ಆರಂಭಿಸಿ ಬರಹಗಾರರು, ಯುವ ಕವಿ ಹಾಗೂ ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಿದ್ದರು. ಅದಕ್ಕಾಗಿಯೇ ಅವರನ್ನು ರಾಜು ಮೇಷ್ಟ್ರು ಎನ್ನಲಾಗುತ್ತದೆ. ಸಮಷ್ಟಿ ಪ್ರಜ್ಞೆ ಇದ್ದವರಿಗೆ ಮಾತ್ರ ಈ ರೀತಿ ಕರೆಯಲು ಸಾಧ್ಯ. ಅವರು ನಮ್ಮನ್ನು ಅಗಲಿ 10 ವರ್ಷ ಕಳೆದರೂ ಹಲವು ರೀತಿಯಲ್ಲಿ ಇಂದಿಗೂ ಹಲವು ರೀತಿಯಲ್ಲಿ ಪ್ರಸ್ತುತದಲ್ಲಿದ್ದಾರೆ ಎಂದು ಚಂಪಾ ಹೇಳಿದರು.

ಕಾರ್ಯಕ್ರಮದಲ್ಲಿ ಶ್ರಿನಿವಾಸರಾಜು ಅವರ ಜನ್ಮದಿನದ ಪ್ರಯುಕ್ತ ‘ಶ್ರೀರಾಜು’ ಎಂಬ ಲಿಪಿ ಅನಾವರಣ ಮಾಡಲಾಯಿತು. ಬಳಿಕ ಶ್ರೀನಿವಾಸರಾಜು ರಚನೆಯ ‘ಫೀನಿಕ್ಸ್’ ಎಂಬ ನಾಟಕ ಪ್ರದರ್ಶಿಸಲಾಯಿತು. ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಹಾಗೂ ಚಿ.ಸರಸ್ವತಿ ಶ್ರೀನಿವಾಸರಾಜು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News