ದಿಲ್ಲಿ ದರ್ಬಾರ್

Update: 2018-01-13 18:48 GMT

ನ್ಯಾಯಾಧೀಶರ ಪತ್ರಿಕಾಗೋಷ್ಠಿ: ಜ.ಮಿಶ್ರಾ ನಿರ್ಲಿಪ್ತ
ಸುಪ್ರೀಂಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳಾದ ಜೆ.ಚಲಮೇಶ್ವರ್, ರಂಜನ್ ಗೊಗೊಯ್, ಮದನ್ ಲೋಕುರ್ ಹಾಗೂ ಕುರಿಯನ್ ಜೋಸೆಫ್ ಶುಕ್ರವಾರ ಪತ್ರಿಕಾಗೋಷ್ಠಿಯನ್ನು ನಡೆಸಲು ನಿರ್ಧರಿಸಿದ್ದರು. ಅದು ಭೂಕಂಪಕ್ಕಿಂತ ಕಡಿಮೆಯಾದುದೇನೂ ಆಗಿರಲಿಲ್ಲ. ಪತ್ರಿಕಾಗೋಷ್ಠಿಯ ಕುರಿತ ಸುದ್ದಿಯು ಸುಪ್ರೀಂಕೋರ್ಟ್‌ನಲ್ಲಿ ಹರಡುತ್ತಿದ್ದಂತೆಯೇ ನ್ಯಾಯವಾದಿಗಳು, ನ್ಯಾಯಾಧೀಶರು, ಪತ್ರಕರ್ತರು ಪ್ರತಿಯೊಬ್ಬರೂ ಗಲಿಬಿಲಿಗೊಂಡರು. ಮುಖ್ಯ ನ್ಯಾಯಾಧೀಶರ ಪೀಠವಿರುವ ಕೋರ್ಟ್ ನಂ.1ರೆಡೆಗೆ ಎಲ್ಲರ ಕಣ್ಣುಗಳು ನೆಟ್ಟಿದ್ದವು. ನ್ಯಾಯಾಲಯದ ಕೊಠಡಿ ಭರ್ತಿಯಾಗುತ್ತಿದ್ದಂತೆಯೇ ಹಾಗೂ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾರಿಂದ ಒಂದಿಷ್ಟು ಪ್ರತಿಕ್ರಿಯೆಯನ್ನು ಜನರು ನಿರೀಕ್ಷಿಸಿದ್ದರು. ಆದರೆ ಅಂತಹದ್ದೇನೂ ನಡೆಯಲಿಲ್ಲ.

ಸಾಮಾನ್ಯವಾಗಿ ಮಧ್ಯಾಹ್ನದ ಭೋಜನದ ಬಿಡುವಿನ ಸಾಮಾನ್ಯ ಸಮಯ 1:00 ಗಂಟೆಯಾದರೂ, ನ್ಯಾಯಪೀಠವು 12 ಗಂಟೆಗೆ ಕಲಾಪ ಮುಗಿಸಿತ್ತು. ನ್ಯಾಯಾಧೀಶರುಗಳು ಪತ್ರಿಕಾಗೋಷ್ಠಿಯನ್ನು ವೀಕ್ಷಿಸಲು ಬಯಸಿದ್ದರೆಂದು ಕೆಲವರಿಗೆ ಆಗ ಅರಿವಾಯಿತು. ನ್ಯಾಯಾಲಯವು ಮತ್ತೆ ಮಧ್ಯಾಹ್ನ 2:00 ಗಂಟೆಗೆ ಸೇರಿದಾಗ, ಗದ್ದಲದ ವಾತಾವರಣವುಂಟಾಗಿತ್ತು ಹಾಗೂ ಈ ವಿಷಯವಾಗಿ ಮುಖ್ಯ ನ್ಯಾಯಮೂರ್ತಿಯವರು ಪರೋಕ್ಷವಾಗಿ ಮಾತನಾಡಬೇಕೆಂದು ಜನ ನಿರೀಕ್ಷಿಸಿದ್ದರು. ಆದರೆ ಸಿಜೆಐ, ತಾನು ವಿಚಾರಣೆ ನಡೆಸಬೇಕಿದ್ದ ಮುಂದಿನ ಪ್ರಕರಣದ ಸಂಖ್ಯೆಯನ್ನು ಕ್ರಮಪ್ರಕಾರವಾಗಿ ಕರೆದರು ಹಾಗೂ ಏನೂ ನಡೆದಿಲ್ಲವೆಂಬಂತೆ ಕಲಾಪದ ವ್ಯವಹಾರಗಳನ್ನು ನಿರ್ವಹಿಸಿದರು. ಸಿಜೆಐ ಕೂಡಾ ಪತ್ರಿಕಾಗೋಷ್ಠಿ ನಡೆಸಲಿದ್ದ್ದಾರೆಂಬ ವದಂತಿಗಳು ಹರಿದಾಡಿದ್ದರೂ ಕೂಡಾ, ನ್ಯಾಯಾಲಯದಲ್ಲಿ ಅವರ ಉಪಸ್ಥಿತಿಯಿಂದಾಗಿ ಮರೆಯಾಯಿತು.


ಜ. ರಾವತ್‌ರ ಪತ್ರಿಕಾಗೋಷ್ಠಿ ಹೈಜಾಕ್ 
ಭಾರತದ ಸೇನಾ ವರಿಷ್ಠ ಜನರಲ್ ಬಿಪಿನ್ ರಾವತ್ ಶುಕ್ರವಾರ ದಿಲ್ಲಿಯಲ್ಲಿ ತನ್ನ ಔಪಚಾರಿಕ ಪತ್ರಿಕಾಗೋಷ್ಠಿಯನ್ನು ನಡೆಸಿದ್ದರು. ಜ.ರಾವತ್ ಅವರು ಪಾಕಿಸ್ತಾನ ಹಾಗೂ ಚೀನಾ ದೇಶಗಳಿಗೆ ಮತ್ತು ಕಾಶ್ಮೀರಿ ಉಗ್ರರಿಗೆ ಹೇಗೆ ಎಚ್ಚರಿಕೆಗಳನ್ನು ನೀಡುವರೆಂಬುದನ್ನು ವರದಿ ಮಾಡಲು ವಿವಿಧ ಸುದ್ದಿ ವಾಹಿನಿಗಳ ರಕ್ಷಣಾ ವಿಷಯಗಳ ವರದಿಗಾರರು ಕ್ಯಾಮರಾದ ಮುಂದೆ ಕಾದುಕುಳಿತಿದ್ದರು. ಆದರೆ, ಹಾಗೇನೂ ಆಗಲಿಲ್ಲ. ಇದೇ ವೇಳೆ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರು ಪತ್ರಿಕಾಗೋಷ್ಠಿಯನ್ನು ನಡೆಸಿದ್ದರಿಂದಾಗಿ, ವಸ್ತುಶಃ ಯಾವುದೇ ಸುದ್ದಿವಾಹಿನಿಗೂ ಜ.ರಾವತ್‌ರ ಪತ್ರಿಕಾಗೋಷ್ಠಿಯನ್ನಾಗಲಿ ಅಥವಾ ಪತ್ರಿಕಾಗೋಷ್ಠಿಯ ವಿಷಯಗಳನ್ನಾಗಲಿ ಸವಿವರವಾಗಿ ಪ್ರಸಾರ ಮಾಡಲು ಸಮಯವಿರಲಿಲ್ಲ.

ಪತ್ರಿಕಾಗೋಷ್ಠಿಯನ್ನು ಹೇಗೆ ವರದಿ ಮಾಡಲಾಗುವುದೆಂಬ ಬಗ್ಗೆ ನಿಕಟವಾದ ಗಮನವಿರಿಸಿದ್ದ ಸೇನೆಯ ಉನ್ನತ ಅಧಿಕಾರಿವರ್ಗವು ಅಸಹಾಯಕತೆಯಿಂದ ಕೈಚೆಲ್ಲಬೇಕಾಯಿತು. ನ್ಯಾಯಾಧೀಶರ ವಿವಾದಗಳನ್ನು ಪ್ರಸಾರ ಮಾಡುವಲ್ಲಿ ಟಿವಿ ವಾಹಿನಿಗಳು ತಲ್ಲೀನರಾಗಿರುವಂತೆಯೇ, ಕೆಲವು ಟಿವಿ ಚಾನೆಲ್‌ಗಳ ರಕ್ಷಣಾ ವಿಷಯಗಳ ವರದಿಗಾರರು, ಮಹತ್ವದ ಸುದ್ದಿಗೋಷ್ಠಿಯೊಂದನ್ನು ಕಡೆಗಣಿಸಲಾಗುತ್ತಿದೆಯೆಂದು ಅಳಲು ತೋಡಿಕೊಂಡಿದ್ದರು. ಈ ಬಗ್ಗೆ ಜನರಲ್ ರಾವತ್ ಅವರ ಪ್ರತಿಕ್ರಿಯೆ ಏನಾಗಿತ್ತೆಂಬುದು ತಿಳಿದುಬಂದಿಲ್ಲ.


ಪ್ರಧಾನಿಗೆ ಪುರುಸೊತ್ತಿಲ್ಲ!
ಹೊಸ ವರ್ಷಕ್ಕಾಗಿ ತಮ್ಮ ಮಾನ್ಯತಾ ಪತ್ರಗಳನ್ನು ಪಡೆಯಲು ದಿಲ್ಲಿಯ ‘ಮೀಡಿಯಾ ಸೆಂಟರ್ ಕಾಂಪ್ಲೆಕ್ಸ್’ನಲ್ಲಿ ಜಮಾಯಿಸಿದ್ದ ಪತ್ರಕರ್ತರು ಈ ಸಲ ತಮ್ಮ ಎಂದಿನ ವಾರ್ಷಿಕ ಕೊಡುಗೆಯಿಂದ ವಂಚಿತರಾಗಿದ್ದರು. ಅವರಿಗೆ ಅಲ್ಲಿ ಮಾನ್ಯತಾ ಪತ್ರಗಳು ದೊರೆತಿದ್ದವು. ಆದರೆ ಕ್ಯಾಲೆಂಡರ್‌ಗಳ ಕೊಡುಗೆಯಿರಲಿಲ್ಲ. ಏನಾದರೂ ನಡೆಯಿತೇ?. ದುಂದುವೆಚ್ಚಗಳಿಗೆ ಕಡಿವಾಣ ಹಾಕುವ ಕ್ರಮವೇ?. ಅಥವಾ ‘ಪೇಪರ್‌ಲೆಸ್’ ನೀತಿಗೆ ಉತ್ತೇಜನವೇ?. ವಾಸ್ತವವಾಗಿ ಅದ್ಯಾವುದೂ ಅಲ್ಲ. ಕ್ಯಾಲೆಂಡರ್‌ಗಳನ್ನು ಮುದ್ರಿಸುವ ಪತ್ರಿಕಾ ಮಾಹಿತಿ ಇಲಾಖೆ (ಪ್ರೆಸ್ ಇನ್‌ಫಾರ್ಮೇಶನ್ ಬ್ಯೂರೋ)ಯ ಬಳಿ ಈ ಸಲ ಕ್ಯಾಲೆಂಡರ್‌ನಲ್ಲಿ ಪತ್ರಕರ್ತರಿಗೆ ಪ್ರದರ್ಶಿಸುವಂತಹ ಯಾವುದೇ ಚಿತ್ರವಿರಲಿಲ್ಲವೇನೋ. ಸಾಮಾನ್ಯವಾಗಿ ಈ ಕ್ಯಾಲೆಂಡರ್‌ನಲ್ಲಿ ವರ್ಷದ 12 ತಿಂಗಳೂ ಕಾಣಿಸಿಕೊಳ್ಳುವ ಭಾರತೀಯ ರಾಜಕಾರಣದ ಅತಿ ದೊಡ್ಡ ಸ್ಟಾರ್ ಎನಿಸಿಕೊಂಡ ಪ್ರಧಾನಿ ಮೋದಿಗೆ ಈ ಬಾರಿ ಫೋಟೋಶೂಟ್‌ನಲ್ಲಿ ಪಾಲ್ಗೊಳ್ಳಲು ಸಮಯ ದೊರೆತಿರಲಿಲ್ಲವೇನೋ. ಆದಾಗ್ಯೂ, ಈ ವರ್ಷ ಸ್ವಲ್ಪ ತಡವಾಗಿ ಕ್ಯಾಲೆಂಡರ್ ಬರಲಿದೆಯೆಂಬ ಮೆಲುಧ್ವನಿಯ ಅಶ್ವಾಸನೆ ಆಗ ಕೇಳಿಬಂದಿತ್ತು. ಇದೀಗ ಕ್ಯಾಲೆಂಡರ್ ಆಗಮಿಸಿದೆ. ಆದರೆ ಈ ಸಲದ ಕ್ಯಾಲೆಂಡರ್‌ನಲ್ಲಿ ಅದಕ್ಕೆಂದೇ ವಿಶೇಷವಾಗಿ ತೆಗೆಯಲಾದ ಫೋಟೋಗಳಿಲ್ಲ.

ಪ್ರಧಾನಿಯವರು ಇತರ ಜನರೊಂದಿಗಿರುವ ಹಾಗೂ ಕೆಲವು ಸರಕಾರಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಸಾಮಾನ್ಯ ಚಿತ್ರಗಳು ಮಾತ್ರವೇ ಅದರಲ್ಲಿವೆ. ಈ ಸಲ ಕ್ಯಾಲೆಂಡರ್‌ನಲ್ಲಿ ಯಾಕೆ ವಿಶೇಷ ಚಿತ್ರಗಳಿಲ್ಲವೆಂಬುದೇ ದೊಡ್ಡ ಪ್ರಶ್ನೆಯಾಗಿದೆ. ಬಹುಶಃ ಇದಕ್ಕೂ ಉತ್ತರಿಸಲು ಪ್ರಧಾನಿಗೆ ಸಮಯವಿರಲಾರದು.


ಶಾ ತಂತ್ರಗಾರಿಕೆ
 ಭಾರತೀಯ ಜನತಾಪಕ್ಷದ ಅಧ್ಯಕ್ಷರಾದ ಅಮಿತ್‌ಶಾ, ತಾನು ಕರೆಯುವ ಯಾವುದೇ ಪ್ರಮುಖ ಸಭೆಯ ಸುದ್ದಿಯ ಮಾಹಿತಿ ದೊರೆಯದಂತೆ ಯತ್ನಿಸುತ್ತಿರುತ್ತಾರೆ. ಅದರಲ್ಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ವರಿಷ್ಠ ಮೋಹನ್ ಭಾಗವತ್ ಜೊತೆಗೆ ನಡೆಸುವ ಮಾತುಕತೆಗಳನ್ನು ರಹಸ್ಯವಾಗಿಡಲು ವಿಶೇಷ ಪ್ರಯತ್ನಗಳನ್ನು ನಡೆಸುತ್ತಿರುತ್ತಾರೆ. ತೀರಾ ಇತ್ತೀಚೆಗೆ ಭಾಗವತ್ ಅವರನ್ನು ಭೇಟಿಯಾಗಲು ಶಾ ದಿಲ್ಲಿಯಿಂದ ಮಧ್ಯಪ್ರದೇಶದ ಉಜ್ಜಯಿನಿಗೆ ವಿಶೇಷ ವಿಮಾನವೊಂದರಲ್ಲಿ ಹಾರಿದ್ದರು. ಗಮನವನ್ನು ಬೇರೆಡೆ ಸೆಳೆಯುವ ತಂತ್ರವಾಗಿ, ಬಿಜೆಪಿಯ ಮಾಧ್ಯಮ ಸೆಲ್, ಶಾ ಅವರು ಶೀಘ್ರದಲ್ಲೇ ಚುನಾವಣೆಯೆದುರಿಸಲಿರುವ ಮೇಘಾಲಯದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸುವುದಕ್ಕಾಗಿ ಪ್ರಯಾಣಿಸುತ್ತಿದ್ದಾರೆಂಬ ಸಂದೇಶವೊಂದನ್ನು ಹರಡಿತು.

ಸಂಘ ಪರಿವಾರದಲ್ಲಿ ಸಮಸ್ಯೆಗಳುಂಟಾಗಿತ್ತೇ?. ಬಹುಶಃ ಶಾ ಅವರಿಗೆ ಆರೆಸ್ಸೆಸ್ ವರಿಷ್ಠರೊಂದಿಗೆ ತಾನು ನಡೆಸಿದ ಮಾತುಕತೆಯ ವಿವರಗಳು ಮಾಧ್ಯಮಗಳಿಗೆ ಗೊತ್ತಾಗುವುದು ಬೇಕಾಗಿರಲಿಲ್ಲವೇನೋ. ನರೇಂದ್ರ ಮೋದಿ ಸರಕಾರದ ಆರ್ಥಿಕ ನೀತಿಗಳ ಬಗ್ಗೆ ಗರಂ ಆಗಿರುವ ಆರೆಸ್ಸೆಸ್ ತನ್ನ ನಿಲುವನ್ನು ಕಠಿಣಗೊಳಿಸಿರುವುದಾಗಿ ನಂಬಲಾಗಿದೆ. ರಿಟೇಲ್ ವಲಯದಲ್ಲಿ ಶೇ.100 ವಿದೇಶಿ ಬಂಡವಾಳ ಹೂಡಿಕೆಯಂತಹ ಕೇಂದ್ರ ಸರಕಾರದ ಕ್ರಮಗಳನ್ನು ಆರೆಸ್ಸೆಸ್ ನೇತೃತ್ವದ ಸಂಘಟನೆಗಳು ಈಗಾಗಲೇ ವಿರೋಧಿಸುತ್ತಿವೆ. ಬಹುಶಃ ಶಾ ಅವರು ಕೇಂದ್ರ ಸರಕಾರದ ಕ್ರಮಗಳ ಕುರಿತ ಸಂಘದ ನಾಯಕರಿಗೆ ಸ್ಪಷ್ಟೀಕರಣ ನೀಡಲು ಉಜ್ಜಯಿನಿಗೆ ತೆರಳಿದ್ದಿರಬೇಕು.


ಟ್ವಿಟರ್‌ನಲ್ಲಿ ಸಚಿವ ಬಾಬುಲ್ ರಾದ್ಧಾಂತ 
ಸಡಿಲ ನಾಲಗೆಯ ಸಚಿವರು, ಪ್ರಧಾನಿ ಮೋದಿಯವರಿಗೆ ಸ್ವಲ್ಪ ಮಟ್ಟಿಗೆ ಸಮಸ್ಯೆಯಾಗಿ ಬಿಟ್ಟಿದ್ದಾರೆ. ಅದು ಸಂಸತ್‌ನೊಳಗಾದರೂ ಸರಿ ಅಥವಾ ಟ್ವಿಟರ್‌ನಲ್ಲಾದರೂ ಸರಿ. ಇದಕ್ಕೆ ನಿದರ್ಶನವಾಗಿ ಇತ್ತೀಚೆಗೆ ಸಚಿವ ಗಿರಿರಾಜ್ ಸಿಂಗ್ ಅವರು ರಾಜ್ಯಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಸಂಸದರೊಬ್ಬರ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಇದು ಸದನದಲ್ಲಿ ಗದ್ದಲಕ್ಕೆ ಕಾರಣವಾಗಿ ಕಲಾಪ ಮುಂದೂಡುಲ್ಪಟ್ಟಿತ್ತು. ಇನ್ನೋರ್ವ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರು, ಪಶ್ಚಿಮ ಬಂಗಾಳವನ್ನು ಹೂಡಿಕೆಯ ತಾಣವಾಗುವ ವಿಷಯವಾಗಿ ಟ್ವಿಟ್ಟರ್‌ನಲ್ಲಿ ಸರ್ದಾರ್ ಜೋಕ್ ಒಂದನ್ನು ಪ್ರಕಟಿಸಿದ್ದರು.

ಅದು ವಿವಾದವಾಗಿ ಪರಿಣಮಿಸಿ ಉಲ್ಬಣಾವಸ್ಥೆಗೆ ತಲುಪಿದಾಗ, ಸಚಿವರು ಉಪಾಯವಿಲ್ಲದೆ ಅದೊಂದು ಸದಭಿರುಚಿಯ ಹಾಸ್ಯವೆಂದು ಸಮಜಾಯಿಷಿ ನೀಡಿದ್ದರು. ಆದರೆ ಪ್ರತಿಪಕ್ಷಗಳ ಹುಮ್ಮಸ್ಸನ್ನು ನೋಡಿದಾಗ, ಈ ವಿಷಯವಾಗಿಯೂ ಅವು ಸಂಸತ್ ಕಲಾಪಗಳಿಗೆ ತಡೆಯೊಡ್ಡುವ ಸಾಧ್ಯತೆಗಳಿವೆ. ಹೀಗಾಗಿ ಮೋದಿಯವರು ತನ್ನ ಸಚಿವರಿಗೆ ಬಾಯಿ ಮತ್ತು ಬೆರಳುಗಳನ್ನು ಸಮ್ಮನಿರಿಸುವಂತೆ ಕೇಳಿಕೊಳ್ಳಲೂಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News