ಸಂವಿಧಾನ ಬದಲಾವಣೆಯ ಹೆಸರಿನಲ್ಲಿ ಬೆದರಿಸುವ ಪ್ರಯತ್ನ ನಡೆಯುತ್ತಿದೆ: ಮೌಲಾನ ಜಲಾಲುದ್ದೀನ್ ಉಮರಿ
ಬೆಂಗಳೂರು, ಜ.20: ನಮ್ಮ ದೇಶದ ಜಾತ್ಯತೀತ ಸಂವಿಧಾನವನ್ನು ಬದಲಾಯಿಸುವುದು ಸುಲಭವಲ್ಲ. ಜತೆಗೆ, ಸಂವಿಧಾನದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೆ ನೀಡಿರುವ ಮೂಲಭೂತ ಹಕ್ಕುಗಳನ್ನು ಅಂತ್ಯಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಜಮಾತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಸೈಯ್ಯದ್ ಜಲಾಲುದ್ದೀನ್ ಉಮರಿ ಅಭಿಪ್ರಾಯಪಟ್ಟರು.
ಶನಿವಾರ ನಗರದ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಜಮಾತೆ ಇಸ್ಲಾಮಿ ಹಿಂದ್ ರಾಜ್ಯಘಟಕ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಸಂವಿಧಾನ ಬದಲಾವಣೆಯ ವಿಷಯ ಮುಂದಿಟ್ಟುಕೊಂಡು ಜನಸಾಮಾನ್ಯರನ್ನು ಬೆದರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸಂವಿಧಾನವು ದೇಶದ ಎಲ್ಲ ವರ್ಗಗಳನ್ನು ಒಂದುಗೂಡಿಸಿದೆ. ಒಂದು ವೇಳೆ ಅದನ್ನು ಬದಲಾಯಿಸಿದ್ದಲ್ಲಿ ಈ ಎಲ್ಲ ವರ್ಗಗಳನ್ನು ಒಂದುಗೂಡಿಸಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಭವಿಷ್ಯದಲ್ಲಿ ಯಾವ ಶಕ್ತಿಯೂ ಎಲ್ಲರನ್ನೂ ಒಂದುಗೂಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಪ್ರಸ್ತುತ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಸರಕಾರ ಕೈಗೊಳ್ಳುತ್ತಿರುವ ನಿರ್ಣಯಗಳ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಹಜ್ ಸಬ್ಸಿಡಿ ರದ್ದು ಮಾಡಿರುವ ಸರಕಾರದ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ. ಈ ಸಬ್ಸಿಡಿಯಿಂದ ಯಾತ್ರಿಗಳಿಗೆ ಯಾವುದೆ ಪ್ರಯೋಜನವಾಗುತ್ತಿರಲಿಲ್ಲ. ಬದಲಾಗಿ, ಏರ್ ಇಂಡಿಯಾದ ನಷ್ಟವನ್ನು ಸರಿದೂಗಿಸಲಾಗುತ್ತಿತ್ತು ಎಂದರು.
ಹಜ್ ಸಬ್ಸಿಡಿ ಹಣವನ್ನು ಮುಸ್ಲಿಮ್ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡುವುದಾಗಿ ಸರಕಾರ ನೀಡಿರುವ ಉತ್ತರ ಸಮಂಜಸವಾದುದ್ದಲ್ಲ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲು ಹಲವಾರು ಮಾರ್ಗಗಳಿವೆ. ಸಂವಿಧಾನದಲ್ಲಿ ತಿಳಿಸಿರುವ ಹಕ್ಕುಗಳು ಎಲ್ಲರಿಗೂ ಸಿಗಬೇಕು ಎಂದು ಜಲಾಲುದ್ದೀನ್ ಉಮರಿ ಆಗ್ರಹಿಸಿದರು.
ತ್ರಿವಳಿ ತಲಾಕ್ ನಿಷೇಧ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರಗೊಂಡಾಗ ಪ್ರಧಾನಿ ನರೇಂದ್ರಮೋದಿ ಸಂತಸ ವ್ಯಕ್ತಪಡಿಸಿದರು. ಆ ಮೂಲಕ, ಮುಸ್ಲಿಮ್ ಮಹಿಳೆಯರ ಅತೀ ದೊಡ್ಡ ಸಮಸ್ಯೆಯನ್ನು ತಾನು ಬಗೆಹರಿಸಿದೆ ಎಂಬ ರೀತಿಯಲ್ಲಿ ವರ್ತಿಸಿದರು. ಆದರೆ, ಮುಸ್ಲಿಮ್ ಸಮುದಾಯದಲ್ಲಿ ವಿಚ್ಛೇದನ ಪ್ರಮಾಣವು ಉಳಿದ ಸಮುದಾಯಗಳಿಗಿಂತ ಅತೀ ಕಡಿಮೆ ಪ್ರಮಾಣದಲ್ಲಿದೆ. ಮುಸ್ಲಿಮ್ ಸಮುದಾಯದಲ್ಲಿ ಬೇರೆ ರೀತಿಯ ಅನೇಕ ಸಮಸ್ಯೆಗಳಿವೆ ಅವುಗಳನ್ನು ಬಗೆಹರಿಸಲು ಸರಕಾರ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಜೆರುಸಲೇಂ ಅನ್ನು ಇಸ್ರೇಲ್ ರಾಜಧಾನಿಯಾಗಿ ಘೋಷಿಸಿ, ತನ್ನ ರಾಯಭಾರಿ ಕಚೇರಿಯನ್ನು ಅಲ್ಲಿಗೆ ಸ್ಥಳಾಂತರಿಸುವುದಾಗಿ ಕೈಗೊಂಡ ನಿರ್ಧಾರಕ್ಕೆ ಇಡೀ ವಿಶ್ವದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಯಿತು. ಇಂದಿಗೂ ಹಲವಾರು ಪ್ರತಿಭಟನೆಗಳು ಮುಂದುವರೆದಿವೆ. ಇದೊಂದು ಭಾವನಾತ್ಮಕವಾದ ವಿಷಯ ಎಂದು ಜಲಾಲುದ್ದೀನ್ ಉಮರಿ ಹೇಳಿದರು.
ಆದರೆ, ದುರಾದೃಷ್ಟದ ಸಂಗತಿ ಎಂದರೆ ಸೌದಿ ಆಡಳಿತಗಾರರು ಈ ವಿಚಾರದಲ್ಲಿ ಅಮೆರಿಕಾದ ಮೂಗಿನ ನೇರಕ್ಕೆ ನಡೆಯುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ಸುಮಾರು 35 ವರ್ಷಗಳ ಹಳೆಯ ಪ್ರಕರಣಗಳನ್ನು ಕೆದಕಿ ಜಮಾತೆ ಇಸ್ಲಾಮಿ ಸಂಘಟನೆಯ ಪದಾಧಿಕಾರಿಗಳನ್ನು ನೇಣುಗಂಬಕ್ಕೆ ಏರಿಸಲಾಗುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನ್ಯಾಯಾಧೀಕರಣದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ ಎಂದು ಅವರು ತಿಳಿಸಿದರು.
ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಮರ ಮತಗಳು ಹಂಚಿ ಹೋಗುವುದನ್ನು ತಡೆಯಲು ಮುಸ್ಲಿಮರ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮುನ್ನ ವಾಸ್ತವ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಯನ್ನು ಮಾತ್ರ ಕಣಕ್ಕಿಳಿಸಿ, ಉಳಿದವರು ಬೆಂಬಲ ನೀಡುವುದು ಉತ್ತಮ ಎಂದು ಜಲಾಲುದ್ದೀನ್ ಉಮರಿ ಹೇಳಿದರು.
ಈ ಸಂದರ್ಭದಲ್ಲಿ ಜಮಾತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಅತರುಲ್ಲಾ ಶರೀಫ್, ಬೆಂಗಳೂರು ಮೆಟ್ರೋ ವಿಭಾಗದ ಅಧ್ಯಕ್ಷ ಡಾ.ಸಾದ್ ಬೆಳಗಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.