ಅಂಧರ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತೀಯ ತಂಡದ ಬಗ್ಗೆ ಸಚಿನ್ ಹೇಳಿದ್ದೇನು ?

Update: 2018-01-21 08:39 GMT

ಮುಂಬೈ, ಜ.21: ಎರಡನೇ ಬಾರಿ ಅಂಧರ ವಿಶ್ವಕಪ್ ಜಯಿಸಿದ ಭಾರತದ ಅಂಧರ ಕ್ರಿಕೆಟ್ ತಂಡವನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅಭಿನಂದಿಸಿದ್ದಾರೆ.

ಪಾಕಿಸ್ತಾನ ವಿರುದ್ಧ ಎರಡು ವಿಕೆಟ್ ಗಳ ಅಂತರದಲ್ಲಿ ಜಯ ಗಳಿಸಿ ಟ್ರೋಫಿ ಎತ್ತಿರುವ  ಭಾರತ ತಂಡವನ್ನು ಅಭಿನಂದಿಸಿರುವ ಸಚಿನ್ ಅವರು, "ನಮ್ಮ ದೃಢ ನಿರ್ಧಾರದ ಮೂಲಕ ಎಲ್ಲವನ್ನು ಪಡೆಯಲು ಸಾಧ್ಯ  ಎನ್ನುವುದನ್ನು ಸಾಬೀತು ಮಾಡಿದ್ದೀರಿ. ಅಂಧರ ಕ್ರಿಕೆಟ್ ವಿಶ್ವಕಪ್ ಜಯಿಸಿದ ಭಾರತದ ಕ್ರಿಕೆಟ್ ತಂಡದ ಎಲ್ಲರಿಗೂ  ನನ್ನ ಅಭಿನಂದನೆಗಳು’’ ಎಂದು ಟ್ವೀಟ್ ಮಾಡಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನ ಮಂತ್ರಿ ನರೆಂದ್ರ ಮೋದಿ ವಿಶ್ವಕಪ್ ಗೆದ್ದ ಭಾರತದ ಅಂಧರ ತಂಡವನ್ನು ಅಭಿನಂದಿಸಿದ್ದಾರೆ. ಪ್ರಧಾನಿ ಮೋದಿ ತಮ್ಮ ಅಭಿನಂದನಾ ಸಂದೇಶದಲ್ಲಿ, ವಿಶ್ವಕಪ್ ಗೆಲ್ಲುವ ಮೂಲಕ ಇಡೀ ದೇಶಕ್ಕೆ ಹೆಮ್ಮೆ ತಂದಿರುವುದಾಗಿ ತಿಳಿಸಿದ್ದಾರೆ.  ಶಾರ್ಜಾದಲ್ಲಿ ಶನಿವಾರ ನಡೆದ  ಅಂಧರ ವಿಶ್ವಕಪ್ ಫೈನಲ್ ನಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ವಿಶ್ವಕಪ್ ಜಯಿಸಿತ್ತು. 

ಗೆಲುವಿಗೆ 309 ರನ್ ಗಳ ಸವಾಲನ್ನು  ಪಡೆದ  ಭಾರತ ಎಂಟು ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಗಳಿಸಿ  ಎರಡು ವಿಕೆಟುಗಳ ಅಂತರದ ರೋಚಕ ಗೆಲುವು ದಾಖಲಿಸಿತ್ತು.ಸುನೀಲ್ ರಮೇಶ್ ಔಟಾಗದೆ 78 ಮತ್ತು ಅಜಯ್ ರೆಡ್ಡಿ 63 ರನ್ ಗಳಿಸಿದ್ದರು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 40 ಓವರ್ ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 308 ರನ್ ಗಳಿಸಿತ್ತು.  ಬದರ್ ಮುನೀರ್  57 ರನ್, ರಿಯಾಸತ್ ಖಾನ್ 48ರನ್ ಮತ್ತು ನಿಸಾರ್ ಅಲಿ 47 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News