ಪ್ರವಾಸಕ್ಕೆ ಕರೆದೊಯ್ದು ಅತ್ಯಾಚಾರ : ಪ್ರಿಯಕರನ ವಿರುದ್ಧ ದೂರು

Update: 2018-01-21 14:32 GMT

ಬೆಂಗಳೂರು, ಜ.21: ಪ್ರವಾಸಕ್ಕೆ ಕರೆದೊಯ್ದು ಪ್ರಿಯಕರ ಅತ್ಯಾಚಾರ ನಡೆಸಿ ಈಗ ಬೆದರಿಕೆ ಹಾಕುತ್ತಿದ್ದಾನೆ ಎಂದು ಯುವತಿಯೊಬ್ಬಳು ಎಚ್‌ಎಎಲ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಈಗ ಪೊಲೀಸರು ಆರೋಪಿ ದಿನೇಶ್ ಎಂಬವನ ಪತ್ತೆಗೆ ಹುಡುಕಾಟ ನಡೆಸಿದ್ದು, ಘಟನೆ ನಡೆದಿದ್ದ ಮುರುಡೇಶ್ವರ ಠಾಣೆಗೆ ಪ್ರಕರಣ ವರ್ಗಾಯಿಸಲು ಚಿಂತನೆ ನಡೆದಿದೆ.

ನಗರದ ಎಂಎನ್‌ಸಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ದಿನೇಶ್ ಮತ್ತು ಸಂಜನ(ಹೆಸರು ಬದಲಿಸಲಾಗಿದೆ) ಸ್ನೇಹಿತರಾಗಿದ್ದು, ಇತ್ತೀಚೆಗೆ ಅವರ ನಡುವೆ ಪ್ರೇಮಾಂಕುರವಾಗಿತ್ತು. ಇತ್ತೀಚೆಗೆ ಇವರು ಪ್ರವಾಸಕ್ಕೂ ಹೋಗಿ ಬಂದಿದ್ದರು. ನಂತರ ಈಗ ಯುವತಿ ಪ್ರಿಯಕರ ನನ್ನನ್ನು ಯಾಮಾರಿಸಿ ಬೇರೊಂದು ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ ಮತ್ತು ಮುರುಡೇಶ್ವರಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನನ್ನನ್ನು ಪ್ರೀತಿಸಿರುವುದಾಗಿ ಹಾಗೂ ಮದುವೆಯಾಗುವುದಾಗಿ ನಂಬಿಸಿ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಕರೆದೊಯ್ದಿದ್ದ. ಬಸ್ ಮಿಸ್ ಆಯಿತೆಂದು ಅಲ್ಲೇ ಉಳಿದುಕೊಳ್ಳಲು ನಿರ್ಧರಿಸಿದೆವು. ಈ ವೇಳೆ ಎಳನೀರಿನೊಳಗೆ ಏನೋ ಮಿಕ್ಸ್ ಮಾಡಿ ಕುಡಿಸಿ ನಂತರ ಅತ್ಯಾಚಾರ ನಡೆಸಿದ್ದಾನೆ. ಎಚ್ಚರಗೊಂಡಾಗ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಗೊತ್ತಾಗಿ ಅಸಮಾಧಾನಗೊಂಡಿದ್ದೆ. ನಂತರ ಮದುವೆಯಾಗುವುದಾಗಿ ಮನವೊಲಿಸಿದ್ದ. ಇತ್ತೀಚೆಗೆ ನಿನ್ನ ಜೊತೆ ಮಾತನಾಡಬೇಕು ಎಂದು ಹೇಳಿ ಮಡಿಕೇರಿಗೆ ಕರೆದೊಯ್ದು ಅಲ್ಲೂ ಅತ್ಯಾಚಾರ ನಡೆಸಿದ್ದಾನೆ. ಅದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ನಂತರ ನನ್ನ ಜೊತೆ ಅಸಭ್ಯವಾಗಿ ವರ್ತಿಸಲಾರಂಭಿಸಿದ್ದ ಎಂದು ಆರೋಪಿಸಿದ್ದಾಳೆ.

ನೀನು ಏನಾದರೂ ಈ ವಿಷಯ ಬಾಯ್ಬಿಟ್ಟರೆ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ ನಂತರ ನಿನ್ನ ತಾಯಿ-ತಂದೆಗೂ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿದ್ದಾಳೆ. ಈ ಸಂಬಂಧ ದಿನೇಶ್ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತೆ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News