ಕನ್ನಡ ವಾತಾವರಣ ನಿರ್ಮಾಣ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಜ.22: ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿಗೆ ಯಾರೇ ಅಡ್ಡ ಬಂದರೂ ಸಹಿಸಲ್ಲ, ಅದನ್ನು ನಿವಾರಿಸುವ ಶಕ್ತಿ ನಮ್ಮಲ್ಲಿದೆ. ಕನ್ನಡದ ವಾತಾವರಣ ನಿರ್ಮಾಣವೇ ನಮ್ಮ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸೋಮವಾರ ನಗರದ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶತಮಾನೋತ್ಸವ ಭವನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಹಿಂದೆ ನಾನು ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿದ್ದೆ. ನಾನು ಸಾಹಿತಿಯಲ್ಲ. ಆದರೆ ನಾಡು, ನುಡಿಯ ಬಗ್ಗೆ ಅಭಿಮಾನವಿದೆ. ನಮ್ಮ ಸಂಸ್ಕೃತಿಗೆ ಯಾರೇ ಅಡ್ಡ ಬಂದರೂ ಸಹಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಭಾಷೆಯ ಬಗ್ಗೆ ಅಭಿಮಾನ ಇಲ್ಲದೇ ಇದ್ದರೆ ನಾವು ಕನ್ನಡಿಗರೇ ಅಲ್ಲ ಎಂದರು. ತಮಿಳುನಾಡು, ಕೇರಳ, ಆಂಧ್ರದಲ್ಲಿರುವಂತೆ ಯಾರೇ ಇಲ್ಲಿಗೆ ಬಂದರೂ ಕನ್ನಡ ಕಲಿಯಬೇಕು. ಕನ್ನಡ ಕಲಿಯದೇ ಬದುಕುವುದು ನೋವಿನ ವಿಚಾರ. ಸಾಹಿತ್ಯ ಪರಿಷತ್ತು ಕೂಡಾ ಈ ನಿಟ್ಟಿನಲ್ಲಿ ಕೆಲಸ ಮಾಡಲಿ. ಕನ್ನಡದ ವಾತಾವರಣ ನಿರ್ಮಾಣ ಮಾಡಲು ಕನ್ನಡ ನಾಡಿನಲ್ಲಿ ಪ್ರತಿಯೊಬ್ಬರೂ ಕನ್ನಡ ಕಲಿಯಬೇಕು. ಅದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡಿಗರೆಲ್ಲರೂ ಶ್ರಮಿಸಬೇಕು ಎಂದು ಹೇಳಿದರು.
ಸಂತಸ ತಂದಿದೆ: ಕನ್ನಡ ಸಾಹಿತ್ಯ ಪರಿಷತ್ತು ನೂರು ವರ್ಷ ಪೂರೈಸಿರುವ ಸಂದರ್ಭದಲ್ಲಿ ಅದರ ಸ್ಮರಣಾರ್ಥ ಭವನ ನಿರ್ಮಾಣ ಮಾಡಲು ಮನವಿ ಮಾಡಿದ್ದರು. ಸರಕಾರದಿಂದ ಐದು ಕೋಟಿ ರೂ. ಮಂಜೂರು ಮಾಡಿ ಶಂಕುಸ್ಥಾಪನೆಯನ್ನೂ ಮಾಡಿದ್ದೆ. ಇಂದು ಅದರ ಉದ್ಘಾಟನೆ ಮಾಡುತ್ತಿದ್ದೇನೆ. ಇದು ನನಗೆ ಇಮ್ಮಡಿ ಸಂತೋಷ ತಂದಿದೆ. ಇಂತಹ ಅವಕಾಶ ಸಿಗುವುದು ಅಪರೂಪ. ಅತ್ಯಂತ ಸಂತೋಷದಿಂದ ಹೊಸ ಶತಮಾನೋತ್ಸವ ಭವನವನ್ನು ಲೋಕಾರ್ಪಣೆ ಮಾಡುತ್ತಿದ್ದೇನೆ ಎಂದರು.
ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಇನ್ನೂ ಹೆಚ್ಚು ಕ್ರಿಯಾಶೀಲವಾಗಲಿ ಎಂದು ಹಾರೈಸುತ್ತೇನೆ. ಇದು ಆರೂವರೆ ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಕನ್ನಡ ಜನರನ್ನು ಪ್ರತಿನಿಧಿಸುವ ಸಂಸ್ಥೆ. ನಮ್ಮ ಭಾಷೆ, ಸಂಸ್ಕೃತಿಯನ್ನು ಬೆಳೆಸುವ ಸಂಸ್ಥೆ. ಅದಕ್ಕೆ ಸರಕಾರ ಎಲ್ಲ ರೀತಿಯ ಬೆಂಬಲ ನೀಡುತ್ತದೆ.
ಇಲ್ಲಿಯವರೆಗೂ ಸಾಹಿತ್ಯ ಪರಿಷತ್ತು ಏನು ಕೇಳಿದರೂ ಇಲ್ಲ ಎಂದಿಲ್ಲ. ನಾನು ಹಣಕಾಸು ಮಂತ್ರಿಯಾಗಿದ್ದಾಗ ಪರಿಷತ್ತಿನ ಸಿಬ್ಬಂದಿಗೆ ವೇತನ ನೀಡಲು ಅನುದಾನ ಕೋರಿದರು. ಕೂಡಲೇ ಮಂಜೂರು ಮಾಡಿದೆ. ಈಗ ಸರಕಾರ ವರ್ಷಕ್ಕೆ 15 ಕೋಟಿ ರೂ.ಭರಿಸುತ್ತಿದೆ. ಜನಹಿತ ಇರುವ ಸಾಹಿತ್ಯ ರಚನೆಯಾಗಲಿ ಎನ್ನುವುದು ನನ್ನ ಆಸೆ. ಸಾಹಿತ್ಯದಲ್ಲಿ ಸಮಾಜದ ಹಿತಾಸಕ್ತಿ ಅಡಗಿರಬೇಕು. ಆಗ ಮಾತ್ರ ಒಳ್ಳೆಯ ಸಾಹಿತ್ಯ ನಿರ್ಮಾಣ ಆಗಲು ಸಾಧ್ಯ ಎಂದರು.
ನಾಡು, ನುಡಿ, ನೆಲ, ಜಲಕ್ಕೆ ಯಾವ ಕಾರ್ಯಕ್ರಮ ಹಮ್ಮಿಕೊಂಡರೂ ಎಲ್ಲ ಚಟುವಟಿಕೆಗಳಿಗೆ ಸರಕಾರ ಸಹಾಯ ನೀಡುತ್ತದೆ ಎಂಬ ಭರವಸೆ ನೀಡಿದರು. ಜನರ ಹಿತ ಇದ್ದಲ್ಲಿ ಅಧಿಕಾರಿಗಳು ಉಂಟು ಮಾಡುವ ತೊಂದರೆಗಳನ್ನು ನಿವಾರಿಸುವ ಶಕ್ತಿ ಚುನಾಯಿತ ಪ್ರತಿನಿಧಿಗಳಿಗಿದೆ ಎಂದು ಸಿದ್ಧರಾಮಯ್ಯ ತಿಳಿಸಿದರು.
ಕನ್ನಡ ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮಾತನಾಡಿ, ಈ ಹಿಂದೆ ಕನ್ನಡ ಸಂಸ್ಕೃತಿ ಇಲಾಖೆಗೆ ಕಡಿಮೆ ಅನುದಾನ ನೀಡಲಾಗುತ್ತಿತ್ತು. ಕಳೆದ ಸಾಲಿನಲ್ಲಿ ಹತ್ತು ಕೋಟಿಗೆ ಏರಿಕೆ ಮಾಡಿ ಇಲಾಖೆಯ ಕೈ ಬಲಪಡಿಸಿದ್ದಾರೆ. ಕನ್ನಡ, ಸಂಸ್ಕೃತಿ, ಸಾಹಿತ್ಯ, ಕಲಾವಿದರಿಗೆ ಸಮಸ್ಯೆ ಎದುರಾದಾಗ ಮುಖ್ಯಮಂತ್ರಿಗಳು ಸಕಾರಾತ್ಮಕ ಸ್ಪಂದನೆ ಮಾಡಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್ ಸೇರಿದಂತೆ ಪ್ರಮುಖರಿದ್ದರು.
ವೃಂದ ಮತ್ತು ನೇಮಕಾತಿ ನಿಯಮಾವಳಿ (ಸಿ ಅಂಡ್ ಆರ್) ನಿಯಮಾವಳಿಗಳು ಧಾರವಾಡದ ವಿದ್ಯಾವರ್ಧಕ ಸಂಘ, ರಾಮನಗರದ ಜಾನಪದ ಪರಿಷತ್ತಿಗೆ ಅನ್ವಯಿಸುತ್ತಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗೆ ಈ ನಿಯಮಾವಳಿ ಅನ್ವಯ ಮಾಡಲು ಮನು ಬಳಿಗಾರ್ ಮನವಿ ಮಾಡಿದ್ದಾರೆ. ಈ ಕುರಿತು ಕ್ರಮ ತೆಗೆದುಕೊಳ್ಳಲು ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಸೂಚಿಸಿದ್ದೇನೆ.
-ಸಿದ್ಧರಾಮಯ್ಯ ಮುಖ್ಯ ಮಂತ್ರಿನಿದ್ರೆಗೆ ಜಾರಿದ ಸಿಎಂ:
ಕನ್ನಡ ಸಾಹಿತ್ಯ ಪರಿಷತ್ನ ಶತಮಾನೋತ್ಸವ ಕಟ್ಟಡದ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಸಾಪ ಅಧ್ಯಕ್ಷ ಮನು ಬಳಿಗಾರ್ ಭಾಷಣದ ವೇಳೆ ನಿದ್ರೆಗೆ ಜಾರಿದರು. ಈ ಸಂದರ್ಭದಲ್ಲಿ ಸಿಎಂ ಕನ್ನಡಕ ನೆಲಕ್ಕೆ ಬಿತ್ತು. ಬಳಿಕ ದಿಢೀರ್ ಎಚ್ಚರಗೊಂಡು ಕನ್ನಡಕ ಎತ್ತಿಕೊಂಡರು.