ಊರ ಹಬ್ಬ-ಜಾತ್ರೆ: ಮದ್ಯ ಮಾರಾಟ ನಿಷೇಧ
ಬೆಂಗಳೂರು, ಜ. 22: ಇಲ್ಲಿನ ಆಗ್ನೇಯ ವಿಭಾಗದ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಊರ ಹಬ್ಬ ಹಾಗೂ ಜಾತ್ರೆ ಪಲ್ಲಕ್ಕಿ ಉತ್ಸವದ ಹಿನ್ನೆಲೆಯಲ್ಲಿ ಜ.24ರ ಸಂಜೆ 4ಗಂಟೆಯಿಂದ ಜ.25ರ ಮಧ್ಯಾಹ್ನ 12ಗಂಟೆ ವರೆಗೆ ಆಡುಗೋಡಿ, ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಉತ್ಸವಕ್ಕೆ ವಿವಿಧೆಡೆಗಳಿಂದ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆಯಿದ್ದು, ಸಮಾಜ ಘಾತುಕ ಶಕ್ತಿಗಳು, ರೌಡಿಗಳು ಹಾಗೂ ಕೆಲವರು ಮದ್ಯಪಾನ ಮಾಡಿ ಕಾನೂನು ಸುವ್ಯವಸ್ಥೆಗೆ ತೊಂದರೆ ಕೊಡುವ ಸಾಧ್ಯತೆಗಳಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮದ್ಯದಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲ ಮದ್ಯದಂಗಡಿಗಳು ಹಾಗೂ ಕೋರಮಂಗಲ ಠಾಣಾ ವ್ಯಾಪ್ತಿಯ ಡ್ರಾಪ್ಸ್ ವೈನ್ಸ್, ರೆಡ್ಡಿ ವೈನ್ಸ್, ಮಂಜುನಾಥ್ ಬಾರ್ ಆ್ಯಂಡ್ ರೆಸ್ಟೋರೆಂಟ್, ಮೂಕಾಂಬಿಕ ಬಾರ್ ಆ್ಯಂಡ್ ರೆಸ್ಟೋರೆಂಟ್ ಮೇಲ್ಕಂಡ ದಿನಾಂಕದಂದು ಮುಚ್ಚಬೇಕು ಎಂದು ಸುನೀಲ್ಕುಮಾರ್ ಆದೇಶದಲ್ಲಿ ಸೂಚಿಸಿದ್ದಾರೆ.