ಈಗೆಲ್ಲ ಸುಲಭ

Update: 2018-01-27 18:40 GMT

ಗಾಂಧೀ, ಮಾರ್ಕ್ಸ್, ಬುದ್ಧ,

ಬಸವ, ಬಾಬಾಸಾಹೇಬ್,

ಗೋಡ್ಸೆ, ಕ್ರಿಸ್ತ, ಹಿಟ್ಲರ್

ಇವರಲ್ಲಿ ಒಬ್ಬರ ಫೋಟೊ

ಕತ್ತಿಗೆ ನೇತುಹಾಕಿಕೋ.

ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟ್,

ಸಮಾಜವಾದಿ ಯಾವುದೋ ಒಂದು

ಪಕ್ಷಕ್ಕೆ ಜೋತು ಬಿದ್ದುಕೋ

ತಲೆಯಲ್ಲಿ ವೈದಿಕ, ದಲಿತ, ಮುಸ್ಲಿಂ, ಲಿಂಗಾಯತ

ಇತ್ಯಾದಿ ವೈಷಮ್ಯದ ಮಂಕುಬೂದಿ ತುಂಬಿಕೊ

ಸ್ವಪಕ್ಷೀಯ, ಸ್ವಜಾತಿ ಜನ ಮಾಡಿದ ಕೊಲೆಗಳು

ರಾಷ್ಟ್ರ ಹಿತಕ್ಕೆ ಮಾಡಿದ ಬಲಿದಾನ ಅನ್ನು

ವಿರೋಧಿಗಳು ಮಾಡಿದ್ದೆಲ್ಲ ಹತ್ಯಾಕಾಂಡ ಅನ್ನು

ನಿಮ್ಮವರು ಮಾಡಿದ ಕಳ್ಳತನ ಹಾದರ ಎಲ್ಲಾ ದೇಶ ಸೇವೆ

ವಿರೋಧಿಗಳು ಮಾಡುವುದೆಲ್ಲ ವ್ಯಭಿಚಾರ

ಅಂತೆಲ್ಲ ಬಾಯಿ ಬಡಕೋ

ಆತ್ಮವನ್ನು ಕೊಲ್ಲು. ಆತ್ಮ ವಿಮರ್ಶೆಯ ಅಪಾಯದಿಂದ ಪಾರಾಗು.

ಬೇಗ! ಟೈಮ್ ವೆಸ್ಟ್ ಬೇಡ. ಚುನಾವಣೆ ಬಂತು ರೆಡಿಯಾಗು

ಭಜನಾ ಮಂಡಳಿಗಳಿಗೆ ಈಗ ಡಿಮ್ಯಾಂಡಪ್ಪೋ ಡಿಮಾಂಡು.

ಹಣ ಹೆಂಡ ಭರಪೂರ ಕೊಡುವ ಧಣಿಗಳ ಹಿಂಡು

ಕಟ್ಟು ಬಕೀಟುಗಳ ದಂಡು, ಹಾಕು ಎದುರಾಳಿಗೆ ಗುಂಡು.

ಈಗೆಲ್ಲ ಸುಲಭ. ಈಗ ಪ್ರಜ್ಞೆಯ ಕಿರಿಕಿರಿಯೇ ಇಲ್ಲ.

Writer - ಡಾ. ಬಸವರಾಜ ಇಟ್ನಾಳ್

contributor

Editor - ಡಾ. ಬಸವರಾಜ ಇಟ್ನಾಳ್

contributor

Similar News