ವಿದೇಶದಲ್ಲಿ ಕೆಲಸದ ಆಮಿಷವೊಡ್ಡಿ ವಂಚಿಸುವ 13 ನಕಲಿ ಕಂಪೆನಿಗಳ ಪತ್ತೆ
ಬೆಂಗಳೂರು, ಜ.30: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ 13 ನಕಲಿ ಕಂಪೆನಿ ಹಾಗೂ ಏಜೆಂಟ್ಗಳನ್ನು ಪತ್ತೆ ಹಚ್ಚಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ತಿಳಿಸಿದರು.
ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಧ್ಯಕ್ಷತೆಯಲ್ಲಿ ಜ.10ರಂದು ನವದೆಹಲಿಯಲ್ಲಿ ನಡೆದ ‘ಪ್ರವಾಸಿ ಭಾರತೀಯ ದಿವಸ’ದ ಅಂಗವಾಗಿ ನಡೆದ ಸಭೆಯಲ್ಲಿ ಕೇಂದ್ರ ಸರಕಾರ 13 ನಕಲಿ ಕಂಪೆನಿಗಳ ಕುರಿತು ಮಾಹಿತಿ ನೀಡಿದೆ. ಇದರ ಸಂಪೂರ್ಣ ಮಾಹಿತಿಯನ್ನು ರಾಜ್ಯ ಗೃಹ ಇಲಾಖೆಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ವಿದೇಶಿ ಭವನ: ಕರ್ನಾಟಕದಿಂದ ವಿದೇಶಕ್ಕೆ ತೆರಳಿರುವಂತಹ ಕನ್ನಡಿಗರಿಗೆ ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳನ್ನು ನೀಡುವಂತಹ ಪ್ರತ್ಯೇಕ ವಿದೇಶಿ ಭವನವನ್ನು ಬೆಂಗಳೂರಿನಲ್ಲಿ ತೆರೆಯುವಂತೆ ಮನವಿ ಮಾಡಿಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಕೇಂದ್ರ ಸರಕಾರ ಭವನದ ನಿರ್ಮಾಣಕ್ಕೆ ಜಾಗ ನೀಡಿದರೆ ನಿರ್ಮಿಸುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಮಾತನಾಡುತ್ತೇನೆಂದು ತಿಳಿಸಿದರು.
ಉದ್ಯೋಗಾಸಕ್ತ ಮಹಿಳಾ ಅಭ್ಯರ್ಥಿಗಳನ್ನು ಕೆಲಸದ ನಿಮಿತ್ತ ವಿದೇಶಕ್ಕೆ ಕಳುಹಿಸುತ್ತಿರುವ ನೇಮಕಾತಿ ಸಂಸ್ಥೆಗಳು, ಆ ಹೆಣ್ಣು ಮಕ್ಕಳ ಹೆಸರಿನಲ್ಲಿ 2500 ಅಮೆರಿಕನ್ ಡಾಲರ್ನ್ನು ಠೇವಣಿಯನ್ನಾಗಿ ಇಡುವುದು ಕಡ್ಡಾಯಗೊಳಿಸಲಾಗಿದೆ. ಹಾಗೂ ವಿದೇಶಕ್ಕೆ ತೆರಳುವ ಯುವಕರಿಗೆ ಪೂರ್ವ ತರಬೇತಿಯನ್ನು ನೀಡುವ ನಿಟ್ಟಿನಲ್ಲಿ ಪ್ರವಾಸಿ ಕೌಶಲ್ ವಿಕಾಸ್ ಯೋಜನೆಯಡಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್ ಕಚೇರಿಯು ಚೆನ್ನೈನಲ್ಲಿದ್ದು, ಕರ್ನಾಟಕದಿಂದ ವಿದೇಶಗಳಿಗೆ ಉದ್ಯೋಗವನ್ನರಿಸಿ ಹೋಗುವ ಅಭ್ಯರ್ಥಿಗಳು ಚೆನ್ನೈಗೆ ತೆರಳಿ ಎಮಿಗ್ರೆಂಟ್ ತಿರುವಳಿ ಪತ್ರವನ್ನು ತೆಗೆದುಕೊಂಡು ತೆರಳಬೇಕಾಗಿರುತ್ತದೆ. ಆದುದರಿಂದ ಬೆಂಗಳೂರಿನ ಪಾಸ್ಪೋರ್ಟ್ ಕಚೇರಿಯಲ್ಲಿಯೇ ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್ ಕಚೇರಿಯನ್ನು ಆರಂಭಿಸುವಂತೆ ಕೇಂದ್ರ ಸರಕಾರಕ್ಕೆ ಕೋರಲಾಗಿದೆ ಎಂದು ಅವರು ಹೇಳಿದರು.
ನಕಲಿ ಕಂಪೆನಿಗಳು ಹಾಗೂ ಏಜೆಂಟರು
1. ಅಸೀಫ್ ಮತ್ತು ಮುಹಮ್ಮದ್ ಅಮೀದ್
2. ಮುಹಮ್ಮದ್ ಅಸೀಫ್ ಮತ್ತು ಮುಹಮ್ಮದ್ ಅಬೀದ್, ಆರ್.ಟಿ.ನಗರ ಬೆಂಗಳೂರು
3. ಬಿಗ್ ಜಾಬ್ಸ್ ಕನ್ಸಲ್ಟೆಂನ್ಸಿ
4. ಐಒಸಿಎಸ್ ಗ್ರೂಪ್
5. ಬೊನಫೀಲ್ಡ್ ಟ್ರಸ್ಟ್ ಆಫ್ ಇಂಡಿಯಾ, ಜೆಪಿ ನಗರ
6. ಸುರಿಯ ಎಚ್ಆರ್ಎಸ್ ಫೆಸಲಿಟಿ ಮ್ಯಾನೇಜ್ಮೆಂಟ್ ಸರ್ವಿಸ್ ಲಿ. ಸಾಯಿಬಾಬ ಕಂಪೆನಿ, ಬೆಂಗಳೂರು
7. ಎಸಿಇ ಮ್ಯಾನೇಜ್ಮೆಂಟ್ ಸರ್ವಿಸ್, ಪಂಪ್ವೆಲ್, ಮಂಗಳೂರು
8. ಬಿಜು ವೆಲ್ಲು ಎಜುಕೇಶನ್ ಅಂಡ್ ಕನ್ಸಲ್ಟೆಂನ್ಸಿ, ಯಲಹಂಕ ಬೆಂಗಳೂರು
9. ಒಪ್ಟಿಮ, ಸಿಟಿ ಬಸ್ಸ್ಟಾಂಡ್ ಉಡುಪಿ
10. ಯತೀಂದರ್ ಗೌಡ ಮತ್ತು ಭವ್ಯಾ ಯತೀಂದರ್, ಎಚ್ಎಸ್ಆರ್ ಲೇಔಟ್, ಬೆಂಗಳೂರು
11. ಶ್ರೀಗೋವಿಂದನ್ ಸೇರಿ 8 ಮಂದಿ ಕಾನೂನು ಬಾಹಿರ ಏಜೆಂಟರು