ಬಿಜೆಪಿ ಆರೋಪಕ್ಕೆ ತಿರುಗೇಟು ನೀಡುವುದನ್ನು ರೂಢಿಸಿಕೊಳ್ಳಿ : ಕಾಂಗ್ರೆಸ್ ನಾಯಕರಿಗೆ ಸಿಎಂ ಕರೆ

Update: 2018-01-31 15:08 GMT

ಬೆಂಗಳೂರು, ಜ.31: ಬಿಜೆಪಿ ಸಂಸದರಾದ ಪ್ರತಾಪ್‌ಸಿಂಹ, ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಬಾಯಿಗೆ ಬಂದ ಹಾಗೇ ಮಾತನಾಡುತ್ತಾರೆ. ಆದರೆ, ನಮ್ಮಲ್ಲಿ ಅವರ ಹೇಳಿಕೆಗಳಿಗೆ ಸೂಕ್ತ ತಿರುಗೇಟು ನೀಡುತ್ತಿಲ್ಲ. ನಿಮ್ಮ ಮೃದು ಭಾಷಣಕ್ಕೆ ಕಡಿವಾಣ ಹಾಕಿ. ಅವರಿಗೆ ತಿರುಗೇಟು ನೀಡುವುದನ್ನು ರೂಢಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಲಾಗಿದ್ದ ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರು ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿ ಹಿಂದುತ್ವ ವಿಚಾರಗಳನ್ನ ಪ್ರಚಾರ ಮಾಡುತ್ತಿದ್ದಾರೆ. ಆದರೆ, ನೀವು ಯಾಕೆ ಬಾಯಿ ಬಿಚ್ಚುವುದಿಲ್ಲ ಎಂದು ಗೊತ್ತಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐದು ವರ್ಷ ಅಧಿಕಾರದಲ್ಲಿ ಬರೀ ಜಗಳ, ಗಣಿ ಹಗರಣ, ಡಿನೋಟಿಫಿಕೇಷನ್ ಇದೇ ಮಾಡಿಕೊಂಡು ಪರಸ್ಪರ ಕಾಲ ಕಳೆದ ಬಿಜೆಪಿಯವರು, ಈಗ ನಮ್ಮ ವಿರುದ್ಧ ಕೇವಲ ಆರೋಪಗಳನ್ನು ಮಾಡುತ್ತಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ಎಷ್ಟು ಜನ ಮುಖಂಡರು ಅವರ ವಿರುದ್ಧ ಮಾತನಾಡಿದ್ದೀರಿ. ಯಾಕೆ ನಿಮಗೆ ಭಯಾನಾ?, ಪ್ರಧಾನಿ ನರೇಂದ್ರ ಮೋದಿಯ ಜನ ವಿರೋಧಿ ಕೆಲಸಗಳ ಬಗ್ಗೆ ಹೇಳಲಿಕ್ಕೆ ಆಗುವುದಿಲ್ಲವೇ ಎಂದು ಕೆಲ ನಾಯಕರನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಜೆಪಿಯ ಹಿಂದುತ್ವದ ಬಗ್ಗೆ ಹುಷಾರಾಗಿರಿ, ಅವರ ಸುಳ್ಳುಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಿ, ಆರ್ಯ, ಕ್ಷತ್ರಿಯ, ವೈಶ್ಯ, ಶೂದ್ರ ಹೀಗೆ ಜನರನ್ನು ವಿಂಗಡಿಸಿದ್ದು ಯಾರು? ಮುಹಮ್ಮದ್ ಪೈಂಗಂಬರಾ? ಏಸು ಕ್ರಿಸ್ತನಾ? ಅಲ್ಲ. ಇವರುಗಳೇ ಸಮಾಜವನ್ನು ಒಡೆದವರು ಎಂದು ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಬಶೀರ್ ಕೊಲೆಯಾಗಿದ್ದು ಒಳ್ಳೆಯದು ಅಂತಾರೆ, ದೀಪಕ್‌ ರಾವ್ ಕೊಲೆಯನ್ನು ಖಂಡಿಸುತ್ತಾರೆ. ಸಮಾಜವನ್ನು ಒಡೆಯುವ ಕೆಲಸವನ್ನು ಹಿಂದೆಯೂ ಮಾಡಿದ್ದಾರೆ. ಈಗಲೂ ಮುಂದುವರೆಸಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿ, ಪಕ್ಷ ಸಂಘಟಿಸಿ, ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಹಿಂದುತ್ವದ ಹೆಸರಿನಲ್ಲಿ ಜನರ ಹಾದಿ ತಪ್ಪಿಸುವ ಸಾಧ್ಯತೆಯಿದೆ. ಸಮಾಜದ ತಳ ಸಮುದಾಯದಿಂದ ಎಲ್ಲರನ್ನೂ ಒಂದೇ ಎನ್ನುತ್ತಾ ಬಂದವರು ನಾವು. ಇದನ್ನು ಜನರಿಗೆ ತಿಳಿಸಿ, ಪ್ರಚಾರ ಮಾಡಲು ಸಮಿತಿ ಸದಸ್ಯರಿಗೆ, ಪದಾಧಿಕಾರಿಗಳಿಗೆ ಮುಖ್ಯಮಂತ್ರಿ ಕರೆ ನೀಡಿದ್ದಾರೆ.

ಸಂಘ ಪರಿವಾರ ಸೇರಿದಂತೆ ಬಲಪಂಥೀಯ ಸಂಘಟನೆಗಳು ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ರಾಜಕೀಯ ಲಾಭಕ್ಕಾಗಿ ಕೋಮುಗಲಭೆ ಸೃಷ್ಟಿಸಿ, ಸಮಾಜದ ನೆಮ್ಮದಿಗೆ ಭಂಗ ತರುವ ಪ್ರಯತ್ನಗಳು ನಡೆಯುತ್ತಿವೆ. ಈಗಾಗಲೆ ಕೋಮುಗಲಭೆಗಳಿಂದಾಗಿ ಹಲವಾರು ಮಂದಿಯ ಪ್ರಾಣ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತಿಯೊಂದು ಘಟನೆಯನ್ನೂ ಬಿಜೆಪಿ ರಾಜಕೀಕರಣಗೊಳಿಸಿ, ತನ್ನ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಇವರಿಗೆ ಸಮಾಜದ ಹಿತಕ್ಕಿಂತ ರಾಜಕಾರಣ ಮುಖ್ಯ. ಆದರೆ, ನಾವು ಸಮಾಜದ ಎಲ್ಲ ವರ್ಗಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮೂಲಕ ಸಮಾಜದ ಹಿತರಕ್ಷಣೆಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಪ್ರಚಾರ ಮಾಧ್ಯಮಗಳು ಸಾಕಷ್ಟು ಬದಲಾವಣೆಯಾಗಿವೆ. ಹಳೆ ತಲೆಮಾರು, ಹೊಸ ತಲೆಮಾರು ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಹೊಸ ತಲೆಮಾರು ಸಾಮಾಜಿಕ ಜಾಲತಾಣಗಳು ಮತ್ತು ಅಂತರ್ಜಾಲ ಮಾಧ್ಯಮದಿಂದ ಪ್ರಭಾವಿತವಾಗಿದ್ದರೆ, ಹಳೆಯ ತಲೆಮಾರು ಬಹಿರಂಗ ಸಭೆಗಳು, ಚರ್ಚಾಗೋಷ್ಠಿಗಳಿಗೆ ತಮ್ಮನ್ನು ಒಗ್ಗಿಸಿಕೊಂಡಿದೆ. ಹೀಗಾಗಿ ನಾವು ಎರಡೂ ತಲೆಮಾರುಗಳನ್ನು ಗಮನದಲ್ಲಿಟ್ಟುಕೊಂಡು ತಂತ್ರಗಾರಿಕೆಯನ್ನು ರೂಪಿಸಬೇಕು ಎಂದಿದ್ದಾರೆ.

ಐದು ವರ್ಷಗಳ ಅಧಿಕಾರಾವಧಿಯಲ್ಲಿ ನಮ್ಮ ಸರಕಾರ ಮಾಡಿರುವ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಸೂಕ್ತ ಪ್ರಚಾರ ಮಾಡಿದರೆ ಸಾಕು, ಮುಂದಿನ ಅವಧಿಗೆ ನಾವು ಮರಳಿ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವೇ ಇಲ್ಲ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ನಮ್ಮ ಸರಕಾರದ ವಿರುದ್ಧ ಮಾಡುವ ಅಪಪ್ರಚಾರಗಳಿಗೆ ಸೂಕ್ತ ಉತ್ತರ ಕೊಡಬೇಕು. ಇದು ಕೇವಲ ನನ್ನೊಬ್ಬನಿಂದ ಆಗುವುದಿಲ್ಲ. ಇಡೀ ಪಕ್ಷ ಇದಕ್ಕಾಗಿ ಕೆಲಸ ಮಾಡಬೇಕು. ನಮ್ಮ ನಡುವೆ ಯಾವುದೆ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಬದಿಗಿಟ್ಟು ಚುನಾವಣೆಯ ಯುದ್ಧ ಕಾಲದಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಮೂಲಕ ರಾಷ್ಟ್ರಮಟ್ಟದಲ್ಲೂ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವ ಕೈ ಬಲಪಡಿಸಬೇಕು ಎಂದು ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ರಾಜ್ಯಸಭಾ ಸದಸ್ಯರಾದ ಆಸ್ಕರ್ ಫರ್ನಾಂಡೀಸ್, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎಸ್.ಆರ್.ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News